ಕರಾವಳಿಯಲ್ಲಿ ಜನರ ಭಾವನೆಗಳನ್ನು ಯಾಮಾರಿಸುವ ಕೆಲಸ ಮಾಡುತ್ತಿರುವ ವಿಪಕ್ಷಗಳಿಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ದಿಟ್ಟ ಉತ್ತರ ನೀಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಪೂಜಾರಿ ಹೇಳಿದ್ದಾರೆ.
ಮಂಗಳೂರು: ಕರಾವಳಿಯಲ್ಲಿ ಜನರ ಭಾವನೆಗಳನ್ನು ಯಾಮಾರಿಸುವ ಕೆಲಸ ಮಾಡುತ್ತಿರುವ ವಿಪಕ್ಷಗಳಿಗೆ ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ದಿಟ್ಟ ಉತ್ತರ ನೀಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಪದ್ಮರಾಜ್ ಪೂಜಾರಿ ಹೇಳಿದ್ದಾರೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುವರ ದಶಕದ ಹೋರಾಟಕ್ಕೆ ಈಗ ಸರ್ಕಾರ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಿದೆ. ಮಂಗಳೂರು ಕ್ಯಾಬಿನೆಟ್ ಕೈಗೊಂಡ ತೀರ್ಮಾನಗಳು ಎಲ್ಲರಿಗೆ ಬೆಂಚ್ ಮಾರ್ಕ್ ಆಗಿದೆ. ಕರಾವಳಿಗೆ ಮಹತ್ತರ ಕೊಡುಗೆ ನೀಡುವ ಮೂಲಕ ಮುಖ್ಯಮಂತ್ರಿಗಳು ಜನರ ಭಾವನೆಗೆ ಸ್ಪಂದಿಸಿದ್ದಾರೆ ಎಂದರು.ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯದ ಜೊತೆಗೆ ಮೂಲಸೌಕರ್ಯ ವೃದ್ಧಿಗೂ ಆದ್ಯತೆ ನೀಡಿದ್ದಾರೆ. ದ.ಕ. ಜಿಲ್ಲೆಯ ಹೆಸರನ್ನು ಮಂಗಳೂರು ಆಗಿ ಪರಿವರ್ತಿಸಲು ಜನಾಭಿಪ್ರಾಯ ಬೇಕು ಎಂಬ ನಿರ್ಧಾರವೂ ಶ್ಲಾಘನಾರ್ಹವಾಗಿದೆ. ಪುತ್ತೂರು ಮೆಡಿಕಲ್ ಕಾಲೇಜಿಗೆ ಅನುದಾನವೇ ಮೊದಲಾದ ನಿರ್ಧಾರಗಳು ಸರ್ಕಾರದ ಜನಸೇವೆಯ ದ್ಯೋತಕವಾಗಿದೆ. ಇದರೊಂದಿಗೆ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವುದು ಇಲ್ಲಿ ಸಾಬೀತಾಗಿದೆ ಎಂದರು. ಕ್ಯಾಬಿನೆಟ್ನಲ್ಲಿ ಚರ್ಚೆಗೆ ಒಳಪಡದ ವಿಚಾರಗಳೂ ಮುಂದಿನ ದಿನಗಳಲ್ಲಿ ಪ್ರಸ್ತಾಪಗೊಳ್ಳುವ ಸಾಧ್ಯತೆ ಇದೆ. ಮಂಗಳೂರಲ್ಲಿ ಹೈಕೋರ್ಟ್ ಸಂಚಾರಿ ಪೀಠದ ಬಗ್ಗೆಯೂ ಸರ್ಕಾರ ಮುತುವರ್ಜಿ ವಹಿಸಲಿದೆ ಎಂದರು. 24ರಂದು ಅಧಿಕಾರ ಸ್ವೀಕಾರ: ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಪದ್ಮರಾಜ್ ಪೂಜಾರಿ ಅವರು ಸೆ.24ರಂದು ಪಕ್ಷದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಕೂಡ ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸಲಿದ್ದಾರೆ ಎಂದು ಹಾಲಿ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.
ಮಾಜಿ ಶಾಸಕ ಜೆ.ಆರ್.ಲೋಬೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಶುಭೋದಯ, ಅಶ್ರಫ್, ನವಾಜ್, ಅಪ್ಪಿ, ಯೋಗೀಶ್ ಮತ್ತಿತರರಿದ್ದರು.