ಚಿತ್ರರಂಗ ಹಾಳಾಗಲು ಪ್ಯಾನ್ ಇಂಡಿಯಾ ಮನಸ್ಥಿತಿ ಕಾರಣ: ಪ್ರಥಮ್

| Published : Jun 09 2024, 01:36 AM IST

ಚಿತ್ರರಂಗ ಹಾಳಾಗಲು ಪ್ಯಾನ್ ಇಂಡಿಯಾ ಮನಸ್ಥಿತಿ ಕಾರಣ: ಪ್ರಥಮ್
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯದಲ್ಲಿ ರಾಜಕೀಯ ನಡೆದರೆ ಇಂಡಿಯಾದಲ್ಲೇ ನಡೆದಂತೆ. ಅದೇ ರೀತಿ ಮಂಡ್ಯದಲ್ಲಿ ಸಿನಿಮಾ ಗೆದ್ದರೆ ಇಂಡಿಯಾದಲ್ಲೇ ಗೆದ್ದಂತೆ ಎಂಬಂತೆ ಕಲಾವಿದರನ್ನು ಪ್ರೋತ್ಸಾಹಿಸುವ ಈ ಜಿಲ್ಲೆಯಲ್ಲಿ ಕನ್ನಡ ಸಿನಿಮಾಗಳನ್ನು ಬೆಳೆಸಬೇಕು. ಆ ಮೂಲಕ ಕಲಾವಿದರನ್ನು ಉಳಿಸಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಮನಸ್ಥಿತಿಯಿಂದಲೇ ಕನ್ನಡ ಚಿತ್ರರಂಗ ಹಾಳಾಗುತ್ತಿದೆ, ಕಲಾವಿದರೂ ಅವಕಾಶ ವಂಚಿತರಾಗಿ ಸೊರಗುತ್ತಿದ್ದಾರೆ ಎಂದು ನಟ ಪ್ರಥಮ್ ಹೇಳಿದರು.

ತಾಲೂಕಿನ ಸುಂಡಹಳ್ಳಿ ಸಿದ್ದಯ್ಯನಕೊಪ್ಪಲು ಗೇಟ್ ಬಳಿಯ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ನಡೆದ ಕಾವೇರಿ ಕಲಾಂಜಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿನಿಮಾ ಕ್ಷೇತ್ರದಲ್ಲಿ ಕನ್ನಡದ ಕಲಾವಿದರಿಗೆ ಹೆಚ್ಚಿನ ಮಾನ್ಯತೆ ಸಿಗುತ್ತಿಲ್ಲ. ಕನ್ನಡದ ನಟನನ್ನು ಚಿತ್ರತಂಡ ಆಯ್ಕೆ ಮಾಡಿದರೆ, ನಟಿಯನ್ನು ಹೊರ ರಾಜ್ಯದಿಂದ ಕರೆಸಲಾಗುತ್ತದೆ. ಅಷ್ಟೇ ಅಲ್ಲ, ಪೋಷಕ ನಟರನ್ನೂ ಹೊರಗಿನಿಂದ ಕರೆತರುವುದು ಸಾಮಾನ್ಯವಾಗಿದೆ. ಜೊತೆಗೆ ತಾಂತ್ರಿಕ ತಜ್ಞರು, ಮೇಕಪ್ ಆರ್ಟಿಸ್ಟ್ ಸೇರಿ ಅಗತ್ಯವಿರುವ ಎಲ್ಲರನ್ನೂ ತಂದು ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಕೇಳಿದರೆ ಪ್ಯಾನ್ ಇಂಡಿಯಾ ಎಂದು ಹೇಳುತ್ತಾರೆ. ಇದು ಕನ್ನಡದ ಕಲಾವಿದರಿಗೆ ಮಾಡುವ ಅಪಮಾನ ಎಂದು ನೊಂದು ನುಡಿದರು.

ಮಂಡ್ಯದಲ್ಲಿ ರಾಜಕೀಯ ನಡೆದರೆ ಇಂಡಿಯಾದಲ್ಲೇ ನಡೆದಂತೆ. ಅದೇ ರೀತಿ ಮಂಡ್ಯದಲ್ಲಿ ಸಿನಿಮಾ ಗೆದ್ದರೆ ಇಂಡಿಯಾದಲ್ಲೇ ಗೆದ್ದಂತೆ ಎಂಬಂತೆ ಕಲಾವಿದರನ್ನು ಪ್ರೋತ್ಸಾಹಿಸುವ ಈ ಜಿಲ್ಲೆಯಲ್ಲಿ ಕನ್ನಡ ಸಿನಿಮಾಗಳನ್ನು ಬೆಳೆಸಬೇಕು. ಆ ಮೂಲಕ ಕಲಾವಿದರನ್ನು ಉಳಿಸಬೇಕು ಎಂದು ತಿಳಿಸಿದರು.

ಕನ್ನಡದ ಚಿತ್ರಗಳಿಗೂ ನಮ್ಮ ವೀಕ್ಷಕರು ಪ್ರೋತ್ಸಾಹ ನೀಡುತ್ತಿಲ್ಲ. ಇದರಿಂದಾಗಿ ಕನ್ನಡ ಚಿತ್ರಗಳು ನೆಲಕಚ್ಚುತ್ತಿವೆ. ದೊಡ್ಡ ದೊಡ್ಡ ಕಲಾವಿದರೆಲ್ಲರೂ ತೆರೆಮರೆಗೆ ಸರಿಯುವಂತಹ ಕಾಲ ಬಂದಿದೆ. ಹೀಗಿರುವಾಗ ಹೊಸ ಕಲಾವಿದರ ಬೆಳವಣಿಗೆಯಾದರೂ ಹೇಗೆ ಸಾಧ್ಯ ಎಂದು ತಮ್ಮದೇ ಧಾಟಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಇಂತಹ ಬೆಳವಣಿಗೆಯನ್ನು ಗಮನಿಸಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೊಸ ಕಲಾವಿದರಿಗೆ ಒಂದಷ್ಟು ವೇದಿಕೆ ಒದಗಿಸುವ ಮೂಲಕ ಪರಿಚಯ ಮಾಡಿಕೊಟ್ಟು, ನನ್ನಂತಹ ಅದೆಷ್ಟೋ ಕಲಾವಿದರಿಗೆ ಅದೃಷ್ಟ ದೇವತೆಯಾಗಿ ಕಂಗೊಳಿಸುತ್ತಿದ್ದಾರೆ. ಆದರೂ ಕನ್ನಡ ನಾಡಿನ ಜನತೆ ಚಿತ್ರಮಂದಿರಗಳಲ್ಲೇ ಚಿತ್ರವನ್ನು ವೀಕ್ಷಿಸುವುದರೊಂದಿಗೆ ಹೊಸ ಕಲಾವಿದರನ್ನೂ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಾದವರು ಗುರುವನ್ನು ಮೀರಿ ಬೆಳೆಯಬೇಕು. ಆಗ ಗುರುವಿನ ಜನ್ಮ ಸಾರ್ಥಕತೆ ಪಡೆದುಕೊಳ್ಳುತ್ತದೆ. ಶಿಷ್ಯ ಉನ್ನತ ಮಟ್ಟದ ಸಾಧನೆ ಮಾಡಿದರೆ, ಆತನನ್ನು ಕಂಡು ಗುರು ಸಂತೋಷ ಪಡುತ್ತಾನೆ, ಅಪ್ಪಿಕೊಳ್ಳುತ್ತಾನೆ. ಇಂತಹ ಸಾಧನೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡುವ ಮೂಲಕ ತಾನು ಕಲಿತ ಶಾಲೆ, ಕಾಲೇಜಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಚಿತ್ರನಟ ಆದಿ ಲೋಕೇಶ್ ಮಾತನಾಡಿ, ಕನ್ನಡ ಚಿತ್ರವನ್ನು ನೋಡುವ ಮೂಲಕ ಅವುಗಳನ್ನು ಬೆಳೆಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಒಂದು ಚಿತ್ರ ಉನ್ನತ ಮಟ್ಟದ ಯಶಸ್ಸು ಕಂಡಲ್ಲಿ ಅದರ ಹಿಂದೆ ಕೆಲಸ ಮಾಡಿದ ಅದೆಷ್ಟೋ ಜನರ ಪರಿಶ್ರಮಕ್ಕೂ ಅರ್ಥ ಬರುತ್ತದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಡಾ. ಎಚ್.ಪಿ. ರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ. ಟಿ. ನಾಗೇಂದ್ರ, ಪ್ರಾಂಶುಪಾಲ ಡಾ. ಎ.ಎಸ್.ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಮಂಜುನಾಥ್, ಡಾ. ತಮ್ಮಣ್ಣ, ಸೌಮ್ಯ ಲೋಕೇಶ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು.