ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸ್ವಯಂ ಪ್ರೇರಿತರಾಗಿ ವಿದ್ಯಾರ್ಥಿಗಳು ರಕ್ತದಾನ ಮಾಡಬೇಕಿದೆ. ಯುವ ಶಿಕ್ಷಿತರು ರಕ್ತದಾನವನ್ನು ಮಾಡುವ ಮೂಲಕ ಅದರ ಬಗ್ಗೆ ಹಿರಿಯರಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಜನರ ಪಾಲಿಗೆ ಪ್ರೇರಣಾದಾಯಕರಾಗಬೇಕಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿ ಗ್ರಾಮದ ಎಸ್ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀಮತಿ ಅಂಕಮ್ಮ ಮತ್ತು ಶ್ರೀಸಣ್ಣತಮ್ಮೇಗೌಡ ಸ್ಮರಣಾರ್ಥ ಪ್ರತಿ ವರ್ಷ ನಡೆಯುವ ಅರ್ಪಣೆ ರಕ್ತದಾನ ಶಿಬಿರದಲ್ಲಿ 175 ಯೂನಿಟ್ ರಕ್ತದಾನ ಮಾಡುವ ಮೂಲಕ ವಿದ್ಯಾರ್ಥಿ ಸಮೂಹ ಮಾನವೀಯತೆ ಮೆರೆಯಿತು.ರೆಡ್ಕ್ರಾಸ್ ಘಟಕವು ಐಕ್ಯೂಎಸಿ, ಐಐಸಿ, ಜೀವಧಾರೆ ಟ್ರಸ್ಟ್ ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರ ಮಿಮ್ಸ್ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರಕ್ಕೆ ಹಿರಿಯ ವಕೀಲ ಎಸ್.ಎಸ್.ವೈದ್ಯನಾಥನ್ ಶ್ರೀಮತಿ ಅಂಕಮ್ಮ ಮತ್ತು ಶ್ರೀಸಣ್ಣತಮ್ಮೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಮಾಜದಲ್ಲಿ ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸ್ವಯಂ ಪ್ರೇರಿತರಾಗಿ ವಿದ್ಯಾರ್ಥಿಗಳು ರಕ್ತದಾನ ಮಾಡಬೇಕಿದೆ. ಯುವ ಶಿಕ್ಷಿತರು ರಕ್ತದಾನವನ್ನು ಮಾಡುವ ಮೂಲಕ ಅದರ ಬಗ್ಗೆ ಹಿರಿಯರಲ್ಲಿ ಅದರಲ್ಲೂ ಗ್ರಾಮೀಣ ಭಾಗದ ಜನರ ಪಾಲಿಗೆ ಪ್ರೇರಣಾದಾಯಕರಾಗಬೇಕಿದೆ ಎಂದರು.ಸಂಸ್ಥೆಗಳ ಆಡಳಿತಾಧಿಕಾರಿ ನಿವೇದಿತಾ ನಾಗೇಶ್ ಮಾತನಾಡಿ, ‘ಅಪರ್ಣೆ’ ಹೆಸರಿನಡಿ ಸಂಸ್ಥೆ ಕೃಪಾಪೋಷಕರಾದ ಶ್ರೀಮತಿ ಅಂಕಮ್ಮ ಹಾಗೂ ಶ್ರೀಸಣ್ಣತಮ್ಮೇಗೌಡರ ಸ್ಮರಣಾರ್ಥ ಶಿಬಿರ ನಡೆಸುತ್ತಿದೆ ಎಂದು ಹೇಳಿ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಿದರು.
ರಕ್ತನಿಧಿಯ ಅಧಿಕಾರಿ ಮೊಹಮದ್ ರಫಿ ಮಾತನಾಡಿ, ಗ್ರಾಮೀಣ ಭಾಗದ ಯುವ ಸಮೂಹ ರಕ್ತದಾನದಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಕ್ತದಾನ ನೀಡುತ್ತಿರುವುದು ಒಳ್ಳೆಯ ಸಂಗತಿ ಎಂದರು.ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸುವ ಕೆಲಸ ಮಾಡುತ್ತದೆ. ನಾವು ನೀಡುವ ರಕ್ತ ನಮಗೇ ಅರಿವಿಲ್ಲದ ಇನ್ನಾವುದೋ ವ್ಯಕ್ತಿಯ ಜೀವ ಉಳಿಸುತ್ತದೆ ಎಂದರೆ ಅಂತಹ ಪುಣ್ಯ ಕಾರ್ಯದಲ್ಲಿ ನಾವೆಲ್ಲರೂ ನಮ್ಮನ್ನು ತೊಡಗಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳೊಣ ಎಂದು ಕರೆ ನೀಡಿದರು.
ಕಾಲೇಜಿನ ಎಲ್ಲಾ ಕಾರ್ಯಕ್ಕೂ ಒತ್ತಾಸೆಯಾಗಿ ನಿಲ್ಲುವ ಎಸ್ಟಿಜಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ ಎಸ್ ಪುಟ್ಟರಾಜು ಹಾಗೂ ಸಿಇಒ ಶಿವರಾಜು ಸಿ.ಪಿ ರವರಿಗೆ ಕೃತಜ್ಞತೆಯನ್ನು ಅರ್ಪಿಸಿದರು.ಇದೇ ವೇಳೆ 175 ಯೂನಿಟ್ ರಕ್ತ ದಾನ ಮಾಡಿದ ವಿದ್ಯಾರ್ಥಿ, ಪ್ರಾಧ್ಯಾಪಕರಿಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆ, ರಕ್ತನಿಧಿ ಕೇಂದ್ರ ಮಂಡ್ಯ ಇವರು ಪ್ರಶಂಸಣಾ ಪತ್ರವನ್ನು ನೀಡಿದರು. ಕಾರ್ಯಕ್ರಮದಲ್ಲಿ ಜೀವಧಾರೆ ಟ್ರಸ್ಟ್ ಸಂಸ್ಥಾಪಕ ನಟರಾಜ್, ಸಂಸ್ಥಾಪಕರು, ಲ್ಯಾಬ್ ತಂತ್ರಜ್ಞರಾದ ಶಂಕರ್, ಯುವರೆಡ್ ಕ್ರಾಸ್ ಘಟಕದ ಶಶಾಂಕ್ ಉಪಸ್ಥಿತರಿದ್ದರು.