ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಚಿಂತನೆಗೆ ನಮ್ಮ ಆಕ್ಷೇಪ: ಸಿ.ಟಿ. ರವಿ

| Published : Aug 29 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ಸರ್ಕಾರ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ನೇಮಕ ಮಾಡಿದೆ. ವ್ಯಕ್ತಿ ಆಯ್ಕೆ ತಕರಾರಿಗಿಂತ ಅವರ ಚಿಂತನೆ-ಅಭಿಪ್ರಾಯಕ್ಕೆ ನಮ್ಮ ಆಕ್ಷೇಪವಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

- ಅವರ ಅಭಿಪ್ರಾಯಕ್ಕೆ ನಮ್ಮ ಆಕ್ಷೇಪ, ಸಂಸ್ಕೃತಿ ಬದಲಿಸಿದವರು ಉದ್ಘಾಟನೆ ಮಾಡುವ ನೈತಿಕತೆ ಕಳೆದು ಕೊಳ್ಳುತ್ತಾರೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ಕಾರ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ನೇಮಕ ಮಾಡಿದೆ. ವ್ಯಕ್ತಿ ಆಯ್ಕೆ ತಕರಾರಿಗಿಂತ ಅವರ ಚಿಂತನೆ-ಅಭಿಪ್ರಾಯಕ್ಕೆ ನಮ್ಮ ಆಕ್ಷೇಪವಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಈ ಕುರಿತು ಗುರುವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ನಮ್ಮ ಪೂರ್ವಿಕರು ಇಬ್ಬರು ಒಂದೇ, ಇಬ್ಬರ ಡಿ.ಎನ್.ಎ ಒಂದೇ ಬರುತ್ತೆ. ಉಪಾಸನ ಪದ್ಧತಿ ಬದಲಿಸುತ್ತಿದ್ದಂತೆ ಸಂಸ್ಕೃತಿ ಬದಲಿಸಬೇಕೆಂತಿಲ್ಲ, ಅವರು ಕೇವಲ ಉಪಾಸನಾ ಪದ್ಧತಿ ಬದಲಿಸಿದ್ದರೆ ವಿರೋಧ, ಸಂಶಯ ಇರುತ್ತಿರಲಿಲ್ಲವೆಂದು ತಿಳಿಸಿದರು.

ಭುವನೇಶ್ವರಿ ಬಗ್ಗೆ, ಬಾವುಟದ ಅರಿಶಿನ-ಕುಂಕುಮದ ಬಗ್ಗೆ ಮಾತನಾಡಿದ್ದು ಸಂಸ್ಕೃತಿಯಿಂದಲೂ ದೂರ ಹೋಗಿರುವುದು ತೋರಿಸುತ್ತದೆ. ಸಂಸ್ಕೃತಿ ಬದಲಿಸಿದವರು ಉದ್ಘಾಟನೆ ಮಾಡುವ ನೈತಿಕತೆ ಕಳೆದು ಕೊಳ್ಳುತ್ತಾರೆ. ನೀರು ಕೇವಲ ಊಟಕ್ಕೆ ಅಲ್ಲ, ಭೂಮಿ ಬರೀ ನೆಲ ಅಲ್ಲ ಭಾರತೀಯ ರಾಷ್ಟ್ರೀಯ ಸಂಸ್ಕೃತಿ ಎಂದು ಹೇಳಿದರು.

ನಿಮ್ಮ ಇತ್ತೀಚಿನ ಹೇಳಿಕೆ, ಹಿಂದಿನ ಹೇಳಿಕೆಗೆ ಅಗಾಧ ವ್ಯತ್ಯಾಸವಿದೆ. ನಿಮ್ಮ ಹಿಂದಿನ ಹೇಳಿಕೆ ಈ ನೆಲದ ಸಂಸ್ಕೃತಿಗೆ ಪೂರಕವಾಗಿರಲಿಲ್ಲ. ನೆಲದ ಸಂಸ್ಕೃತಿ ಒಪ್ಪಿ, ಅಪ್ಪಿ ಗೌರವಿಸುವ ನೆಲೆಯಲ್ಲಿ ಉದ್ಘಾಟನೆ ಮಾಡುವುದಾದರೆ ನಮ್ಮ ತಕರಾರಿಲ್ಲ. ಈ ಹಿಂದೆ ನೀವು ಹೇಳಿದ ಮಾತಿಗೆ ವಿಷಾದ ವ್ಯಕ್ತಪಡಿಸಬೇಕೆಂದು ಒತ್ತಾಯಿಸಿದರು.ಧರ್ಮಸ್ಥಳದ ವಿರುದ್ಧ ಷಡ್ಯಂತ್ರ:

ಪುಟಕ್ಕಿಟ್ಟ ಚಿನ್ನ ಹೊಳೆಯುತ್ತದೆ. ಈ ಅಗ್ನಿ ಪರೀಕ್ಷೆಯಿಂದ ಧರ್ಮಸ್ಥಳ ಗೆದ್ದು ಬರುತ್ತೇ ಅಂತ ಹೇಳಿದ್ದೆ, ಬುರಡೆ ಗ್ಯಾಂಗಿನ ಷಡ್ಯಂತ್ರ ದಿನದಿಂದ ದಿನಕ್ಕೆ ಬಹಿರಂಗವಾಗುತ್ತಿದೆ. ಷಡ್ಯಂತ್ರ ವ್ಯಾಪಕವಾಗಿದೆ ಅನ್ನೋ ಅನುಮಾನ, ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿರಬೇಕೆಂದು ಹೇಳಿದರು.

ಎಸ್.ಐಟಿ ಗೆ ಒಂದು ಲಿಮಿಟ್ ಇದೆ. ಆ ಲಿಮಿಟಿ ಮೀರಿ ಕಾಣದ ಕೈಗಳು ಅಡ್ಡ ಬರುತ್ತದೆ ಎಂದು ಹೇಳಿದ್ದೆ, ಎಸ್.ಐಟಿ ರಚನೆಯಾಗಿದ್ದೆ ಕಾಣದ ಕೈಗಳ ಒತ್ತಡದ ಕಾರಣಕ್ಕೆ, ನನಗಿದ್ದ ನಂಬಿಕೆ, ಕೋಟ್ಯಾಂತರ ಜನರಗಿದ್ದ ನಂಬಿಕೆ ಸರ್ಕಾರಕ್ಕೂ ಇರಬೇಕಾಗಿತ್ತು. ಬುರಡೆ ಗ್ಯಾಂಗ್ ಬುರಡೆ ಬಿಡುತ್ತಾ ಇದೆ, ಧರ್ಮ ಸ್ಥಳದ ವಿಚಾರದಲ್ಲಿ ಅವರು ಹೇಳುತ್ತಿರುವುದು ಸುಳ್ಳು ಎಂದು ತಿಳಿಸಿದರು.

ಮೊದಲು ಬುರಡೆ ಗ್ಯಾಂಗಿನ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು. ಆಮೇಲೆ ತನಿಖೆ ನಡೆಸ ಬೇಕಾಗಿತ್ತು. ಆದರೆ, ಬುರಡೆ ಗ್ಯಾಂಗಿನ ತುತ್ತೂರಿಗೆ ತಲೆದೂಗುವ ಮೂಲಕ ಎಸ್.ಐಟಿ ರಚನೆ ಮಾಡಿದ್ದರು. ಸಮೀರ್, ಮಟ್ಟಣ್ಣ, ಮಹೇಶ್ ತಿಮರೋಡಿ ಪುಂಕಾನು ಪುಂಕವಾಗಿ ಬುರಡೆ ಬಿಡುತ್ತಿದ್ದರು. ಸರ್ಕಾರ ಯಾವುದೇ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಲಿಲ್ಲ, ಕ್ರಮ ತೆಗೆದುಕೊಂಡಿಲ್ಲ. ಎಸ್.ಐ.ಟಿ.ತನಿಖೆ ಮುಂದುವರಿಯ ಬೇಕಾದರೆ ಹಾಲಿ ಸುಪ್ರೀಂ ಕೋರ್ಟ್ ಅಥಾವ ಹೈಕೊರ್ಟ್ ನ್ಯಾಯಾಧೀಶರು ಮಾನಿಟರ್ ಮಾಡಬೇಕು. ಅವರಿಗೆ ವರದಿ ಹೋಗಬೇಕು. ಇಲ್ಲ ಎನ್.ಐ.ಎ ತನಿಖೆ ಮಾಡಬೇಕು. ಇದು ನಮ್ಮ ನಿಲುವು ವಿ.ಆರ್. ವಿತ್ ಧರ್ಮಸ್ಥಳವೆಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಚಾಮುಂಡಿ ಬೆಟ್ಟದ ಕುರಿತು ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಸಿ.ಟಿ.ರವಿ, ಚಾಮುಂಡಿ ಬೆಟ್ಟನೇ ಹಿಂದುಗಳದಲ್ಲಾ ಎನ್ನುವುದು ಓಲೈಕೆ ಪರಮಾವಧಿ. ಚಾಮುಂಡಿ ತಾಯಿ ನೆಲೆಸಿರುವ ಕ್ಷೇತ್ರ ಹಿಂದುಗಳದಲ್ಲದೇ ಇನ್ಯಾರದ್ದಾಗುತ್ತದೆ ಎಂದು ಪ್ರಶ್ನಿಸಿದರು.

ಅಜ್ಮೀರ್, ಮೆಕ್ಕಾ, ದರ್ಗಾ ಮುಸಲ್ಮಾನರದಲ್ಲಾ ಎಂದರೆ ಹೇಗೆ ಅಭಾಸವಾಗುತ್ತದೆಯೋ ಇದು ಹಾಗೆಯೇ,

ಚಾಮುಂಡಿ ಬೆಟ್ಟ ಹಿಂದುಗಳದಲ್ಲಾ ಅನ್ನೋದು ಅಭಾಸ, ಓಲೈಕೆ ಪರಮಾವಧಿ ಇದು ಓಲೈಕೆ ಎಲ್ಲೇ ಮೀರಿದಂತೆ ಆಗುತ್ತದೆ. ಡಿ.ಕೆ.ಶಿವಕುಮಾರ್ ನಾನು ಹಿಂದೂ ಅಲ್ಲಾ ಎಂದು ಹೇಳಿಕೊಳ್ಳುವುದು ಪೂರ್ವಿಕರಿಗೆ ಮಾಡಿದ ಅಪಮಾನವಾಗುತ್ತದೆ ಎಂದು ತಿಳಿಸಿದರು.