ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಎಲ್ಲ ಸಮಾಜಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೆ.28 ರಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯಲಿರುವ ನಿಮಿತ್ತ ಹುಕ್ಕೇರಿ ತಾಲೂಕಿನ ಕಣಗಲಾ ಜಿಪಂ ವ್ಯಾಪ್ತಿಯ
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಸರ್ವ ಸಮಾಜಗಳ ಏಳ್ಗೆಯೇ ನಮ್ಮ ಪ್ರಮುಖ ಆದ್ಯತೆ ಆಗಿದೆ ಎಂದು ತಿಳಿಸಿದರು.ಲಿಂಗಾಯತರು, ಹಾಲುಮತ, ಉಪ್ಪಾರರು, ಮರಾಠರು, ಜೈನರು, ಪ.ಜಾ/ಪ.ಪ., ಮುಸ್ಲಿಮರು ಸೇರಿದಂತೆ ಹಲವಾರು ಜಾತಿ- ಜನಾಂಗದ ಪ್ರಮುಖರಿಗೆ ಸ್ಥಾನಮಾನ ನೀಡುತ್ತಿದ್ದೇವೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಈ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡುತ್ತಿದ್ದೇವೆ. ಈ ಮೂಲಕ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಾಮಾಜಿಕ ನ್ಯಾಯ ಪರಿಪಾಲನೆಗೆ ಮಹತ್ವವನ್ನು ಕೊಡುತ್ತಿರುವುದಾಗಿ ತಿಳಿಸಿದರು.ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಸಿಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಕ್ಷರಶಃ ಪಾಲಿಸುತ್ತಿರುವೆ.ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ನಡೆಯುತ್ತಿದೆ. ಈ ತಾಲೂಕಿನ ಜನತೆಗೆ ಒಳ್ಳೆಯದನ್ನು ಮಾಡಲು ಸಚಿವ ಸತೀಶ್ ಜಾರಕಿಹೊಳಿಯವರು ಮತ್ತು ಸಹಕಾರಿ ಮುಖಂಡ ಅಣ್ಣಾಸಾಹೇಬ್ ಜೊಲ್ಲೆಯವರು ಅಭ್ಯರ್ಥಿಗಳನ್ನು ಹಾಕಿ ಪ್ರಚಾರ ನಡೆಸುತ್ತಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಈಡೇರಿಸುವ ಯೋಗ್ಯ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದು, ಅಂತಹ ವ್ಯಕ್ತಿಗಳನ್ನು ಬೆಂಬಲಿಸಿ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡರು.ಹುಕ್ಕೇರಿ ತಾಲೂಕು ಸಮಗ್ರ ಅಭಿವೃದ್ಧಿಗೆ ಈ ಪೆನೆಲ್ಗೆ ಬೆಂಬಲಿಸಿ ಮತ ನೀಡಿ. ಮೂರು ದಶಕಗಳಿಂದ ಏಕ ಚಕ್ರಾಧಿಪತ್ಯವನ್ನು ಹೊಂದಿರುವ ಆಡಳಿತವನ್ನು ತಿರಸ್ಕರಿಸಿ, ಜಾರಕಿಹೊಳಿ- ಜೊಲ್ಲೆಯವರ ನೇತೃತ್ವದ ಹೊಸ ಮುಖಗಳಿಗೆ ಗೆಲುವಿನ ಅವಕಾಶವನ್ನು ಮಾಡಿಕೊಡಬೇಕು. ನಾವೇನೂ ಹೊರಗಿನವರಲ್ಲ. ಇದೇ ಜಿಲ್ಲೆಯವರು. ಪಕ್ಕದ ತಾಲ್ಲೂಕಿನವರು. ಆರ್ಥಿಕವಾಗಿ ದಿವಾಳಿಯಾಗಿರುವ ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಜೊಲ್ಲೆಯವರು ರೈತರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ನೂರಾರು ಕೋಟಿ ರೂಪಾಯಿಗಳನ್ನು ಸುರಿದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.ಇನ್ನು ಸತೀಶ್ ಜಾರಕಿಹೊಳಿಯವರು ಈ ರಾಜ್ಯದ ಮಂತ್ರಿ ಇರುವುದರಿಂದ ಅವರಿಂದಲೂ ವಿದ್ಯುತ್ ಸಂಘಕ್ಕೆ ಸಾಕಷ್ಟು ನೆರವು ಹರಿದು ಬರುತ್ತಿದೆ. ರೈತರ ಸಂಕಷ್ಟಗಳನ್ನು ನಿವಾರಿಸಲು ನಾವೆಲ್ಲರೂ ಒಂದಾಗಿದ್ದೇವೆ. ಸಹಕಾರಿ ರಂಗದಲ್ಲಿ ರಾಜಕೀಯ ಬರಬಾರದು. ನಾವು, ಸತೀಶ್ ಅವರು ಬೇರೆಬೇರೆ ಪಕ್ಷಕ್ಕೆ ಸೇರಿದ್ದರೂ ರೈತರ ಹಿತಕ್ಕಾಗಿ ಒಂದಾಗಿ ಹುಕ್ಕೇರಿ ತಾಲೂಕಿನಲ್ಲಿರುವ ಸಹಕಾರಿ ಸಂಘಗಳನ್ನು ಪ್ರಗತಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ವಿದ್ಯುತ್ ಸಂಘವು ಲಾಭದಲ್ಲಿದ್ದರೂ ಅದನ್ನು ನಷ್ಟವೆಂಬಂತೆ ಈಗಿನ ಆಡಳಿತ ಮಂಡಳಿಯವರು ಹೇಳುತ್ತಿದ್ದಾರೆ. ಇದು ಅಮಾಯಕ ರೈತರಿಗೆ ಮಾಡುತ್ತಿರುವ ಮಹಾ ಮೋಸ ಎಂದು ಟೀಕಿಸಿದರು.ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ವಿದ್ಯುತ್ ಸಂಘದ ನಿರ್ದೇಶಕ ಸಸಿರಾಜ ಪಾಟೀಲ ಮಾತನಾಡಿದರು. ಹೀರಾ ಶುಗರ್ಸ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಅಮರ ನಲವಡೆ, ಬಂಡು ಅಥನೂರೆ, ಪವನ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.