ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದ ಪ್ರಕರಣದ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಎಚ್ಎಎಲ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಘಟನೆ ನಡೆದಾಗ ಆರೋಪಿ ರೋಹನ್‌ ಚಂದ್ರ ಭಟ್‌ಗೆ ಸ್ಕಿಜೋಫ್ರೆನಿಯಾ ಅಥವಾ ಯಾವುದೇ ಮಾನಸಿಕ ಖಾಯಿಲೆ ಇರಲಿಲ್ಲ. ಆತ ಎಲ್ಲರಂತೆ ಸಾಮಾನ್ಯ ಮನಸ್ಥಿತಿಯಲ್ಲಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ನವೀನ್ ಚಂದ್ರ ಭಟ್ ಹಾಗೂ ದಂತ ವೈದ್ಯೆಯಾಗಿದ್ದ ಶ್ಯಾಮಲಾ ಭಟ್ ಅವರನ್ನು ಪುತ್ರ ರೋಹನ್ ಚಂದ್ರ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಆರಂಭದಲ್ಲಿ ಆರೋಪಿಯ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎನ್ನಲಾಗಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನು ಪ್ರಾಥಮಿಕ ವಿಚಾರಣೆ ನಡೆಸಿ ನಿಮ್ಹಾನ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಒಂದು ವಾರ ಆತನನ್ನು ಅವಲೋಕಿಸಿ ಮತ್ತು ಚಿಕಿತ್ಸೆ ನೀಡಿದ ನಿಮ್ಹಾನ್ಸ್‌ ಆಸ್ಪತ್ರೆಯ ವೈದ್ಯರು ಆತನಿಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ ಎಂದು ಪ್ರಮಾಣೀಕರಿಸಿದ್ದರು. ಜತೆಗೆ ಆತನನ್ನು ವಿಚಾರಣೆ ನಡೆಸಬಹುದು ಎಂದು ತಿಳಿಸಿದ್ದರು. ಅದರ ಆಧಾರದ ಮೇಲೆ ತನಿಖೆ ನಡೆಸಿ, 40 ಮಂದಿಯ ಸಾಕ್ಷಿಗಳ ಹೇಳಿಕೆ ಹಾಗೂ ಎಫ್‌ಎಸ್‌ಎಲ್‌ ವರದಿಯನ್ನೊಳಗೊಂಡ 500 ಪುಟಗಳ ಚಾರ್ಜ್‌ಶೀಟ್‌ ಅನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣ ಕೊಡದಿದಕ್ಕೆ ಕೃತ್ಯ:


ಆರೋಪಿ ಹೊಸ ಬಿಜಿನೆಸ್‌ ಆರಂಭಿಸಲು ಪಾಲಕರ ಬಳಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಅವರು ಹಣ ಕೊಡಲು ನಿರಾಕರಿಸಿದ್ದಾಗ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದ. ತಂದೆ ಹೆಸರಿನಲ್ಲಿದ್ದ ಸಿಮ್‌ ಅನ್ನು ಆರೋಪಿ ಬಳಸುತ್ತಿದ್ದ. ಅದನ್ನು ಪೋರ್ಟ್‌ ಮಾಡಿಕೊಡಲು ತಂದೆಗೆ ಮನವಿ ಮಾಡಿದ್ದ ಅದಕ್ಕೂ ಸಹ ಅವರು ನಿರಾಕರಿಸಿದ್ದರು. ಈ ಎರಡು ಕಾರಣದಿಂದ ಆರೋಪಿ ಕೃತ್ಯ ಎಸಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.

ಪ್ರಕರಣದ ವಿವರ:

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ತಂದೆ ನವೀನ್ ಚಂದ್ರ ಭಟ್ (60) ಹಾಗೂ ತಾಯಿ ಡಾ.ಶ್ಯಾಮಲಾ ಭಟ್ (55) ಅವರನ್ನು ಹತ್ಯೆಗೈದಿದ್ದ ಆರೋಪದ ಮೇರೆಗೆ ಮಗ ರೋಹನ್‌ ಚಂದ್ರ ಭಟ್‌(33)ನನ್ನು ಎಚ್​ಎಎಲ್ ಠಾಣೆ ಪೊಲೀಸರು ಬಂಧಿಸಿದ್ದರು.ಎಚ್​ಎಎಲ್​ನ ವಿಜ್ಞಾನ ನಗರದ ಅಪಾರ್ಟ್​​ಮೆಂಟ್​​​ನಲ್ಲಿ ಈ ಘಟನೆ ನಡೆದಿತ್ತು.

ನವೀನ್ ಚಂದ್ರ ಅವರು ನೌಕಾ ಸೇನೆಯ ನಿವೃತ್ತ ಕ್ಯಾಪ್ಟನ್, ಶ್ಯಾಮಲಾ ಅವರು ದಂತ ವೈದ್ಯೆಯಾಗಿದ್ದರು. ಫೆ.11 ರ ಬೆಳಗ್ಗೆ 7.30ರ ಸುಮಾರಿಗೆ ರೋಹನ್ ತನ್ನ ಪಾಲಕರಿಗೆ ಚಾಕುವಿನಿಂದ ಇರಿದಿದ್ದ. ತೀವ್ರ ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದರು. ನೆರೆಮನೆಯ ನಿವಾಸಿ ಹಾಗೂ ವೈದ್ಯೆ ಮಾಧವಿ ನಾಯರ್ ಎಂಬುವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿತ್ತು.