ಸಾರಾಂಶ
- ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಮಸ್ಯೆ, ಸಮಾನ ವೇತನ ಸೇರಿದಂತೆ ಮೂಲ ಬೇಡಿಕೆಗೆಗೆ ಸಂಘಟನೆ ಅಗತ್ಯ ವಾಗಿದ್ದು ಸಮರ್ಥವಾಗಿ ನಿರ್ವಹಿಸುವ ಜವಾಬ್ದಾರಿ ಪದಾಧಿಕಾರಿಗಳ ಮೇಲಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಮೋಹನ್ ಕುಮಾರ್ ಹೇಳಿದರು.
ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ಡಿ ಗ್ರೂಪ್ ನೌಕರರಿಂದ ನಡೆದ ರಕ್ತದಾನ ಶಿಬಿರ ಉದ್ಘಾಟಿಸ ಮಾತನಾಡಿದರು. ಪ್ರಸ್ತುತ ಜಿಲ್ಲಾಸ್ಪತ್ರೆ ವೈದ್ಯಕೀಯವಾಗಿ ಮೇಲ್ದರ್ಜೆಗೇರಿದೆ. ಹೀಗಾಗಿ ನೌಕರರ ಹಕ್ಕು, ಧ್ವನಿ ಹಾಗೂ ಅಹವಾಲುಗಳನ್ನು ಸರಿದೂಗಿಸಿಕೊಂಡು ಕೆಲಸ ಮಾಡಬೇಕಿದೆ. ಜವಾಬ್ದಾರಿಯುತ ನೌಕರರಾಗಿ ಕಾರ್ಯನಿರ್ವಹಿಸಿದರೆ ಮೂಲ ಬೇಡಿಕೆ ಈಡೇರಲು ಸಾಧ್ಯ ಎಂದು ತಿಳಿಸಿದರು.ಇದೀಗ ಪ್ರಾರಂಭಗೊಂಡಿರುವ ನೌಕರರ ಸಂಘ ಸವಲತ್ತು ಪಡೆದುಕೊಳ್ಳಲು ರಾಜ್ಯ ಸಂಘದ ಪ್ರತಿ ನಿಧಿಗಳೊಂದಿಗೆ ನಂಟು ಬೆಳೆಸಬೇಕು. ಈ ವೃತ್ತಿಯಲ್ಲಿ ಆದಷ್ಟು ಮಧ್ಯಮ ವರ್ಗದವರು ಕೆಲಸ ನಿರ್ವಹಿಸುತ್ತಿರುವ ಪರಿಣಾಮ ಜೀವನಕ್ಕಾನುಸಾರ ಬೇಡಿಕೆ ಪೂರೈಸಬೇಕಿದೆ. ಅಲ್ಲದೇ ಜಿಲ್ಲಾಸ್ಪತ್ರೆ ಕಡು ಬಡವರ ಆರೋ ಗ್ಯ ಸುಧಾರಿಸುವ ಕೇಂದ್ರವಾಗಿದ್ದು ರೋಗಿಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಮಾತನಾಡಿ, ನಿಗಧಿತ ವೇತನದ ನಡುವೆಯು ರೋಗಿಗಳ ಆರೈಕೆಯಲ್ಲಿ ತೊಡಗುತ್ತಿರುವ ನೌಕರರಿಗೆ ಕಾಲ ಕ್ರಮೇಣ ಸೌಲಭ್ಯಗಳು ದೊರಯಬೇಕಾಗಿದೆ. ಜೊತೆಗೆ ರೋಗಿ ಗಳ ನೋವಿನ ಸಂದರ್ಭದಲ್ಲಿ ಅರ್ಥೈಸಿಕೊಂಡು ಚಿಕಿತ್ಸೆ ನೀಡುವುದು ಅತಿಮುಖ್ಯ ಎಂದು ತಿಳಿಸಿದರು.ರಕ್ತನಿಧಿ ಕೇಂದ್ರದ ಡಾ. ಮುರುಳೀಧರ್ ಮಾತನಾಡಿ, ಜ್ಞಾನ, ತಂತ್ರಜ್ಞಾನ ಹಾಗೂ ವಿಜ್ಞಾನ ಎಷ್ಟೇ ಬೆಳೆದರೂ ಕೃತಕ ರಕ್ತ ಉತ್ಪಾದಿಸಲು ವಿಜ್ಞಾನಿಗಳಿಂದ ಸಾಧ್ಯವಾಗಿಲ್ಲ. ಮಾನವನಿಂದಲೇ ಮತ್ತೋರ್ವ ಮಾನವನಿಗೆ ರಕ್ತ ನೀಡಲು ಸಾಧ್ಯ. ಹೀಗಾಗಿ ರಕ್ತದಾನದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಶಿಬಿರದ ಮಹತ್ವ ತಿಳಿಸಬೇಕಿದೆ ಎಂದು ಹೇಳಿದರು. ಸಂಘದ ಜಿಲ್ಲಾಧ್ಯಕ್ಷ ಎನ್.ಡಿ.ಸಂದೀಪ್ ಮಾತನಾಡಿ, ಪ್ರಸ್ತುತ ಸಂಘ ನೂತನವಾಗಿ ಪ್ರಾರಂಭಗೊಂಡು ಐದಾರು ತಿಂಗಳು ಕಳೆದಿದೆ. ಜೊತೆಗೆ ಖಾಯಂ ನೌಕರರಂತೆ ಸಮಾನ ವೇತನ, ಹೆರಿಗೆ ರಜೆ, ಕಾಯಂಗೊಳಿಸುವ ಬೇಡಿಕೆಗಳನ್ನು ಪೂರೈಸ ಬೇಕಿದೆ ಎಂದು ಮನವಿ ಮಾಡಿದರು.ಇದೇ ವೇಳೆ 32 ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಉಪಾದ್ಯಕ್ಷೆ ಕೆ.ಎಸ್. ಮಂಜುಳಾ, ನಿರ್ದೇಶಕರಾದ ದಿವ್ಯ, ಕವಿತಾ ಬಾಯಿ, ವೈದ್ಯರಾದ ಡಾ. ಕಲ್ಪನಾ, ಡಾ. ಸುಶೀಲಾ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸೂರ್ಯ ನಾರಾಯಣ್, ಜಿಲ್ಲಾ ಶೂಶ್ರುಷಕ ಸಂಘದ ಕಾರ್ಯದರ್ಶಿ ಕೆ.ಎಸ್.ರಂಗನಾಥ್, ಪ್ರಮೋದ್ ಉಪಸ್ಥಿತರಿದ್ದರು.
23 ಕೆಸಿಕೆಎಂ 2ಚಿಕ್ಕಮಗಳೂರಿನ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಇಲಾಖೆ ಹೊರಗುತ್ತಿಗೆ ನೌಕರರ ಸಂಘದ ಡಿ ಗ್ರೂಪ್ ನೌಕರರಿಂದ ನಡೆದ ರಕ್ತದಾನ ಶಿಬಿರವನ್ನು ಡಾ. ಮೋಹನ್ಕುಮಾರ್ ಉದ್ಘಾಟಿಸಿದರು.