ಕೇಂದ್ರ ಸರ್ಕಾರ ನ. 21ರಂದು ಜಾರಿಗೆ ತಂದಿರುವ ಕಾರ್ಮಿಕ ಯೋಜನೆಗಳು ಜನ ಹಾಗೂ ಸಮಸ್ತ ಕಾರ್ಮಿಕ ವಿರೋಧಿ ಆಗಿದೆ ಎಂದು ಆರೋಪಿಸಿ ತಾಲೂಕಿನ ಕುಮಾರಪಟ್ಟಣ ಎಚ್.ಪಿ.ಎಫ್. ಮತ್ತು ಗ್ರಾಸಿಮ್ ಕಾರ್ಖಾನೆಯ ನೌಕರರು ಕಂಪನಿಯ ಮುಖ್ಯದ್ವಾರದ ಎದುರು ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.
ರಾಣಿಬೆನ್ನೂರು: ಕೇಂದ್ರ ಸರ್ಕಾರ ನ. 21ರಂದು ಜಾರಿಗೆ ತಂದಿರುವ ಕಾರ್ಮಿಕ ಯೋಜನೆಗಳು ಜನ ಹಾಗೂ ಸಮಸ್ತ ಕಾರ್ಮಿಕ ವಿರೋಧಿ ಆಗಿದೆ ಎಂದು ಆರೋಪಿಸಿ ತಾಲೂಕಿನ ಕುಮಾರಪಟ್ಟಣ ಎಚ್.ಪಿ.ಎಫ್. ಮತ್ತು ಗ್ರಾಸಿಮ್ ಕಾರ್ಖಾನೆಯ ನೌಕರರು ಕಂಪನಿಯ ಮುಖ್ಯದ್ವಾರದ ಎದುರು ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಆನಂದರಾಜು ಕೆ.ಎಚ್. ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ನ. 21ರಂದು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಏಕಪಕ್ಷೀಯವಾಗಿ ಅನುಷ್ಠಾನ ಮಾಡಿದೆಯಲ್ಲದೆ ಶ್ರಮ ಸಂಹಿತೆ 2025 ಕರಡು ರೂಪಿಸಿದೆ. ಕೇಂದ್ರ ಸರ್ಕಾರದ ಜನ ವಿರೋಧಿ ನಡೆಯನ್ನು ಬಿಎಂಎಸ್ ಕಾರ್ಮಿಕ ಸಂಘಟನೆ ಹೊರತುಪಡಿಸಿ 10 ಕೇಂದ್ರ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ದೇಶದ ದುಡಿಯುವ ಜನರ ವಿರುದ್ಧ ಕೇಂದ್ರ ಸರ್ಕಾರ ಮಾಡಿರುವ ವಂಚನೆ ಇದಾಗಿದೆ. ಈ ಹಿಂದೆ ಕಾರ್ಮಿಕರಿಗೆ ಇದ್ದಂತಹ 8 ಗಂಟೆಯ ಕೆಲಸ ಈಗ 12 ಗಂಟೆಗೆ ಹೆಚ್ಚಿಸಲಾಗಿದೆ ಎಂದರು.ಎಚ್.ಪಿ.ಎಫ್. ನೌಕರರ ಸಂಘದ ಅಧ್ಯಕ್ಷ ವಿ.ಜೆ.ಕೆ. ನಾಯರ್ ಮಾತನಾಡಿ, ಕಾರ್ಮಿಕ ಸಂಹಿತೆಗಳು ಸಂಪೂರ್ಣ ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತದೆ. ಈ ಸಂಹಿತೆಗಳು ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮಾಲೀಕರ ಪರವಾಗಿವೆ. ಕೇಂದ್ರ ಸರ್ಕಾರ ತಕ್ಷಣವೆ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಮುದಿಮಲ್ಲನಗೌಡ, ಎಚ್ಪಿಎಫ್ ನೌಕರರ ಸಂಘದ ಮುಖಂಡರಾದ ಕೊಟ್ರೇಶ್ ಓಲೆಕಾರ್, ಮಂಜುನಾಥ ಎನ್., ಸತೀಶ, ಮಾರುತಿ, ಬಸವರಾಜು, ಗ್ರಾಸಿಂ ನೌಕರರ ಸಂಘದ ಮುಖಂಡರಾದ ಶಿವಪ್ಪ ಕೊಲ್ಕರ್, ದೇವರಾಜ್, ಮಂಜುನಾಥ ವೈ.ಆರ್. ಪ್ರತಿಭಟನೆಯಲ್ಲಿದ್ದರು.