ಸಂಘಟನೆಯಿಂದ ಸಮಸ್ಯೆಗಳಿಗೆ ಸ್ಪಂದನೆ ದೊರೆಯಲಿ

| Published : Oct 13 2025, 02:02 AM IST

ಸಾರಾಂಶ

ಸಂಘದ ಸದಸ್ಯರಿಗೆ ಸಮಸ್ಯೆಯಾದರೆ ಆ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿದಾಗ ಮಾತ್ರ ಸಂಘಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ

ಕೊಪ್ಪಳ: ಒಂದು ಸಂಘಟನೆ ತನ್ನ ಸದಸ್ಯರ ಬೇಕು-ಬೇಡಿಕೆಗಳನ್ನು ಈಡೇರಿಸುವ ಜತೆಯಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವಾಗಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹೇಳಿದರು.

ನಗರದ ವಿಜ್ಞಾನ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಹಾಗೂ ಡಿ ದರ್ಜೆ ನೌಕರರ ಸಂಘದ ವತಿಯಿಂದ ಜರುಗಿದ ಲಿಪಿಕ ನೌಕರರ ಕಾರ್ಯಾಗಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘ ಹಾಗೂ ಸಂಘಟನೆಯನ್ನು ಕಟ್ಟುವುದು ಸುಲಭವಾದ ಕೆಲಸವಾಗಿದೆ. ಆದರೆ ಸಂಘಟನೆಯನ್ನು ಮುನ್ನಡೆಸುವ ಜತೆಯಲ್ಲಿ ಸಂಘದ ಸದಸ್ಯರ ಬೇಕು-ಬೇಡಿಕೆಗಳನ್ನು ಮನಗಂಡು ಅವುಗಳನ್ನು ಈಡೇರಿಸುವ ಜತೆಗೆ ಸಂಘದ ಸದಸ್ಯರಿಗೆ ಸಮಸ್ಯೆಯಾದರೆ ಆ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಿದಾಗ ಮಾತ್ರ ಸಂಘಕ್ಕೆ ಹೆಚ್ಚಿನ ಮಹತ್ವ ಸಿಗಲಿದೆ ಎಂದರು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮಾತನಾಡಿ, ಯಾವುದೇ ಒಂದು ಸೌಲಭ್ಯವನ್ನು ಪಡೆಯಬೇಕಾದರೆ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಅದು ಸಂಘಟನೆಯಿಂದ ಮಾತ್ರ ಸಾಧ್ಯ. ಸಂಘಟನೆ ಮೂಲಕ ಮಾತ್ರ ಸೌಲಭ್ಯ ಪಡೆದುಕೊಳ್ಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಅಯ್ಯಣ್ಣ ಮರದೂರ ಮಾತನಾಡಿ, ಸಂಘದ ಸದಸ್ಯರ ಎಲ್ಲ ಬೇಡಿಕೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡುವ ಜತೆಯಲ್ಲಿ ಅವುಗಳ ಈಡೇರಿಕೆಗಾಗಿ ಶ್ರಮವಹಿಸಿ ಕೆಲಸ ಮಾಡಲಾಗುತ್ತದೆ. ಅಲ್ಲದೇ ಸಂಘದ ಸದಸ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೆ ತಕ್ಷಣವೇ ಪರಿಹಾರ ಕೊಡಿಸುವಂತೆ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲಿಪಿಕ ನೌಕರ ಯಲ್ಲಾಲಿಂಗ ಅವರು ಎಚ್.ಆರ್.ಎಂ.ಎಸ್. ೨ ಕುರಿತಾಗಿ ಉಪನ್ಯಾಸ ನೀಡಿದರು.

ಲಿಪಿಕ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆದೇಪ್ಪ, ಡಯಟ್‌ ಉಪನ್ಯಾಸಕ ಗವಿಸಿದ್ದಯ್ಯ ಬೇಣಕಲ್ಲಮಠ, ನಿವೃತ್ತ ಡಿಡಿಪಿಐ ಬಿ.ಎಸ್. ಪಟ್ಟಣಶೆಟ್ಟಿ, ಪತ್ರಾಂಕಿತ ಅಧಿಕಾರಿ ಪ್ರಾಣೇಶ ಆಚಾರ್ಯ, ರಾಯಚೂರು ಜಿಲ್ಲಾಧ್ಯಕ್ಷ ಇಮ್ಯಾನಿವೆಲ್, ವ್ಯವಸ್ಥಾಪಕ ಸೋಖಶೇಖರ ಇತರರಿದ್ದರು. ಲಿಪಿಕ ನೌಕರರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಯಲಬುರ್ಗಾ ತಾಲೂಕು ಅಧ್ಯಕ್ಷ ಮಲ್ಲಪ್ಪಗಟ್ಟಿ ಸ್ವಾಗತಿಸಿದರು. ಕುಷ್ಟಗಿ ತಾಲೂಕು ಅಧ್ಯಕ್ಷ ಶ್ರೀಧರ ವಂದಿಸಿದರು.