ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಿ ಮತ್ತು ಡಿ ಭೂತ ರೈತರ ಬದುಕನ್ನು ಹಾಳು ಮಾಡುತ್ತಿದೆ. ಕಂದಾಯ ಇಲಾಖೆಯ ಕೆಲ ಭ್ರಷ್ಟರ ಅಜ್ಞಾನ ಮತ್ತು ರೈತರ ಮೇಲಿನ ದ್ವೇಷದಿಂದ ವ್ಯವಸಾಯ ಭೂಮಿಯನ್ನು ಸಿ ಮತ್ತು ಡಿ ಜಾಗವೆಂದು ಪರಿವರ್ತನೆ ಮಾಡಿದ್ದಾರೆ ಎಂದು ರೈತ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ, ತಾಲೂಕುಗಳ 40 ಗ್ರಾಮಗಳ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಅರಣ್ಯ ಒತ್ತುವರಿ ತೆರವು ಹಾಗು ಸಿ ಮತ್ತು ಡಿ ಭೂಮಿಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಭಾಗವಹಿಸಿ ರೈತರ ಸಮಸ್ಯೆಗಳನ್ನು ಆಲಿಸಿದರು.ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ಸಿ ಮತ್ತು ಡಿ ಭೂಮಿಯಿದೆ. ಈ ಭೂಮಿಯಲ್ಲೇ ಕೃಷಿ ಮಾಡುತ್ತಿದ್ದಾರೆ. ಎರಡು ಎಕರೆಯಿಂದ 5 ಎಕರೆ ಆಸ್ತಿಯಿರುವ ನೂರಾರು ಕುಟುಂಬಗಳಿವೆ. ಸಿ ಮತ್ತು ಡಿ ಭೂಮಿಗೆ ಹಕ್ಕುಪತ್ರಗಳು ಸಿಕ್ಕಿಲ್ಲ. ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.
ಸಿ ಮತ್ತು ಡಿ ಭೂಮಿಯನ್ನಾಗಿ ಪರಿವರ್ತನೆ ಮಾಡಿರುವ ಬಗ್ಗೆ ಕಂದಾಯ ಇಲಾಖೆಯ ವಿರುದ್ಧ ಕಳೆದ 20 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈಗ ಕಾನೂನು ಹೋರಾಟ ಮಾಡದಿದ್ದರೆ, ಎಷ್ಟೋ ಕುಟುಂಬಗಳು ಆಸ್ತಿ ಕಳೆದುಕೊಂಡು ನಿರ್ಗತಿಕರಾಗಬೇಕಾಗುತ್ತದೆ ಎಂದು ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್ ಹೇಳಿದರು.ರಾಜಕೀಯ ರಹಿತ ಹೋರಾಟ ಮಾಡಲೇಬೇಕಾಗಿದೆ. ಕೊಡಗಿನ ಇಬ್ಬರು ಶಾಸಕರ ನೇತೃತ್ವದಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಲೋಕಸಭಾ ಸದಸ್ಯರು. ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ರೈತರ ಸಮ್ಮಖದಲ್ಲಿ ಸಭೆ ನಡೆಸಿ, ಮುಂದಿನ ಹೋರಾಟವನ್ನು ನಿಗದಿ ಮಾಡಿಕೊಳ್ಳಬೇಕಾಗಿದೆ ಎಂದರು.
ಜಿಲ್ಲೆಯ ಟೆನ್ಯೂರ್ಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ಲ. ಕಂದಾಯ ಇಲಾಖೆಯ ಭ್ರಷ್ಟರಿಂದ ರೈತರ ಆಸ್ತಿ ದುರಸ್ತಿ ಆಗಿಲ್ಲ. ಇದೇ ಕಾರಣದಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಂಚ ಕೊಟ್ಟವನ ಭೂಮಿ ದುರಸ್ತಿ ಆಗುತ್ತಿದೆ. ಹೊರ ರಾಜ್ಯದ ಬಂಡವಾಳ ಶಾಹಿಗಳು ಕೊಡಗಿನಲ್ಲಿ ಭೂಮಿ ಖರೀದಿಸಿದರೆ, ಕೂಡಲೆ ದುರಸ್ತಿ ಆಗುತ್ತದೆ. ಇದೊಂದು ದಂಧೆಯಾಗಿದೆ ಎಂದು ಎಸ್.ಬಿ.ಭರತ್ ಮತ್ತಿತರರು ಆರೋಪಿಸಿದರು.ಸಿ ಮತ್ತು ಡಿ ಭೂಮಿ, ಸಾಮಾಜಿಕ ಅರಣ್ಯ ಒತ್ತುವರಿ ತೆರವಿನ ಬಗ್ಗೆ ಕೂತಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ರೈತರಿಗೋಸ್ಕರ ಹೋರಾಟ ಮಾಡಲು ನಾನು ಮತ್ತು ವಿರಾಜಪೇಟೆ ಶಾಸಕರು ಸದಾ ಸಿದ್ಧರಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಅರಣ್ಯ ಹಾಗು ಕಂದಾಯ ಸಚಿವರನ್ನು ಜಿಲ್ಲೆಗೆ ಬರಮಾಡಿಕೊಂಡು ಎಲ್ಲಾ ಸಮಸ್ಯೆಗಳನ್ನು ಇತ್ಯಾರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಅರಣ್ಯ ವ್ಯವಸ್ಥಾಪನಾಧಿಕಾರಿಗಳ ಕಚೇರಿ ಮೈಸೂರು ವಿಭಾಗದಲ್ಲಿ ನಿವೃತ್ತ ಕೆ.ಎ.ಎಸ್. ಅಧಿಕಾರಿ ರೇಣುಕಾಂಬ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಅಲ್ಲಿಂದ ಗ್ರಾಮಗಳಿಗೆ ನೋಟೀಸು ಜಾರಿಯಾಗುತ್ತಿದೆ. ಒತ್ತುವರಿಗೆ ಸಂಬಂಧಿಸಿದ ಆಸ್ತಿಯ ದಾಖಲೆ ಇದ್ದವರು ಸಮಿತಿಗೆ ಒದಗಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೂ ಚರ್ಚಿಸಲಾಗುವುದು. ಡಿಸಿಎಫ್ ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಸಭೆಯನ್ನು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.