ಆಹಾರದ ಪೌಷ್ಟಿಕ ಭದ್ರತೆಗೆ ಸಾವಯವ ಕೃಷಿ ಅಗತ್ಯ: ಡಾ. ಪಾಟೀಲ

| Published : Apr 12 2025, 12:50 AM IST

ಸಾರಾಂಶ

ಆಧುನಿಕ ದಿನಗಳಲ್ಲಿ ಭಾರತ ಸ್ವಾವಲಂಬಿಯಾಗಿ ಆಹಾರ ಭದ್ರತೆ ಪಡೆದಿದೆ. ಅದರ ಜತೆಗೆ ಪೌಷ್ಟಿಕ ಭದ್ರತೆ ಸಾಧಿಸಲು ಸಾವಯವ ಕೃಷಿ ಅಗತ್ಯವಾಗಿದೆ ಎಂದು ಧಾರವಾಡದ ಕೃಷಿ ವಿವಿ ಕುಲಪತಿ ಡಾ.ಪಿ.ಎಚ್. ಪಾಟೀಲ ಹೇಳಿದರು.

ಗದಗ: ಆಧುನಿಕ ದಿನಗಳಲ್ಲಿ ಭಾರತ ಸ್ವಾವಲಂಬಿಯಾಗಿ ಆಹಾರ ಭದ್ರತೆ ಪಡೆದಿದೆ. ಅದರ ಜತೆಗೆ ಪೌಷ್ಟಿಕ ಭದ್ರತೆ ಸಾಧಿಸಲು ಸಾವಯವ ಕೃಷಿ ಅಗತ್ಯವಾಗಿದೆ ಎಂದು ಧಾರವಾಡದ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಕುಲಪತಿ ಡಾ.ಪಿ.ಎಚ್. ಪಾಟೀಲ ಹೇಳಿದರು.ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಗುರುವಾರ 2025ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕೃಷಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತೋಂಟದಾರ್ಯ ಜಾತ್ರೆಗೆ ವಿಶಿಷ್ಟ ಇತಿಹಾಸ ಇದ್ದು, ಪ್ರತಿ ವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಈ ಬಾರಿ ಕೃಷಿಯ ಉನ್ನತೀಕರಣಕ್ಕೆ ಪೂರಕವಾದ ಹಲವು ಮೌಲಿಕ ಗೋಷ್ಠಿಗಳನ್ನು ಏರ್ಪಡಿಸಿರುವುದು ಶ್ಲಾಘನೀಯವಾಗಿದೆ ಎಂದರು.

ಗದಗ ಜಿಲ್ಲೆ ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿದ್ದು, ಇಲ್ಲಿ ನಿಸರ್ಗದತ್ತ ಸಂಪನ್ಮೂಲಗಳಾದ ಮಣ್ಣು ಹಾಗೂ ನೀರನ್ನು ಸಂರಕ್ಷಿಸಬೇಕಿದೆ. ಯಾವ ಪ್ರದೇಶದಲ್ಲಿ ಮಣ್ಣು ಹಾಗೂ ನೀರನ್ನು ಸಂರಕ್ಷಿಸುವುದಿಲ್ಲವೋ ಅಲ್ಲಿ ಕೃಷಿ ಸಮೃದ್ಧವಾಗಿರಲು ಸಾಧ್ಯವಿಲ್ಲ. ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ಅನೇಕ ಅವಕಾಶಗಳನ್ನು ನೀಡಿದ್ದು, ರೈತರು ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಿದೆ. ನಾವು ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಿಕೊಂಡಂತೆ ಜಮೀನಿನ ಮಣ್ಣನ್ನು ಸಹ ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ರೈತರು ಮಾರುಕಟ್ಟೆ ಲಾಭಕ್ಕಾಗಿ ಒಂದೇ ರೀತಿಯ ಬೆಳೆ ಬೆಳೆಯದೇ ವೈವಿಧ್ಯಮಯ ಬೆಳೆಗಳನ್ನು ಬೆಳೆದಾಗ ಮಣ್ಣಿನ ಪೋಷಕಾಂಶವನ್ನು ಉಳಿಸಬಹುದು ಎಂದರು. ಕೃಷಿ ಅಧಿಕಾರಿ ಡಾ. ತಾರಾಮಣಿ.ಜಿ.ಎಚ್. ಮಾತನಾಡಿ, ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಮುಂಗಾರು-ಹಿಂಗಾರು ಕಾಲದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ, ಇದಿಷ್ಟೇ ಅಲ್ಲದೇ ಕೃಷಿ ಉಪಕರಣ, ಸಾವಯವ ಗೊಬ್ಬರ, ಕೂರಿಗೆಗಳಂತ ಸಲಕರಣೆಗಳು ಹೀಗೆ ಎಲ್ಲವೂ 90% ರಿಯಾಯಿತಿ ದರದಲ್ಲಿ ಲಭ್ಯವಿದ್ದು, ನರೇಗಾ ಯೋಜನೆ ಅಡಿಯಲ್ಲಿ ಕೃಷಿ ಕವಚ್ ಹೆಸರಲ್ಲಿ ಹೊಲಗಳಿಗೆ ಬದು ನಿರ್ಮಾಣ ಮಾಡಲಾಗುತ್ತಿದೆ. ರೈತರು ಇವುಗಳ ಲಾಭ ಪಡೆಯಬೇಕು ಎಂದರು. ಡಾ. ಸುರೇಶ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ನಾಡಗೌಡರ ಅವರು, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ರೈತರಿಗೆ ಹಾಗೂ ಗ್ರಾಮಗಳ ಉನ್ನತೀಕರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನಿಧ್ಯವಹಿಸಿದ್ದರು.

ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಸಂತೋಷ ಕೆಂಚಪ್ಪನವರ, ಡಾ.ಎಸ್.ಎಲ್. ಪಾಟೀಲ, ಡಾ. ಗುರುನಾಥಗೌಡ ಓದುಗೌಡ್ರ, ಡಾ.ಯೋಗೇಶ ಅಪ್ಪಾಜಯ್ಯ ಮುಂತಾದವರು ಉಪಸ್ಥಿತರಿದ್ದರು. ಜಾತ್ರಾ ಸಮಿತಿಯ ಕಾರ್ಯದರ್ಶಿ ಶಿವಪ್ಪ ಕತ್ತಿ ಸ್ವಾಗತಿಸಿದರು.