ಎಚ್‌ಡಿಕೆ ಸೋಲಿಸುವುದು ನಮ್ಮ ಗುರಿ: ಗುರುಪ್ರಸಾದ್ ಕೆರಗೋಡು

| Published : Mar 31 2024, 02:13 AM IST

ಸಾರಾಂಶ

೨೦೧೩ರಲ್ಲಿ ಸಿದ್ದರಾಮಯ್ಯ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದಾಗ, ಕುಮಾರಸ್ವಾಮಿ ಅಕ್ಕಿ ಜೊತೆಗೆ ಕ್ವಾಟರ್ ಬಾಟಲ್ ನೀಡಿಬಿಡಿ, ನೀವು ಜನರನ್ನು ಸೋಮಾರಿಯನ್ನಾಗಿ ಮಾಡುತ್ತಿದ್ದೀರಿ ಎಂದಿದ್ದರು, ಶೋಷಿತರು ದುಡಿಯಲು ಹುಟ್ಟಿದ್ದಾರೆ ಎಂಬ ಮನಸ್ಥಿತಿಯನ್ನು ಅನಾವರಣ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಕಂಟಕವಾಗಿರುವ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು ನಮ್ಮ ಗುರಿ. ಅದರಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸಲು ಕಂಕಣ ಬದ್ಧರಾಗಿದ್ದೇವೆ ಎಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ತಿಳಿಸಿದರು.

ನಗರದ ಕನಕ ಭವನದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಲೋಕಸಭಾ ಚುನಾವಣೆ ಕೊನೆಯ ಅವಕಾಶವಾಗಿದೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವುದೂ ಒಂದೇ, ಮಂಡ್ಯದಲ್ಲಿ ಎಚ್. ಡಿ. ಕುಮಾರಸ್ವಾಮಿ ಗೆಲ್ಲುವುದೂ ಒಂದೇ, ಏಕೆಂದರೆ ಪ್ರಧಾನಿ ಮೋದಿ ಕೋಮುವಾದಿಯಾದರೆ, ಕುಮಾರಸ್ವಾಮಿ ಕೋಮುವಾದಿ ಮನಸ್ಥಿತಿ ಜೊತೆಗೆ ಜಾತಿವಾದಿಯಾಗಿದ್ದಾರೆ ಎಂದರು.

೨೦೧೩ರಲ್ಲಿ ಸಿದ್ದರಾಮಯ್ಯ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿದಾಗ, ಕುಮಾರಸ್ವಾಮಿ ಅಕ್ಕಿ ಜೊತೆಗೆ ಕ್ವಾಟರ್ ಬಾಟಲ್ ನೀಡಿಬಿಡಿ, ನೀವು ಜನರನ್ನು ಸೋಮಾರಿಯನ್ನಾಗಿ ಮಾಡುತ್ತಿದ್ದೀರಿ ಎಂದಿದ್ದರು, ಶೋಷಿತರು ದುಡಿಯಲು ಹುಟ್ಟಿದ್ದಾರೆ ಎಂಬ ಮನಸ್ಥಿತಿಯನ್ನು ಅನಾವರಣ ಮಾಡಿದ್ದರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದೇವೆ ಎಂದರು.

ದಲಿತರು,ಹಿಂದುಳಿದವರು, ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಕನಿಷ್ಠ ಬದ್ಧತೆ ತೋರಿರುವ ಕಾಂಗ್ರೆಸ್ ಪಕ್ಷವನ್ನುವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವ ತೀರ್ಮಾನ ಮಾಡಲಾಗಿತ್ತು, ಅದರಂತೆ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರೇ ಆಗಲಿ ಅವರನ್ನು ಗೆಲ್ಲಿಸುವ ಮೂಲಕ ಕೋಮುವಾದಿ ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿಯನ್ನು ಸೋಲಿಸಲು ಸವಾಲು ಸ್ವೀಕರಿಸಿದ್ದೇವೆ.ಇದಕ್ಕಾಗಿ ದಸಂಸ ಮುಖಂಡರು,ಕಾರ್ಯಕರ್ತರು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು,

ಸಭೆಯಲ್ಲಿ ಸಾಹಿತಿ ಪ್ರೊ.ಹುಲ್ಕೆರೆ ಮಹದೇವು, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್, ಹಾರೋಹಳ್ಳಿ ಪ್ರಕಾಶ್, ಚಂದ್ರಶೇಖರ್, ಪ್ರಕಾಶ್ ಬ್ಯಾಡರಹಳ್ಳಿ, ತಗ್ಗಹಳ್ಳಿ ಟಿ.ಡಿ.ಬಸವರಾಜ್, , ಆಟೋ ಗುರುಶಂಕರ್, ಹಾಲಪ್ಪ, ದೇವರಾಜ್, ಗಂಗಾಧರ್, ಕೃಷ್ಣಪ್ರಸಾದ್, ರಾಜಶೇಖರ್, ರಾಮಂದೂರು ಸಿದ್ದರಾಜು, ಮುದ್ದಯ್ಯ, ರವಿಕುಮಾರ್, ಗೋವಿಂದರಾಜು ಸೇರಿ ಹಲವರಿದ್ದರು.