ಕನ್ನಡಪ್ರಭ ವಾರ್ತೆ ಶಿರಸಿ
ಶ್ರೀ ಮಾರಿಕಾಂಬಾ ದೇವಿಯ 6ನೇ ದಿನದ ಜಾತ್ರಾ ಮಹೋತ್ಸವಕ್ಕೆ 3 ಲಕ್ಷಕ್ಕೂ ಹೆಚ್ಚು ಭಕ್ತರ ದಂಡು ಹರಿದು ಬಂದಿತ್ತು. ಬೆಳಗ್ಗೆ 5 ಗಂಟೆಯಿಂದಲೇ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ದೇವಿಗೆ ಉಡಿ ತುಂಬುವುದು ಮತ್ತು ಹಣ್ಣ ಕಾಯಿ ಸೇವೆ ಸಲ್ಲಿಸಿದರು.ವಿಕೆಂಡ್ ಇರುವ ಕಾರಣ ಸರಕಾರಿ ನೌಕರರು ಹಾಗೂ ವಿವಿಧ ಪ್ರದೇಶಗಳಿಂದ ಹಲವಾರು ಜನ ಭಕ್ತಾಧಿಗಳು ದೇವಿಯ ಸನ್ನಿಧಿಗೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಆದರೆ ಏಕಾಏಕಿ ಭಕ್ತಾಧಿಗಳು ಹರಿದು ಬಂದಿರುವುದರಿಂದ ಪೊಲೀಸರಿಗೆ ಹಾಗೂ ಸ್ವಯಂ ಸೇವಕರಿಗೆ ಭಕ್ತಾಧಿಗಳನ್ನು ನಿಯಂತ್ರಿಸುವುದು ಒಂದು ಸವಾಲಾಗಿಯೇ ಪರಿಣಮಿಸಿತ್ತು.ನಗರದ ಅನೇಕ ಕಡೆಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಬಂದ ಭಕ್ತಾಧಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಅನ್ನಸಂತರ್ಪಣೆ ಕೈಗೊಳ್ಳಲಾಗಿತ್ತು .
ಪ್ರತಿ ದಿನಕ್ಕೆ ಹೋಲಿಸಿದಾಗ ಸುಮಾರು 3 ಲಕ್ಷದಿಂದ 4 ಲಕ್ಷದವರೆಗೆ ದೇವಿಯ ದರ್ಶನಕ್ಕೆ ಭಕ್ತರು ಹರಿದು ಬಂದಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸುವುದು ಮತ್ತು ಹರಕೆ ತೀರಿಸುವುದು, ಕುಂಕುಮಾರ್ಚೆನೆ ಮತ್ತು ಪ್ರಸಾದ ಸ್ವೀಕರಿಸುತ್ತಿರುವುದು ವಿಶೇಷವಾಗಿತ್ತು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ರೀ ಮಾರಿಕಾಂಬಾ ಗದ್ದುಗೆಗೆ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜಾ ಕೈಂಕರ್ಯ ಸಲ್ಲಿಸಿ ಜಿಲ್ಲೆ, ರಾಜ್ಯ ಮತ್ತು ದೇಶದ ಜನತೆಗೆ ಶ್ರೀದೇವಿಯು ಸುಖ ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥನೆಗೈದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕುಟುಂಬ ಸಮೇತ ಭೇಟಿ ನೀಡಿ ಶ್ರೀದೇವಿಗೆ ವಿಶೇಷ ಪೂಜೆ ಸಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭ ದೇವಸ್ಥಾನದ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿ ಶಿವಾನಂದ ಶೆಟ್ಟಿ , ಬಾಬುದಾರ ಜಗದೀಶಗೌಡ ಹಾಗೂ ಸಿಬ್ಬಂದಿ ಇದ್ದರು.