ಸಾರಾಂಶ
ಕಿಕ್ಕೇರಿ: ಸಮೀಪದ ಮಂದಗೆರೆ ಬಳಿ ಹೇಮಾವತಿ ನದಿಯು ಪ್ರವಾಹದಂತೆ ಉಕ್ಕಿ ಹರಿಯುತ್ತಿರುವುದರಿಂದ ಜನ- ಜಾನುವಾರುಗಳನ್ನು ನದಿಪಾತ್ರದ ಬಳಿ ತೆರಳದಂತೆ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಹಾಸನದ ಗೊರೂರು ಅಣೆಕಟ್ಟೆಯಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೇಮಾವತಿ ನದಿಗೆ ಬಿಡಲಾಗಿದೆ. ಪ್ರವಾಹದಂತೆ ನೀರು ಹರಿದು ಬರುತ್ತಿದೆ ಎಂದು ತಿಳಿಸಿದ್ದಾರೆ.ನದಿ ಪಾತ್ರದ ಗೊಂದಿಹಳ್ಳಿ, ದಬ್ಬೇಘಟ್ಟ, ಮಾದಾಪುರ, ಚಿಕ್ಕಮಂದಗೆರೆ, ಶ್ರವಣೂರು, ಹೇಮಗಿರಿ, ಬಂಡಿಹೊಳೆ, ನಾಟನಹಳ್ಳಿ, ಅಕ್ಕಿಹೆಬ್ಬಾಳು ಮತ್ತಿತರ ತಾಲೂಕಿನ ಪ್ರದೇಶಗಳಲ್ಲಿ ಹೇಮಾವತಿ ನದಿ ಹರಿಯುತ್ತಿದೆ. ನೀರಿನ ಒಳಹರಿವು ಮೇಲ್ಭಾಗದಲ್ಲಿ ಹೆಚ್ಚಾಗಿದ್ದು, ಅಣೆಕಟ್ಟಿನಿಂದ ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಿದೆ, ನದಿ ದಂಡೆಯ ರೈತರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಹೇಮಾವತಿ ನದಿಯಲ್ಲಿ ಸ್ನಾನ ಮಾಡುವುದು, ಈಜುವುದು, ಜಾನುವಾರುಗಳನ್ನು ತೊಳೆಯುವುದು, ನೀರು ಕುಡಿಸುವುದು ಮಾಡಬಾರದು. ಯುವಕರು ಸೆಲ್ಫಿ ತೆಗೆದುಕೊಳ್ಳಲು ನದಿಪಾತ್ರಕ್ಕೆ ತೆರಳಬಾರದು ಎಂದು ಮನವಿ ಮಾಡಿದ್ದಾರೆ.ಇನ್ಸ್ಪೆಕ್ಟರ್ ರೇವತಿ ನದಿ ಪಾತ್ರದಲ್ಲಿರುವ ಮನೆ, ಮೀನುಗಾರರು ಬಳಿ ತೆರಳಿ ನದಿಗೆ ತೆರಳದಂತೆ ತಿಳಿ ಹೇಳಿದ್ದಾರೆ. ಅಲ್ಲಲ್ಲಿ ಮುನ್ನೆಚ್ಚರಿಕೆಯ ಫ್ಲೆಕ್ಸ್ ಫಲಕ ಅಳವಡಿಸಿ ಪೊಲೀಸರು ಗಸ್ತು ತಿರುಗುವ ಮೂಲಕ ಮನವರಿಕೆ ಮಾಡಲಾಗುತ್ತಿದೆ.ಹೇಮಾವತಿ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಆನಂದ್, ತಾಪಂ ಇಒ ಸತೀಶ್, ಇನ್ ಸ್ಪೆಕ್ಟರ್ ರೇವತಿ, ದಬ್ಬೇಘಟ್ಟ ಗ್ರಾಪಂ ಪಿಡಿಒ ಉಮಾಶಂಕರ್, ಮಂದಗೆರೆ ಪಿಡಿಒ ಸುವರ್ಣ, ಎಎಸ್ಐರಮೇಶ್, ಶಿವಲಿಂಗಯ್ಯ, ಎಇಇ ವಿಶ್ವನಾಥ್, ರಾಘವೇಂದ್ರ, ಮೋಹನ್ಕುಮಾರ್, ಎಚ್.ಡಿ.ನಾಯಕ ಇದ್ದರು.