ಕಾರ್ಮಿಕರ ಸೌಲಭ್ಯ ಅರ್ಜಿ ಸ್ವೀಕಾರ ವಿಳಂಬಕ್ಕೆ ಆಕ್ರೋಶ

| Published : Jun 03 2024, 12:30 AM IST

ಸಾರಾಂಶ

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ತಡೆಹಿಡಿಯಲಾದ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಸ್ವೀಕರಿಸಲು ಕ್ರಮವಹಿಸಬೇಕು. ಶೈಕ್ಷಣಿಕ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಆಗಸ್ಡ್‌ವರೆಗೆ ವಿಸ್ತರಿಬೇಕು

ಕನ್ನಡಪ್ರಭ ವಾರ್ತೆ ತುಮಕೂರುರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ತಡೆಹಿಡಿಯಲಾದ ಕಟ್ಟಡ ಕಾರ್ಮಿಕರ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಸ್ವೀಕರಿಸಲು ಕ್ರಮವಹಿಸಬೇಕು. ಶೈಕ್ಷಣಿಕ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಆಗಸ್ಡ್‌ವರೆಗೆ ವಿಸ್ತರಿಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟಿಸಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕದ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಚುನಾವಣೆ ಹೊತ್ತಿನಲ್ಲಿ ಯಾವುದೇ ತಡೆಯಿಲ್ಲದೆ ಜಾರಿಗೊಳ್ಳುತ್ತಿವೆ. ಆದರೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ನೆಪ ಹಾಗೂ ತಂತ್ರಾಂಶದ ನೆಪವೂಡ್ಡಿ ಫಲಾನುಭವಿ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ, ಹೆರಿಗೆ, ಮದುವೆ ಸಹಾಯಧನ ಅರ್ಜಿಗಳ ಸ್ವೀಕಾರವನ್ನು ತಡೆವೊಡ್ಡಿರುವುದು ಮತ್ತು ಬಡಕಾರ್ಮಿಕರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ನಿರಾಕರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಮಂಡಳಿ ಈ ಕ್ರಮವನ್ನು ವಿರೋಧಿಸಿ ರಾಜ್ಯದ ಕಾರ್ಮಿಕಾಧಿಕಾರಿಗಳು ಹಾಗೂ ತಾಲೂಕು ನಿರೀಕ್ಷಕರ ಕಚೇರಿ ಹಾಗೂ ಬೆಂಗಳೂರಿನಲ್ಲಿ ಕಲ್ಯಾಣ ಮಂಡಳಿ ಎದುರು ನಡೆಲಾಗುತ್ತಿದೆ. ಕೂಡಲೇ ಸೌಲಭ್ಯಗಳ ಅರ್ಜಿ ಸ್ವೀಕರಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದ್ದಾರೆ.ಕರ್ನಾಟಕ ಹೈಕೋರ್ಟ್‌ನಲ್ಲಿ ಏಪ್ರಿಲ್23 ರಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಕುರಿತಾಗಿ ಮಧ್ಯಂತರ ಆದೇಶ ನೀಡಿರುವ ನ್ಯಾಯಾಲಯವು ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ತುಂಬಿರುವ ಕಾಲೇಜು ಶುಲ್ಕವನ್ನು ಈ ಆದೇಶವಾಗಿರುವ ನಾಲ್ಕು ವಾರದೊಳಗೆ ಅವರ ಖಾತೆಗೆ ಪಾವತಿಸಲು ಆದೇಶ ನೀಡಿತ್ತು. ಆದರೆ ಇಬ್ಬರು ಕಟ್ಟಡ ಕಾರ್ಮಿಕರ ಮಕ್ಕಳಾದ ಅಮೃತಾ ಹಾಗೂ ಅಕ್ಷತಾ ಅವರಿಗೆ 2021ರ ಅಧಿಸೂಚನೆ ಅನ್ವಯ ನಾಲ್ಕುವಾರವಾಗುತ್ತಾ ಬಂದರೂ ಕಲ್ಯಾಣ ಮಂಡಳಿಯು ಹೈಕೋರ್ಟ್ ಮಧ್ಯಂತರ ಆದೇಶ ಜಾರಿ ಮಾಡದೇ ಉಲ್ಲಂಘಿಸಿದೆ.ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ಸೆಸ್ ಹಣ ಇದೆ. ಅಲ್ಲದೆ ಈ ಪ್ರಕರಣದಲ್ಲಿ ವಾದಮಾಡಲು ನೇಮಿಸಿದ ವಕೀಲರಿಗೆ ಲಕ್ಷಾಂತರ ಶುಲ್ಕವನ್ನು ಮಂಡಳಿಯು ನೀಡುತ್ತಿದೆ. ನೂರಾರು ಕೋಟಿ ರುಪಾಯಿಗಳ ಅನಗತ್ಯ ಖರೀದಿಗಳನ್ನು ಮಾಡಲಾಗುತ್ತಿದೆ. ಆದರೆ ಬಡ ಕಾರ್ಮಿಕರ ಇಬ್ಬರು ಮಕ್ಕಳಿಗೆ ಮಾತ್ರ ಹೈಕೋರ್ಟ್ ಆದೇಶದಂತೆ 60 ಸಾವಿರ ರು. ಮತ್ತು 55 ಸಾವಿರ ರುಪಾಯಿಗಳನ್ನು ಪಾವತಿಸಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಜೂನ್ 7 ೭ರಂದು ಕಲ್ಯಾಣ ಮಂಡಳಿಯ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಫೆಡರೇಶನ್ ನಿರ್ಧರಿಸಿದೆ.ಕೂಡಲೇ ಆನ್‌ಲೈನ್ ನಲ್ಲಿ ಮಂಡಳಿಯ ಸೌಲಭ್ಯಗಳ ಅರ್ಜಿಗಳನ್ನು ಸ್ವೀಕರಿಸಲು ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಶೈಕ್ಷಣಿಕ ಅರ್ಜಿಗಳ ಸ್ವೀಕಾರ ಅವಧಿಯನ್ನು ಆಗಸ್ಟ್ 31 ರವರೆಗೆ ವಿಸ್ತರಿಸಬೇಕು. 2023ರ ಅಧಿಸೂಚನೆಯನ್ನು ರದ್ದುಮಾಡಿ 2021ರ ಅಧಿಸೂಚನೆ ಅನ್ವಯವೇ ಶೈಕ್ಷಣಿಕ ಧನಸಹಾಯ ಜಾರಿ ಮಾಡಬೇಕು ಎಂದಿದ್ದಾರೆ.ಹೊಸ ಅರ್ಜಿ ಹಾಗೂ ನವೀಕರಣ ಕುರಿತು ಉಂಟಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು, ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಂತೆ ಅಮೃತಾ ಹಾಗೂ ಅಕ್ಷತಾ ಎನ್ನುವ ಇಬ್ಬರು ವಿದ್ಯಾರ್ಥಿನಿಯರಿಗೆ ಕೂಡಲೇ ದಂಡ ಸಹಿತ ಶೈಕ್ಷಣಿಕ ಧನ ಸಹಾಯ ಪಾವತಿಸಲು ಕ್ರಮವಹಿಸಬೇಕು ಎಂದಿದ್ದಾರೆ.

ಎಲ್ಲ ರೀತಿಯ ಖರೀದಿಗಳನ್ನು ನಿಲ್ಲಿಸಿ ಜಾರಿಯಲ್ಲಿರುವ ಎಲ್ಲ ಸೌಲಭ್ಯಗಳ ಸಹಾಯಧನವನ್ನು ನೇರ ವರ್ಗಾವಣೆ ಮೂಲಕವೇ ಪಾವತಿಸಬೇಕು ಎಂದಿದ್ದಾರೆ. ಪ್ರತಿಭಟನೆಯಲ್ಲಿ ಬಿ. ಉಮೇಶ್, ಗಂಗಾಧರ್, ಇಬ್ರಾಹಿಂ ಖಲೀಲ್, ಟಿ.ಎಂ. ಗೋವಿಂದರಾಜು, ಶಂಕರಪ್ಪ, ವೆಂಕಟೇಶ್ ಎಂ.ಟಿ. ಮೊದಲಾದವರು ಇದ್ದರು.