ಹಾನಗಲ್ಲ: ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಉದ್ದೇಶದೊಂದಿಗೆ ಮಕ್ಕಳನ್ನು ಶೈಕ್ಷಣಿಕವಾಗಿ ಮುನ್ನಡೆಸುವ ಗುರಿ ಹೊಂದಲಾಗಿದ್ದು, ಓಸ್ಯಾಟ್ ಸಂಸ್ಥೆ ಇದುವರೆಗೆ ೧೩೦ಕ್ಕೂ ಅಧಿಕ ಶಾಲೆಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಹಸ್ತಾಂತರಿಸಿದೆ ಎಂದು ಓಸ್ಯಾಟ್ ಪ್ರತಿನಿಧಿ ಎಸ್. ರಾಮಮೂರ್ತಿ ಹೇಳಿದರು.ಮಂಗಳವಾರ ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ೧.೩೫ ಕೋಟಿ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ೮ ಕೊಠಡಿಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದಿನ ದಿನಗಳಲ್ಲಿ ಮೈಸೂರು ಭಾಗವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇತ್ತೀಚೆಗೆ ಹಾವೇರಿ ಜಿಲ್ಲೆಯ ಶಾಲೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಿದೆ. ಈ ಶಾಲೆಯಲ್ಲಿ ನಮ್ಮ ಸಂಸ್ಥೆಯ ದಾನಿಗಳ ಸಹಕಾರದಿಂದ ಇಲ್ಲಿ ಯಾವುದೇ ಖಾಸಗಿ ಶಾಲೆಗಳ ವ್ಯವಸ್ಥೆಗೂ ಕಡಿಮೆಯಿಲ್ಲದಂತೆ ಸೌಕರ್ಯಗಳನ್ನು ಅಳವಡಿಸಲಾಗುವುದು. ನೆಲಮಹಡಿಯಲ್ಲಿ ನಾಲ್ಕು ಹಾಗೂ ಒಂದನೇ ಮಹಿಯಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಕೊಠಡಿಗಳಲ್ಲಿ ವಿದ್ಯುತ್ ವ್ಯವಸ್ಥೆ, ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ೩೨೦ ಕೂಡ್ರುವ ಆಸನಗಳನ್ನು (ಡೆಸ್ಕ್‌ ), ೧೦ ಲಕ್ಷ ವೆಚ್ಚದಲ್ಲಿ ಆರ್ಟ್‌ ಪೇಂಟಿಂಗ್, ಎಲ್ಲ ಕೊಠಡಿಗಳಲ್ಲೂ ಫ್ಯಾನ್ ಹಾಗೂ ಡಿಜಿಟಲ್ ಬೋರ್ಡ್ ಅಳವಡಿಸಲಾಗುವುದು. ಉತ್ತಮ ಗುಣಮಟ್ಟದ ಕಟ್ಟಡ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಕ್ಕೆ ಜನಪ್ರತಿನಿಧಿಗಳ ಹಾಗೂ ಶಿಕ್ಷಣ ಇಲಾಖೆಯ ಸಂಪೂರ್ಣ ಸಹಕಾರದ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನಿಕಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ ಭೋಸಲೆ, ಸದಸ್ಯರಾದ ಧನುಶ್ರೀ ತಿರುಮಲೆ, ಹೇಮಾವತಿ ಹಂಜಗಿ, ಪ್ರದೀಪ ಸುಗಂಧಿ, ಇಸ್ಮಾಯಿಲ್ ಮುಲ್ಲಾ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುನಾಥ ಗವಾಣಿಕರ, ಕಾರ್ಯದರ್ಶಿ ಬಸವರಾಜ ಕುಂಚೂರ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ. ಪಾಟೀಲ, ಕಾರ್ಯದರ್ಶಿ ಮಕ್ಬೂಲ್ ಲಿಂಗದಹಳ್ಳಿ, ಮಹೇಶ ನಾಯ್ಕ, ಬಿಆರ್‌ಸಿ ಅಧಿಕಾರಿಗಳಾದ ಡಿ. ನಾಗೇಂದ್ರಪ್ಪ, ಎಸ್.ಎಸ್. ಹಿರೇಮಠ, ಶ್ರೀನಿವಾಸ್ ದೀಕ್ಷಿತ್, ವಿ.ಟಿ. ಪಾಟೀಲ, ಎಂ.ಎ. ಜಾಗೀರದಾರ, ಎನ್.ವಿ. ಅಗಸನಹಳ್ಳಿ, ಎಸ್.ಎನ್. ದೊಡ್ಡಮನಿ, ಗುತ್ತಿಗೆದಾರ ಶಿವಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ, ಗಣ್ಯರಾದ ಗುರುರಾಜ್ ನಿಂಗೋಜಿ, ಮೇಕಾಜಿ ಕಲಾಲ, ವಿನಯ ಬಂಕನಾಳ, ಮುಖ್ಯ ಶಿಕ್ಷಕ ವೀರಪ್ಪ ಕರೇಗೊಂಡರ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.