ಸಾರಾಂಶ
ತಾಳಿಕೋಟೆ: ತಾಲೂಕಿನ ಪಡೆಕನೂರ ಗ್ರಾಮದ ಶ್ರೀ ದಾಸೋಹ ವಿರಕ್ತಮಠದ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ಸಲವು ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಮಾ.೯ರಂದು ಕರ್ತುಗದ್ದುಗೆಗೆ ಮಹಾಗಣಯಜ್ಞ ಹೋಮ ಕಾರ್ಯಕ್ರಮದ ನಂತರ ಮಾನವ ಏಕತಾ ಧರ್ಮಸಭೆ ಮತ್ತು ಉಚಿತ ಸಾಮೂಹಿಕ ವಿವಾಹವು ಜರುಗಲಿದೆ. ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಮಹಾ ಸಂತರು ಭಾಗವಹಿಸಿ ನೂತನ ವಧುವರರಿಗೆ ಆಶಿರ್ವದಿಸಲಿದ್ದಾರೆ.
ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ನೂತನ ವಧು-ವರರಿಗೆ ತಾಳಿ, ಬಟ್ಟೆ, ಕಾಲುಂಗರವನ್ನು ಢವಳಗಿಯ ಗಣ್ಯ ಉದ್ದಿಮೆದಾರರಾದ ಸಿದ್ದನಗೌಡ ಬಿರಾದಾರ ನೀಡಲು ಮುಂದಾಗಿದ್ದಾರೆ.
ಕಾರಣ ಈ ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ನೂತನ ವಧು-ವರರಿಗೆ ವಧುವಿಗೆ ೧೮ ವರ್ಷ, ವರನಿಗೆ ೨೧ ವರ್ಷ ತುಂಬಿರಬೇಕು ಇದಕ್ಕೆ ಸಂಬಂಧಿಸಿ ಶಾಲಾ ದಾಖಲಾತಿ ಎಲ್ಸಿ ಅಥವಾ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತರೆ ದಾಖಲಾತಿಯೊಂದಿಗೆ ಮಾ.೫ ರೊಳಗಾಗಿ ಹೆಸರನ್ನು ನೋಂದಾಯಿಸಬೇಕು.
ಮಾಹಿತಿಗೆ ಮೊ.೯೯೦೧೪೭೭೪೦೦, ೭೭೬೦೮೭೦೯೩೭ಗೆ ಸಂಪರ್ಕಿಸಬಹುದಾಗಿದೆ. ಈ ಜಾತ್ರಾ ಉತ್ಸವದ ಅಂಗವಾಗಿ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಭಕ್ತರಿಗೆ ಲಿಂಗ ದೀಕ್ಷಾ ಕಾರ್ಯಕ್ರಮವನ್ನು ಮಾ.೮ ರಂದು ಆಯೋಜಿಸಲಾಗಿದೆ. ಜಂಗಮ ವಟುಗಳು ಅಯ್ಯಾಚಾರ ಮತ್ತು ಲಿಂಗ ದೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕೂಡಾ ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.