ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾಹಿತಿ । ಸಂಸದ ಗೋವಿಂದ ಕಾರಜೋಳ ಸೇರಿ ಗಣ್ಯರು ಭಾಗಿ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ಪರಶುರಾಂಪುರದಲ್ಲಿ ಇಂದು ಭಾನುವಾರ ಆಯೋಜಿಸಿರುವ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ತಿಳಿಸಿದ್ದಾರೆ.

ಅನೇಕ ವರ್ಷಗಳಿಂದಲೂ ಪರಶುರಾಂಪುರದಲ್ಲಿ ಅಂಬೇಡ್ಕರ್ ಬಾಬು ಜಗಜೀವನ ರಾಂ ಜಯಂತಿ ಆಚರಿಸಬೇಕು ಎಂದು ಎಲ್ಲಾ ತಯಾರಿ ನಡೆಸಿ ಆ ನಂತರ ಕಾರ್ಯಕ್ರಮ ನಿಂತು ಹೋಗುತ್ತಿತ್ತು. ಈ ವರ್ಷ ವಿನೂತನವಾಗಿ ಹೋಬಳಿಯ ಎಲ್ಲಾ ಮುಖಂಡರನ್ನು ಒಂದೆಡೆ ಸೇರಿಸಿ ಅನೇಕ ಬಾರಿ ಸಮಾಲೋಚನಾ ಸಭೆಗಳನ್ನು ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಎಲ್ಲಾ ರೀತಿಯ ಚರ್ಚೆ ಮಾಡಿ ಇಂದು ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ಚಿತ್ರದುರ್ಗದ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ, ಶಾಸಕರಾದ ಟಿ.ರಘುಮೂರ್ತಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ, ಚಿತ್ರನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಕಾರ್ಯಕ್ರಮದ ಕೇಂದ್ರ ಬಿಂದುವಾಗಲಿದ್ದಾರೆ. ಬೆಳಗ್ಗೆ ಇಬ್ಬರ ಭಾವಚಿತ್ರಗಳ ಬೃಹತ್ ಮೆರವಣಿಗೆ ಆಯೋಜಿಸಲಾಗಿದೆ. ಆ ನಂತರ ವೇದಿಕೆ ಕಾರ್ಯಕ್ರಮ. ಸಂಜೆ ವೇಳೆಗೆ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರನ್ನು ಎಲ್ಲಾ ಜಾತಿ, ಧರ್ಮದವರೂ ಅಪ್ಪಿಕೊಳ್ಳುತ್ತಿದ್ದಾರೆ. ಆದ್ದರಿಂದ, ಪರಶುರಾಂಪುರ ಹೋಬಳಿ ಮಟ್ಟದ ಈ ಕಾರ್ಯಕ್ರಮದಲ್ಲೂ ಎಲ್ಲಾ ಜಾತಿಯ ಮುಖಂಡರು ಆಗಮಿಸಲಿದ್ದಾರೆ. ಆದ್ದರಿಂದ ಇದೊಂದು ವಿಶೇಷವಾದ ಜಯಂತಿ ಕಾರ್ಯಕ್ರಮ ಆಗಲಿದೆ.

ಅಂಬೇಡ್ಕರ್ ಯಾವುದೇ ಒಂದು ಜಾತಿಗೆ ಸೀಮಿತ ಅಲ್ಲ. ಅವರ ಪರಿವರ್ತನಾ ಹೋರಾಟದ ರಥವನ್ನು ನಮಗೆ ಕೊಟ್ಟಿದ್ದಾರೆ. ನಾವುಗಳು ಅದನ್ನು ಎಷ್ಟು ಸಾಧ್ಯಾನೋ ಅಷ್ಟು ಮುಂದೆ ಕೊಂಡೋಯ್ಯಬೇಕು. ಹಿಂದಕ್ಕೆ ಎಳೆಯುವ ಕೆಲಸ ಮಾಡಬಾರದು. ನಾವುಗಳು ವಿದ್ಯಾವಂತರಾಗಿರುವುದು ಅಂಬೇಡ್ಕರ್ ಹೋರಾಟದಿಂದ. ಆದ್ದರಿಂದ ಶಿಕ್ಷಣ ಪಡೆದ ನಾವುಗಳು ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕಿದೆ. ಅಂಬೇಡ್ಕರ್ ಅವರನ್ನು ನೆನೆಯದವರೇ ಇಲ್ಲ. ಇಡೀ ವಿಶ್ವವೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿ ಎಂಬುದಾಗಿ ಹೆಸರಾಗಿದ್ದಾರೆ. ಅಂಬೇಡ್ಕರ್ ಚಿಂತನೆಗಳನ್ನು ಬಹುಮುಖಿಯಾಗಿ ಸಮಾಜದಲ್ಲಿ ಹರಡಬೇಕಿದೆ. ಆ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡಬೇಕು.

ಇನ್ನು ಬಾಬು ಜಗಜೀವನ ರಾಂ ಅವರೂ ಕೂಡ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೂ ಇಡೀ ದೇಶದಲ್ಲೇ ಹಸಿರು ಕ್ರಾಂತಿಯ ಹರಿಕಾರ ಎಂಬ ಹೆಗ್ಗಳಿಕೆ ಬಾಜನರಾದವರು. ಎಲ್ಲಿಯೂ ಕೂಡ ರಾಜಿಯಾಗದೇ ರಾಜಕಾರಣ ಮಾಡಿದ ಇಬ್ಬರೂ ಮಹನೀಯರು ದಲಿತಲೋಕದಲ್ಲಿ ಮಿನುಗುತಾರೆಗಳಾಗಿ ಮಿನುಗುತ್ತಿದ್ದಾರೆ. ಇಂತಹವರ ಜಯಂತಿಗಳನ್ನು ವರ್ಷವಿಡೀ ಆಚರಿಸಿದರೂ ಅಚ್ಚರಿಯೇನಲ್ಲ.

ತಾಲೂಕು ಮಟ್ಟದಲ್ಲಿ ಮಾತ್ರವಲ್ಲ. ಹೋಬಳಿ, ಗ್ರಾಮೀಣ ಮಟ್ಟದಲ್ಲೂ ಇಂತಹ ಜಯಂತಿ ಕಾರ್ಯಕ್ರಮಗಳು ನಡೆಯಬೇಕಿದೆ. ಈ ಕಾರ್ಯಕ್ರಮಕ್ಕೆ ನಾವು ಯಾರಿಂದಲೂ ಹಣ ಪಡೆದು ಕಾರ್ಯಕ್ರಮ ಮಾಡುತ್ತಿಲ್ಲ. ಎಲ್ಲಾ ಮುಖಂಡರುಗಳೇ ಜವಾಬ್ದಾರಿ ತೆಗೆದುಕೊಂಡು ಮಾಡಲಾಗುತ್ತಿದೆ. ಸ್ವಾಭಿಮಾನಿಗಳಾಗಿ ಎಂದು ಆದರ್ಶ ಜೀವನದ ಪಾಠ ಹೇಳಿಕೊಟ್ಟು ಹೋಗಿರುವ ಬಾಬಾ ಸಾಹೇಬರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕಿರುವ ಕಾರಣ ನಾವು ಅಂಬೇಡ್ಕರ್ ಆಶಯಗಳಿಗೆ ವಿರುದ್ಧವಾಗಿ ಬದುಕಬಾರದು ಎಂದು ಶ್ರೀನಿವಾಸ್ ತಿಳಿಸಿದರು.