ಕನ್ನಡಪ್ರಭವಾರ್ತೆ ಕುಶಾಲನಗರ
ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಸಂಘ ಸಂಸ್ಥೆಗಳ ಮೂಲಕ ಸ್ಪಂದನೆ ನೀಡಬೇಕಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ಹೇಳಿದರು.ಕುಶಾಲನಗರದ ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ ಕುಶಾಲನಗರ ಘಟಕದ ವತಿಯಿಂದ ಮುಳ್ಳುಸೋಗೆ ತಪೋವನ ಸಮುದಾಯ ಭವನದಲ್ಲಿ ನಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಇತರರ ಕಷ್ಟಗಳ ಬಗ್ಗೆ ಚಿಂತನೆ ಮಾಡುವ ಮೂಲಕ ಸಹಕಾರ ನೀಡುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಹೊಂದಬೇಕಾಗಿದೆ ಎಂದು ಹೇಳಿದರು. ಕುಶಾಲನಗರ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮ ಗುರು ಜ್ಞಾನ ಪ್ರಕಾಶ್ ಮಾತನಾಡಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಸಮಾಜದ ನಿಧಿಯಾಗಿ ಪರಿವರ್ತಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.
ತಪೋವನ ಸಂಸ್ಥೆಯ ಸುಫೀರಿಯರ್ ಫಾ. ಜೋಕಿಮ್ ರಾಡ್ರಿಗಸ್ ಮಾತನಾಡಿ ಮಕ್ಕಳು ಉನ್ನತ ಶಿಕ್ಷಣ ಉನ್ನತ ಹುದ್ದೆ ಗುರಿ ಹೊಂದಬೇಕು ಎಂದರು. ಗರಿಷ್ಠ ಅಂಕ ಪಡೆದ ಎಸ್ ಎಸ್ ಎಲ್ ಸಿ, ಪಿ ಯು ಸಿ ಮತ್ತು ಪದವಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೈಸ್ತ ಸೇವಾ ಸಂಘದ ಕುಶಾಲನಗರ ಘಟಕದ ಅಧ್ಯಕ್ಷ ಎನ್ ಟಿ ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ ಟಿ ಬೇಬಿ ಮ್ಯಾಥ್ಯೂ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎ ಜೆ ಬಾಬು ಕುಶಾಲನಗರ ಯೋಜನಾ ಪ್ರಾಧಿಕಾರ ಸದಸ್ಯರಾದ ವಿ ಎಸ್ ಸಜಿ, ಕುಶಾಲನಗರ ಟೌನ್ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಶುಂಠಿಕೊಪ್ಪ ಸಹಕಾರ ಸಂಘ ಅಧ್ಯಕ್ಷ ಜರ್ನಿ ಡಿಸೋಜಾ ಮಾತನಾಡಿದರು. ಸಮಿತಿ ವತಿಯಿಂದ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲನಗರ ಕ್ರೈಸ್ತ ಸೇವಾ ಸಮಿತಿ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.