ವಕ್ಫ್ ಬಿಲ್-2024 ತಿದ್ದುಪಡಿಗೆ ವಿರೋಧ

| Published : Sep 14 2024, 01:47 AM IST

ಸಾರಾಂಶ

ವಕ್ಫ್ ಬಿಲ್-2024 ತಿದ್ದುಪಡಿಗೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೊಪ್ಪಳ ತಹಸೀಲ್ದಾರ್‌ ಮೂಲಕ ಆಕ್ಷೇಪಣೆಯ ಮನವಿ ಸಲ್ಲಿಸಿ, ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಮಾಡಲಾಯಿತು.

ಕೊಪ್ಪಳ: ವಕ್ಫ್ ಬಿಲ್-2024 ತಿದ್ದುಪಡಿಗೆ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತಹಸೀಲ್ದಾರ್‌ ಮೂಲಕ ಆಕ್ಷೇಪಣೆಯ ಮನವಿ ಸಲ್ಲಿಸಿ, ಜಂಟಿ ಪಾರ್ಲಿಮೆಂಟ್ ಸಮಿತಿಗೆ ಹಕ್ಕೊತ್ತಾಯ ಮಾಡಲಾಯಿತು.ಸಮಿತಿಯ ಮುಖ್ಯಸ್ಥರು ಮನವಿ ಸಲ್ಲಿಸಿ ಮಾತನಾಡಿ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ್ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ವಕ್ಫ್ ಬಿಲ್ 2024 ತಂದಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗೆ ಇರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಹಿಡನ್ ಅಜೆಂಡಾ ಆಗಿದೆ. ಹಾಲಿ ಇರುವ ವಕ್ಫ್ ಕಾಯ್ದೆಗೆ ಸರಿಸುಮಾರು 40 ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ್ ಕಾಯ್ದೆಯನ್ನೇ ನಾಶಗೊಳಿಸಲು ಈ ವಕ್ಫ್ ಬಿಲ್ 2024 ತಂದಿರುವುದು. ಇದು ಜಾತ್ಯತೀತ ಮೌಲ್ಯಗಳ ವಿರುದ್ಧವಾಗಿದೆ ಹಾಗೂ ತಾರತಮ್ಯಗಳೊಂದಿಗೆ ಕೂಡಿದೆ. ಅದುದರಿಂದ ಈ ಬಿಲ್ ವಿರುದ್ಧ ತನ್ನ ವಿರೋಧ ವ್ಯಕ್ತಪಡಿಸುತ್ತಿದೆ. ಜಂಟಿ ಸಂಸದೀಯ ಸಮಿತಿಗೆ ಆಕ್ಷೇಪಣೆಗಳನ್ನು ಸಲ್ಲಿಸುತ್ತಿದೆ ಎಂದರು.

ಆಕ್ಷೇಪಣೆಗಳು: ನ್ಯಾಯ ಮಂಡಳಿಯು ನ್ಯಾಯಾಂಗ ವ್ಯವಸ್ಥೆಯ ಸಂಸ್ಥೆಯಾಗಿದ್ದು, ಈ ವಕ್ಫ್ ಬಿಲ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಹಿಂದೂಗಳಲ್ಲದ ಬೌದ್ಧರು, ಜೈನರು ಮತ್ತು ಸಿಬ್ಬರು ಇವರಿಗೂ ದೇವಸ್ಥಾನದ ಆಡಳಿತದ ಸದಸ್ಯತ್ವವನ್ನು ನಿಷೇಧಿಸಿರುವುದರಿಂದ, ಹಿಂದೂಗಳಿಗೆ ವಕ್ಫ್ ಮಂಡಳಿಯ ಸದಸ್ಯರಾಗಿ ಜವಾಬ್ದಾರಿ ನೀಡುವುದು ಸಂಪೂರ್ಣ ತಾರತಮ್ಯದಿಂದ ಕೂಡಿದೆ. ಭೂ ಪರಿವರ್ತನೆಗೆ ನೀಡಿರುವ 90 ದಿನಗಳ ಅವಧಿಯನ್ನು ವಕ್ಫ್ ಭೂಮಿಯ ಆಗಾಧತೆಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಅದು ಸಾಕಾಗದು. ಕಾನೂನಿನ ಉದ್ದೇಶವು ವಕ್ಫ್ ಭೂಮಿಯ ರಕ್ಷಣೆ ಎಂದಾಗಿರುವಾಗ, ಈ ದುರುದ್ದೇಶಿತ ಮಸೂದೆಯು ಮುಸಲ್ಮಾನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಸಾಲು ಸಾಲು ಕಾನೂನುಗಳ ಸಂದೇಶವನ್ನು ಸಾರುತ್ತಿದೆ. ಮುಸಲ್ಮಾನರು ಕೆಳ ದರ್ಜೆಯವರು ಎಂದು ಬಿಂಬಿಸಿ, ಅವರ ಮೇಲೆ ವಿವಿಧ ಅಸಮಾನ ಕಾನೂನುಗಳನ್ನು ಹೇರಲಾಗುತ್ತಿದೆ. ಈ ಬಗ್ಗೆ ಜಂಟಿ ಸಮಿತಿಯು ಸಕಾಲಿಕ ಮುಂಜಾಗರೂಕತೆಯನ್ನು ಪಾಲಿಸಿ, ಸಮಾಜದ ಹಾಗೂ ದೇಶದ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಎಸ್‌ಡಿಪಿಐ ಅಧ್ಯಕ್ಷ ಸಲೀಂ ಖಾದ್ರಿ, ಫಾರೂಕ್ ಅತ್ತಾರ, ಮಹ್ಮದ ಸಾದಿಕ್, ಅರ್ಷದ್‌ ಶೇಖ್ ಸೇರಿದಂತೆ ಅನೇಕರು ಇದ್ದರು.