ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಮಕ್ಕಳಿಗೆ ಅಸ್ತಿ ಮಾಡಿ ಇಡುವ ಬದಲು ಅವರಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ ಅವರನ್ನೇ ಸಮಾಜದ ಆಸ್ತಿಯಾಗಿಸುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.ಅವರು ಭಾನುವಾರ ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ವತಿಯಿಂದ ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ, ಗೌರವ ಸಮಾರ್ಪಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದರು. ಸಂತ ನಾರಾಯಣಗುರುಗಳು ಬಿಲ್ಲವ ಸಮುದಾಯಕ್ಕೆ ಮಾತ್ರ ಗುರುಗಳಾಗದೆ ಸಮಾಜದ ಎಲ್ಲಾ ಸಮುದಾಯದವರನ್ನು ಉನ್ನತ್ತಿಯಾಡೆಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಾವೆಲ್ಲಾರೂ ಸಕ್ರಿಯರಾಗಬೇಕೆಂದು ಅವರು ಕರೆ ನೀಡಿದರು. ಮುಖ್ಯ ಭಾಷಣ ಮಾಡಿದ ಯುವಕೋವಿಡ್ ವಾರಿಯರ್ ರಾಷ್ಟ್ರ ಪುರಸ್ಕಾರ ಪುರಸ್ಕೃತ ರಾ.ಸೇ.ಯೋ. ಅತ್ಯುತ್ತಮ ಸ್ವಯಂಸೇವಕ ಅಭಿನ್ ಬಂಗೇರ, ಪ್ರತಿ ಮನೆ ಮನೆಯಲ್ಲೂ ನಮ್ಮ ಮಕ್ಕಳಿಗೆ ನಮ್ಮ ಪದ್ಧತಿ ಪರಂಪರೆ ಆಚಾರ ವಿಚಾರಗಳನ್ನು ಹೇಳಿಕೊಡಲು ನಾವೆಷ್ಟು ಬಲ್ಲವರಾಗಿದ್ದೇವೆ ಎಂಬುದರ ಆತ್ಮಾವಲೋಕನಾ ಮಾಡಿಕೊಳ್ಳಬೇಕು ಎಂದರು. ಸುಂಟಿಕೊಪ್ಪ ಗ್ರೇಡ್ 1 ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್ ಮಾತನಾಡಿ ಬಿಲ್ಲವ ಸಮುದಾಯದ ಸಮಸ್ಯೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಹರಿಸುವ ನಿಟ್ಟಿನಲ್ಲಿದ್ದರೆ ತಾವು ಶ್ರಮಿಸುವುದಾಗಿ ಭರವಸೆ ನೀಡಿದರು. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಮಾತನಾಡಿದರು. ಭಾನುವಾರ ಬೆಳಿಗ್ಗೆ 7 ಗಂಟೆಗೆ ಗಣಹೋಮ, 8 ಗಂಟೆಗೆ ಉಪ್ಪಿನಂಗಡಿಯ ವಿನಯ್ ಶಾಂತಿ ಮತ್ತು ತಂಡದವರಿಂದ ವಿಶೇಷ ಆಕರ್ಷಣೀಯವಾದ ನಾರಾಯಣ ಗುರುಗಳ ಮಂಡಲ ಕಲಾಕೃತಿಯೊಂದಿಗೆ ಗುರುಪೂಜೋತ್ಸವ ನಡೆಯಿತು.
ಕುಶಾಲನಗರ ತಾಲೂಕು ಆಹಾರ ನಿರೀಕ್ಷಕಿ ಎಂ.ಎಸ್. ಸ್ವಾತಿ, ಪೆರಾಜೆ ಸೋಮವಾರಪೇಟೆ ಶ್ರೀ ನಾರಾಯಣ ಗುರುಗಳ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎ. ಭಾಸ್ಕರ್, ವಿರಾಜಪೇಟೆ ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್, ಕುಶಾಲನಗರ ಕೋಟಿಚೆನ್ನಯ್ಯ ಬಿಲ್ಲವ ಸಂಘದ ಅಧ್ಯಕ್ಷ ಸುಧೀರ್ ಎಸ್., ಮಡಿಕೇರಿ ಬಿಲ್ಲವ ಸಂಘದ ಅಧ್ಯಕ್ಷೆ ಲೀಲಾವತಿ, ಸುಂಟಿಕೊಪ್ಪ ಹೋಬಳಿ ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘದ ಮಧುನಾಗಪ್ಪ, ಸುಂಟಿಕೊಪ್ಪ ಹೋಬಳಿ ಬಿಲ್ಲವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರೀತಮ್ ಬಿ.ಎಸ್. ಉಪಸ್ಥಿತರಿದ್ದರು. ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಬಿ.ಎಂ. ಮುಖೇಶ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಾವತಿ ಮತ್ತು ಚಿತ್ರಾ ಪ್ರಾರ್ಥಿಸಿದರು. ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಮುಖೇಶ್ ಸ್ವಾಗತಿಸಿದರು. ಸಂಧ್ಯಾ ಮಂಜುನಾಥ್ ಮತ್ತು ವೆಂಕಪ್ಪ ಕೋಟ್ಯಾನ್ ನಿರೂಪಿಸಿದರು. ಆಕರ್ಷಕ ಮೆರವಣಿಗೆ: ಸಮಾರಂಭಕ್ಕೂ ಮುನ್ನ ಕೋದಂಡ ರಾಮ ಮಂದಿರದಿಂದ ಭವ್ಯ ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರುಗಳ ಮತ್ತು ಕೋಟಿ ಚೆನ್ನಯ್ಯ ಅವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಪೂರ್ಣಕುಂಭ ಕಲಶದೊಂದಿಗೆ ಮಹಿಳೆಯರು ವಿಶೇಷ ಆಕರ್ಷಕವಾದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ವಿಷ್ಣುಮೂರ್ತಿ ಕುಣಿತ ಭಜನಾ ಮಂಡಳಿಯ ತಿರ್ಲೆ ಕುಣಾಲು ಭಜನಾ ಕುಣಿತದೊಂದಿಗೆ ಭಾವಚಿತ್ರವನ್ನು ಇರಿಸಿ ಮಹಿಳೆಯರು ಹಳದಿ ಬಣ್ಣದ ಸೀರೆ, ಪುರುಷರು ಬಿಳಿ ಶರ್ಟ್ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.ಸನ್ಮಾನ, ಪ್ರತಿಭಾ ಪುರಸ್ಕಾರ ಪ್ರಸ್ತುತ ವರ್ಷ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದ 7 ಮಂದಿಯನ್ನು ಸನ್ಮಾನಿಸಲಾಯಿತು. ಎಸ್ ಎಸ್ಎಲ್ಸಿ ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾ ಕಾರ್ಯಕ್ರಮದ ನಂತರ 3 ವಯೋಮಾನ ವಿಭಾಗದಲ್ಲಿ ಬಲೆ ನಲಿಪುಂಗ ಜಿಲ್ಲಾ ಮಟ್ಟದ ನೃತ್ಯ ಕಲಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.