ಕನ್ನಡಪ್ರಭ ವಾರ್ತೆ ಕಾರವಾರ

ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ನಿಲುವನ್ನು ತೀವ್ರವಾಗಿ ಖಂಡಿಸಿ, ಕಾರವಾರದ ಬಿಜೆಪಿ ನಗರ ಹಾಗೂ ಗ್ರಾಮೀಣ ಘಟಕಗಳ ವತಿಯಿಂದ ಶನಿವಾರ ನಗರದ ಪಕ್ಷದ ಕಚೇರಿಯಲ್ಲಿ ವಿಶೇಷ ಖಂಡನಾ ಸಭೆ ನಡೆಸಲಾಯಿತು.ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ್, ಕಾಂಗ್ರೆಸ್ ಪಕ್ಷದ ನಡೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ನಮ್ಮೆಲ್ಲರ ಬಹು ನಿರೀಕ್ಷೆಯಾಗಿದ್ದ ಮಹಿಳಾ ಮೀಸಲಾತಿ ಜಾರಿಯಾಗುತ್ತದೆ ಎಂಬ ಆಶಾಭಾವನೆ ಇತ್ತು. ಆದರೆ ಕಾಂಗ್ರೆಸ್ ನಾಯಕರು ಇದನ್ನು ವಿರೋಧಿಸುವ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಅನ್ಯಾಯ ಎಸಗಿದ್ದಾರೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮಹಿಳಾ ಸಬಲೀಕರಣದ ಕನಸನ್ನು ಭಗ್ನಗೊಳಿಸಿದ್ದಾರೆಎಂದು ಆರೋಪಿಸಿದರು.ಕಾಂಗ್ರೆಸ್ ಪಕ್ಷದ ಈ ಮಹಿಳಾ ವಿರೋಧಿ ನಡೆಯಿಂದ ನಮಗೆಲ್ಲರಿಗೂ ತೀವ್ರ ನೋವಾಗಿದೆ. ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡಿದ್ದಕ್ಕಾಗಿ ಮುಂದಿನ ದಿನಗಳಲ್ಲಿ ಅವರು ಇದರ ಪ್ರತಿಫಲವನ್ನು ಕಡ್ಡಾಯವಾಗಿ ಅನುಭವಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಮಹಿಳಾ ಮೀಸಲಾತಿಯ ಮಹತ್ವ ಹಾಗೂ ಅದರ ಕುರಿತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸವಿವರವಾಗಿ ಮಾತನಾಡಿದರು.ವೇದಿಕೆಯ ಮೇಲೆ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಪ್ರಮುಖರಾದ ರವಿರಾಜ್ ಅಂಕೋಲೇಕರ್, ವಂದನಾ, ನಯನಾ ನೀಲಾವರ್, ವೈಶಾಲಿ ಹಾಗೂ ಸುಜಾತಾ ಬಾಂದೇಕರ್ ಉಪಸ್ಥಿತರಿದ್ದರು.ಸಭೆಯಲ್ಲಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಉದಯ ನಾಯ್ಕ್ ಮತ್ತು ಸೂರಜ್ ದೇಸಾಯಿ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು. ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಸ್ವಾಗತಿಸಿ, ವಂದಿಸಿದರು.