ಪಹಲ್ಗಾಮ್‌ ನರಮೇಧ: ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

| Published : Apr 24 2025, 11:50 PM IST

ಸಾರಾಂಶ

ಪಹಲ್ಗಾಂನಲ್ಲಿ ಪ್ರವಾಸಿಗರ ಭೀಕರ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಹಾಗೂ ಒತ್ತಾಯಿಸಿ, ಬಿಸಿ ರೋಡು ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಬಂದ ಹಿಂದುಗಳನ್ನು ಭೀಕರ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಹಾಗೂ ಒತ್ತಾಯಿಸಿ, ಬಿಸಿ ರೋಡು ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ನಾನಾ ಹಿಂದೂ ಸಂಘಟನೆಗಳು ಈ ಸಂದರ್ಭ ಪ್ರತಿಭಟನೆಗೆ ಸಾಥ್ ನೀಡಿದ್ದು, ಬಳಿಕ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿ ಹಣತೆ ಬೆಳಗಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಕಾಶ್ಮೀರದಲ್ಲಿ ನಡೆದಿರುವ ಘಟನೆ ಇಡೀ ದೇಶವೇ ತಲೆತಗ್ಗಿಸುವ ಕೃತ್ಯವಾಗಿದೆ, ಪ್ರತಿಯೊಬ್ಬ ಭಾರತೀಯನೂ ಇದನ್ನು ಖಂಡಿಸಲೇಬೇಕು. ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಕೈಗೊಳ್ಳುವ ಎಲ್ಲ ಕ್ರಮಗಳನ್ನು ಬೆಂಬಲಿಸಬೇಕು ಎಂದರು.

ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ನಾವೆಲ್ಲ ಹಿಂದೂಗಳು ಒಗ್ಗಟ್ಟಾಗದಿದ್ದರೆ ನಮಗೆ ಸಾವು ನಿಶ್ಚಿತ, ಭಯೋತ್ಪಾದಕ ಶಕ್ತಿಗಳಿಗೆ ಉತ್ತರ ಕೊಡುವ ಕೆಲಸವನ್ನು ಇಂದಿನಿಂದಲೇ ಪ್ರಾರಂಭಿಸೋಣ ಎಂದರು.

ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಮಾತನಾಡಿ, ಹಿಂದುಗಳನ್ನು ಹುಡುಕಿ, ಹುಡುಕಿ ಕೊಲ್ಲಲಾಗುತ್ತಿದೆ, ಹಿಂದುವಾಗಿ ಹುಟ್ಟಿದ್ದು ಅವನು ಮಾಡಿದ ತಪ್ಪೇ, ಹೀಗೆ ಮುಂದುವರಿದಲ್ಲಿ ಮುಂದಿನ ಜನಾಂಗ ಬದುಕಲು ಸಾಧ್ಯವೇ ಇಲ್ಲ, ದೇಶದ ಮಣ್ಣನ್ನು ಒಪ್ಪಿಕೊಳ್ಳದ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ಕೊನೆಗಾಣಬೇಕು ಎಂದರು.

ಮುಖಂಡರಾದ ರಾಮದಾಸ್ ಬಂಟ್ವಾಳ ಮಾತನಾಡಿ, ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸುವ ಕುರಿತು ಪ್ರಧಾನಿ ಮೋದಿ ಹೇಳಿದ್ದನ್ನು ನೆನಪಿಸಿ ಭಯವನ್ನು ಬಿತ್ತುವ ಅವರಿಗೆ ತಕ್ಕ ಶಾಸ್ತಿ ಮಾಡುವ ಕೆಲಸವಾಗಲಿದೆ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಮಾತನಾಡಿ, ಹಿಂದುಗಳಲ್ಲಿ ಜಾಗೃತಿಯಾಗಬೇಕು ಎಂದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, ಹಿಂದುಗಳು ಎಚ್ಚರಗೊಳ್ಳಬೇಕಾದ ಕಾಲ ಬಂದಿದೆ ಎಂದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಹಿಂದೂ ಸಂಘಟನೆ ಹಾಗೂ ಬಿಜೆಪಿಯ ಪ್ರಮುಖರಾದ ಸುಲೋಚನಾ ಜಿಕೆ ಭಟ್, ಪುರುಷೋತ್ತಮ‌ ಸಾಲ್ಯಾನ್ ನರಿಕೊಂಬು, ತಿರುಲೇಶ್ ಬೆಳ್ಳೂರು, ಸುಜಿತ್ ಕೊಟ್ಟಾರಿ, ಪ್ರಭಾಕರ ಪ್ರಭು, ದಿನೇಶ್ ಅಮ್ಟೂರು, ಶಿವಪ್ರಸಾದ್ ಶೆಟ್ಟಿ, ರೇಷ್ಮಾ ಶಂಕರಿ ಬಲಿಪ ಗುಳಿ, ರತ್ನಾಕರ್ ಶೆಟ್ಟಿ, ಲಖಿತಾ ಶೆಟ್ಟಿ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಸಮಿತ್ ರಾಜ್ ಧರೆಗುಡ್ಡೆ ಕಾರ್ಯಕ್ರಮ ನಿರ್ವಹಿಸಿದರು.