ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಂಗಾಂಗ ದಾನದ ಮೂಲಕ ಇತರರ ಜೀವನದಲ್ಲಿ ಬೆಳಕು ಮೂಡಿಸುವುದು ಒಂದು ಪುಣ್ಯದ ಕಾರ್ಯವಾಗಿದೆ. ಪ್ರಸ್ತುತ ಅಂಗಾಂಗ ದಾನವು ಶ್ರೇಷ್ಠ ದಾನವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಅಂಗಾಂಗ ದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಧಾತೃ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗಾಂಗ ದಾನವು ಅತ್ಯಂತ ಶೇಷ್ಠ, ಮಾನವೀಯ ಕಾರ್ಯವಾಗಿದ್ದು, ಮರಣದ ನಂತರ ನಮಗೆ ಸಂಬಂಧಪಟ್ಟವರಿಗೆ ಮತ್ತು ನಾವು ತಿಳಿಸದವರೂ ನಮ್ಮ ಅಂಗಾಂಗದಲ್ಲಿ ಬೇಕಾದ ಅಂಗಾಂಗವನ್ನು ಅವಶ್ಯಕತೆ ಇರುವವರಿಗೆ ದಾನ ಮಾಡಿದಾಗ ಅದು ಮತ್ತೊಬ್ಬರಿಗೆ ಹೊಸ ಜೀವನ ನೀಡಬಲ್ಲದು ಎಂದರು.

ಹೃದಯ, ಮೂತ್ರಪಿಂಡ, ಯಕೃತ್ತು, ಶ್ವಾಸಕೋಶದಂತಹ ಅಂಗಾಗಳನ್ನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮರುಜೀವ ಸಿಗುತ್ತದೆ. ಇದು ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಸಾವಿನ ನಂತರವೂ ನಿಷ್ಪ್ರಯೋಜಕವಾಗುವ ಬದಲು ಜೀವಂತವಾಗಿರುವ ಅದ್ಭುತ ಅವಕಾಶವಾಗಿರುತ್ತದೆ ಎಂದರು.


ವಿದ್ಯಾರ್ಥಿಗಳು ಮರಣದ ನಂತರ ಇತರರಿಗೆ ದಾನ ಮಾಡುವ ಸಂಕಲ್ಪ, ನೋಂದಣಿ ಮಾಡಿಕೊಳ್ಳಬೇಕು. ಜೀವ ಉಳಿಸುವ ನಿಟ್ಟಿನಲ್ಲಿ ವೈದ್ಯರು ಪ್ರಯತ್ನ ಮಾಡುತ್ತಾರೆ. ಮರಣಾನಂತರ ನಮ್ಮ ದೇಹ ಸಾರ್ಥಕವಾಗಬೇಕಾಗಿದರೆ, ಇದಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನೊಟ್ಟೋ, ರಾಜ್ಯ ಮಟ್ಟದಲ್ಲಿ ಸೊಟ್ಟೋ ಇದ್ದು ಇಲ್ಲಿ ನಾವು ಬದುಕಿರುವಾಗ ನೋಂದಣಿ ಮಾಡಿಸಿಕೊಂಡಿರಬೇಕು ಎಂದರು.

ಬದುಕಿರುವಾಗ ಚೆನ್ನಾಗಿ ಬದುಕಬೇಕಿರಬೇಕು. ಮದ್ಯ-ಧೂಮಪಾನ, ಮಾದಕವಸ್ತುಗಳಿಂದ ದೂರವಿರಬೇಕು. ಮೊಬೈಲ್ ಬಳಕೆಯಿಂದಲ್ಲೂ ದೂರವಿರ ಬೇಕು, ನಶೆಮುಕ್ತ ಚಾಮರಾಜನಗರ ಮಾಡಬೇಕೆಂದು ಎಂದರು.

ದೇಶ ಹಾಗೂ ರಾಜ್ಯಾದ್ಯಂತ ಜಾಗೃತಿ ಮೂಡಿಸುವುದಕ್ಕಾಗಿಯೇ ಅಂಗಾಂಗ ದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದಾನ ಎನ್ನುವುದು ನಮ್ಮ ಪುರಾತನ ಕಾಲದಿಂದಲೂ ಇದ್ದು, ನಾವು ಹೊಸದೇನು ಮಾಡಬೇಕಾಗಿಲ್ಲ ಎಂದರು.

ಜಿಲ್ಲೆಯಲ್ಲೂ ವರ್ಷಕ್ಕೆ ೫ ರಿಂದ ೬ ಮಂದಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತಿದಿನ ಆರೋಗ್ಯವನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ಸನ್ನಿವೇಶದದಲ್ಲಿ ಅಂಗಾಂಗ ದಾನವು ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದಲೇ ರಾಜ್ಯ ಸರ್ಕಾರ ಸಾರ್ಥಕ ಜೀವನ ಎಂದು ಕರೆದಿದೆ ಎಂದರು.

ಜೆಎಸ್‌ಎಸ್ ಕಾಲೇಜು ಆಫ್ ನಸಿಂಗ್ ಕಾಲೇಜು ಪ್ರಾಂಶುಪಾಲ ಜಿ.ವಿನಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಅಂಕಪ್ಪ, ಜೆಎಸ್‌ಎಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ನವೀನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಭಾಗವಹಿಸಿದ್ದರು.