ಸಾರಾಂಶ
ಡ್ರಗ್ಸ್ ಹಾವಳಿ, ಸೈಬರ್ ಕ್ರೈಂ ಜಾಗೃತಿ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಜಾಥಾವನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು. ನಮ್ಮ ನಡಿಗೆ ನಶೆಮುಕ್ತ ತುಮಕೂರು ಕಡೆಗೆ ಶೀರ್ಷಿಕೆಯಡಿಯಲ್ಲಿ ನಗರದಲ್ಲಿ ಭಾನುವಾರ ಜಾಥಾ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ತುಮಕೂರು
ಡ್ರಗ್ಸ್ ಹಾವಳಿ, ಸೈಬರ್ ಕ್ರೈಂ ಜಾಗೃತಿ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳ ವಿರುದ್ಧ ಜನಜಾಗೃತಿ ಜಾಥಾವನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿತ್ತು. ನಮ್ಮ ನಡಿಗೆ ನಶೆಮುಕ್ತ ತುಮಕೂರು ಕಡೆಗೆ ಶೀರ್ಷಿಕೆಯಡಿಯಲ್ಲಿ ನಗರದಲ್ಲಿ ಭಾನುವಾರ ಜಾಥಾ ಆಯೋಜಿಸಲಾಗಿತ್ತು.ಎಸ್ಪಿ ಕಚೇರಿಯಿಂದ ಆರಂಭವಾದ ಈ ನಡಿಗೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಚಾಲನೆ ನೀಡಿದರು. ಜಾಥಾವು ಶಿವಕುಮಾರಸ್ವಾಮೀಜಿ ವೃತ್ತ, ಬಿಜಿಎಸ್ ವೃತ್ತ, ಕಾಲ್ಟೆಕ್ಸ್ ಸರ್ಕಲ್ ಮಾರ್ಗವಾಗಿ ತುಮಕೂರು ಗಾಜಿನ ಮನೆ ತಲುಪಿತು. ಸುಮಾರು 5 ಕಿ.ಮೀ.ಗಳ ಈ ಓಟದಲ್ಲಿ ಪೊಲೀಸರಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಭಾಗಿಯಾಗಿದ್ದರು.
ಜಾಥಾಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಪ್ರತಿ ವರ್ಷ ಪೊಲೀಸ್ ಇಲಾಖೆಯಿಂದ ಈ ಜಾಗೃತಿ ಜಾಥಾ ನಡೆಯುತ್ತದೆ. ಈ ವರ್ಷದ ಥೀಮ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯಡಿ ನಡೆಯುತ್ತಿದೆ. ವಿಶೇಷವಾಗಿ ಸೈಬರ್ ಕ್ರೈಮ್ ಮತ್ತು ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷವೂ ಇದು ನಡೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಮತ್ತು ಡ್ರಗ್ಸ್ ವಿರುದ್ಧ ಜನಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಸಹಕರಿಸಿರುವ ಎಲ್ಲರಿಗೂ ಧನ್ಯವಾದಗಳು. ಜನತೆ ಅಪರಾಧಗಳ ವಿರುದ್ಧ ಜಾಗೃತರಾಗಿರಬೇಕು ಎಂದರು.
ನಡಿಗೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮರಿಯಪ್ಪ, ಅಬ್ದುಲ್ ಖಾದರ್ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ವಿಜಯಶಾಲಿ ಓಟಗಾರರಿಗೆ ಪದಕ ವಿತರಿಸಲಾಯಿತು.