ಸಿದ್ಧೇಶ್ವರ ಶ್ರೀಗಳ ತತ್ವ ಸಾರಲು 83 ಹಳ್ಳಿಗಳಿಗೆ ಪಾದಯಾತ್ರೆ

| Published : Oct 07 2025, 01:03 AM IST

ಸಿದ್ಧೇಶ್ವರ ಶ್ರೀಗಳ ತತ್ವ ಸಾರಲು 83 ಹಳ್ಳಿಗಳಿಗೆ ಪಾದಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಸನ್ಯಾಸ, ತ್ಯಾಗ ಮತ್ತು ಜ್ಞಾನದ ಮೂರ್ತಿವೆತ್ತ ಸ್ವರೂಪವಾಗಿದ್ದ ಶತಮಾನದ ಸಂತ ಸಿದ್ದೇಶ್ವರ ಶ್ರೀಗಳ ಸಿದ್ಧಾಂತಗಳನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ವದ ಸಂಕಲ್ಪವನ್ನು ಹೊಂದಿದ್ದು, ಸಿದ್ದೇಶ್ವರ ಶ್ರೀಗಳ ದಶಕಗಳ ಕಾಲದ ವೈರಾಗ್ಯದ ಸಂಕೇತವಾಗಿರುವ ಪಾದುಕೆಗಳ ಸಹಿತ 83 ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಶ್ರೀಗಳು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಐಗಳಿ

ಸನ್ಯಾಸ, ತ್ಯಾಗ ಮತ್ತು ಜ್ಞಾನದ ಮೂರ್ತಿವೆತ್ತ ಸ್ವರೂಪವಾಗಿದ್ದ ಶತಮಾನದ ಸಂತ ಸಿದ್ದೇಶ್ವರ ಶ್ರೀಗಳ ಸಿದ್ಧಾಂತಗಳನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹತ್ವದ ಸಂಕಲ್ಪವನ್ನು ಹೊಂದಿದ್ದು, ಸಿದ್ದೇಶ್ವರ ಶ್ರೀಗಳ ದಶಕಗಳ ಕಾಲದ ವೈರಾಗ್ಯದ ಸಂಕೇತವಾಗಿರುವ ಪಾದುಕೆಗಳ ಸಹಿತ 83 ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ಕಕಮರಿಯ ಗುರುದೇವ ಆಶ್ರಮದ ಆತ್ಮಾರಾಮ ಶ್ರೀಗಳು ಘೋಷಿಸಿದರು.

ಸಮೀಪದ ಕಕಮರಿ ಗ್ರಾಮದ ಗುರುದೇವ ಆಶ್ರಮದಲ್ಲಿ ಆತ್ಮಾರಾಮ ಶ್ರೀಗಳ ಅಖಂಡ ನಿರಾಹಾರ ಮೌನ ಅನುಷ್ಠಾನ ಮತ್ತು ಕೋಟಿಜಪಯಜ್ಞದೊಂದಿಗೆ ಮುಕ್ತಾಯ ಸಮಾರಂಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳ ಬದುಕಿನ ವೈರಾಗ್ಯಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಅವರು ಸುಮಾರು 10 ವರ್ಷಗಳ ಕಾಲ ಒಂದೇ ಪಾದುಕೆಯನ್ನು ಮೆಟ್ಟಿದ್ದರು. ಇದು ಅವರ ನಿಸ್ಪೃಹ ಜೀವನಶೈಲಿಯನ್ನು ತೋರಿಸುತ್ತದೆ. ಆ ಪಾದುಕೆಗಳು ಕೇವಲ ಪಾದರಕ್ಷೆಗಳಲ್ಲ, ಬದಲಿಗೆ ಅವರ ಅಸಂಗತ್ವದ ಸಂಕೇತ, ಈ 10 ವರ್ಷಗಳ ಪಾದುಕೆಗಳ ಸ್ಮರಣೆಯ ಜೊತೆಗೆ, ಸಿದ್ದೇಶ್ವರ ಶ್ರೀಗಳ ತತ್ವ ಸಿದ್ಧಾಂತಗಳನ್ನು ಸಾರುವ ಉದ್ದೇಶದಿಂದ ಆಶ್ರಮವು 81 ಹಳ್ಳಿಗಳಿಗೆ ಪಾದಯಾತ್ರೆ ಕೈಗೊಳ್ಳಲಿದೆ. ಈ ಮೂಲಕ ಸಿದ್ದೇಶ್ವರ ಶ್ರೀಗಳ ಸಂದೇಶಗಳನ್ನು ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ತಲುಪಿಸುವ ಗುರಿಯನ್ನು ಹೊಂದಲಾಗಿದೆ. ಸಿದ್ದೇಶ್ವರ ಶ್ರೀಗಳ ಸ್ಮರಣಾರ್ಥವಾಗಿ ಮಹತ್ವದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಮುಂದಿನ ಡಿಸೆಂಬರ್ 30 ರಂದು ವೈಕುಂಠ ಏಕಾದಶಿಯ ಪುಣ್ಯದಿನದಂದು, 30 ರಿಂದ 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳ ಸಮ್ಮುಖದಲ್ಲಿ ಸಿದ್ದೇಶ್ವರ ಶ್ರೀಗಳ ಪಾದರಕ್ಷೆಯನ್ನು ಅನಾವರಣಗೊಳಿಸಲಾಗುವುದು. ಈ ಭವ್ಯ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಸಹ ಉಪಸ್ಥಿತರಿರಲಿದ್ದಾರೆ ಎಂದರು.ಮಾಜಿ ಶಾಸಕ ಶಹಹಾನ ಡೊಂಗರಗಾಂವ, ಅಮ್ಮಾಜೇಶ್ವರಿ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಅಪ್ಪುಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪೂರ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳು ಬಸವಲಿಂಗ ಶ್ರೀಗಳು, ಶ್ರದ್ಧಾನಂದ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಯೋಗಾನಂದ ಶ್ರೀಗಳು, ಸಿದ್ದರಾಮೇಶ್ವರ ಪಟ್ಟದ ದೇವರು, ಅಧ್ವೈತಾನಂದ ಶ್ರೀಗಳು, ಗಂಗಣ್ಣ ಮಹಾರಾಜರು ಸೇರಿದಂತೆ ಗಣ್ಯರು, ಮುಖಂಡರು ಉಪಸ್ಥಿತರಿದ್ದರು. ಮಹಾಂತೇಶ ಮಠಪತಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕರಡಿ ನಿರೂಪಿಸಿ, ವಂದಿಸಿದರು.ಕಿಸೆ ಇಲ್ಲದ ಬಟ್ಟೆ ತೊಟ್ಟರು. ಹರಿದ ಅಂಗಿಯನ್ನು ಹೊಲೆದು ಹಾಕಿಕೊಂಡರು. ಲೌಕಿಕ ಆಸೆಯ ಕಲ್ಮಶವಿಲ್ಲದ ಬದುಕು ಸಾಗಿಸಿ, ದೇವರನ್ನೇ ನಾಚಿಸುವ ಶುದ್ಧ ವೈರಾಗ್ಯವನ್ನು ಸಿದ್ಧೇಶ್ವರ ಶ್ರೀಗಳು ಲೋಕಕ್ಕೆ ತೋರಿಸಿದರು. ತಮ್ಮ ನಿಷ್ಕಾಮ ಜ್ಞಾನದಿಂದ ಸಮಾಜಕ್ಕೆ ಬೆಳಕಾದ ಅವರ ಬದುಕು, ಸನ್ಯಾಸಿಗಳಿಗೆ ಸದಾ ಮಾದರಿ ಮತ್ತು ಸ್ಫೂರ್ತಿಯ ಚಿಲುಮೆಯಾಗಿದೆ.

-ಆತ್ಮಾರಾಮ ಶ್ರೀಗಳು, ಗುರುದೇವ ಆಶ್ರಮ ಕಕಮರಿ.