ಸಾರಾಂಶ
ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳ ಹೇಳಿಕೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕೆಲವು ಜನ ಮಠಾಧೀಶರು ಇತ್ತೀಚೆಗೆ ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಹೇಳುವ ಮೂಲಕ ಸಮಾಜದಲ್ಲಿ ಗೊಂದಲದ ವಾತಾವರಣ ಉಂಟು ಮಾಡುತ್ತಿದ್ದಾರೆ. ಸೆ. 19ರಂದು ಹುಬ್ಬಳ್ಳಿ ಮಹಾನಗರದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಹಮ್ಮಿಕೊಂಡಿರುವುದಕ್ಕೆ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ಭಾನುವಾರ ಸಂಯೋಜಿಸಿದ ಜನಜಾತಿ-ಜನಗಣತಿ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೀರಶೈವ ಧರ್ಮ ಪ್ರಾಚೀನ ಇತಿಹಾಸ ಪರಂಪರೆ ಹೊಂದಿದೆ. ಸೈದ್ಧಾಂತಿಕ ನೆಲೆ ಮೂಲಗಳನ್ನು ಅರಿಯದ ಕೆಲವರು ವೀರಶೈವ ಲಿಂಗಾಯತ ಸಂಸ್ಕೃತಿಯನ್ನು ಕಲುಷಿತ ಗೊಳಿಸುತ್ತಿದ್ದಾರೆ. ಅಂಥವರ ಮಾತಿಗೆ ಬಲಿಯಾಗದೇ ವೀರಶೈವ ಲಿಂಗಾಯತ ಸಮಗ್ರತೆಯನ್ನು ಉಳಿಸಿ ಬೆಳೆಸಿಕೊಂಡು ಬರುವ ಅಗತ್ಯವಿದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ವಿಚಾರ ಧಾರೆಗಳಾಗಲಿ 12ನೇ ಶತಮಾನದ ಬಸವಾದಿ ಶರಣರ ವಿಚಾರ ಧಾರೆಗಳಾಗಲಿ ಒಂದೇಯಾಗಿವೆ ಹೊರತು ಬೇರೆ ಬೇರೆಯಾಗಿಲ್ಲ. ವೀರಶೈವ ಧರ್ಮವಾಚಕ ಸೈದ್ಧಾಂತಿಕ ಸಮಗ್ರ ಪದ. ಲಿಂಗಾಯತ ಅನ್ನುವುದು ರೂಢಿಯಿಂದ ಸಹಜವಾಗಿ ಬಂದ ಪದವಾಗಿದೆ ಎಂದರು.ಇವೆರಡರಲ್ಲಿ ದ್ವಂದ್ವ ಉಂಟು ಮಾಡಬಾರದೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಪಷ್ಟಪಡಿಸಿದೆ. ಮಹಾಸಭೆಯ ನಿರ್ಣಯವನ್ನು ದಾವಣಗೆರೆ ಶೃಂಗ ಸಮ್ಮೇಳನದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶರು ಬೆಂಬಲಿಸಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದ ಹಿನ್ನೆಲೆಯಲ್ಲಿ ಕೆಲವರು ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಹೇಳುತ್ತಿರುವುದು ಬಸವಣ್ಣನವರ ವಿಚಾರಧಾರೆಗಳಿಗೆ ವಿರುದ್ಧವಾಗಿದೆ. ಇವನಾರವ ಇವನಾರವ ಎಂದೆನಿಸದೇ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದಿನಿಸಯ್ಯ ಎಂಬ ಬಸವಣ್ಣನವರ ನುಡಿ ಸಾಕ್ಷಿಯಾಗಿದೆ. ಬಸವಣ್ಣನ ಸಮಷ್ಟಿ ಪ್ರಜ್ಞೆಯ ವಿಚಾರ ಧಾರೆಗೂ ಇಂದಿನ ದಿನ ಬಸವಣ್ಣನವರ ಹೆಸರಿನಲ್ಲಿ ಒಡಕು ಉಂಟು ಮಾಡುತ್ತಿರುವ ವಿಚಾರ ಧಾರೆಗಳಿಗೂ ಸಂಬಂಧವೇ ಇಲ್ಲದಂತಾಗಿದೆ ಎಂದು ಹೇಳಿದರು.ಇಂತ ಸಂದರ್ಭದಲ್ಲಿ ಸೆ.19ರಂದು ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಸೇರಲಿರುವ ಮಠಾಧೀಶರು ಪಾಲ್ಗೊಳ್ಳುವ ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಏಕತಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ನೆರವೇರಲೆಂದು ಶ್ರೀ ರಂಭಾ ಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶೀ ಜಗದ್ಗುರು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ದ್ದಾರೆಂದು ಶ್ರೀ ರಂಭಾಪುರಿ ಜಗದ್ಗುರು ತಿಳಿಸಿದರು.೦೭ಬಿಹೆಚ್ಆರ್ ೮:
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಅಂಗವಾಗಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರಿಗೆ ವಿವಿಧೆಡೆ ಭಕ್ತರು ಗೌರವ ಸಮರ್ಪಣೆ ಮಾಡಿದ ಭಕ್ತರು.