ಪೋಷಕರು, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಿ: ಬಸವರಾಜ್

| Published : Mar 01 2024, 02:18 AM IST

ಸಾರಾಂಶ

ಮಕ್ಕಳ ಸುಭದ್ರ ಭವಿಷ್ಯಕ್ಕೆ ಪೋಷಕರು ಹಾಗೂ ಶಿಕ್ಷಕರ ಪಾತ್ರ ಬಹು ಮುಖ್ಯ.

ಹಿರಿಯೂರು: ಮಕ್ಕಳ ಸುಭದ್ರ ಭವಿಷ್ಯಕ್ಕೆ ಪೋಷಕರು ಹಾಗೂ ಶಿಕ್ಷಕರ ಪಾತ್ರ ಬಹು ಮುಖ್ಯವಾಗುತ್ತದೆ ಎಂದು ಚಳ್ಳಕೆರೆ ಬಾಪೂಜಿ ಆಯುರ್ವೇದ ಆಸ್ಪತ್ರೆ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ.ಬಸವರಾಜ್ ಅಭಿಪ್ರಾಯಪಟ್ಟರು.

ನಗರದ ಬೆಟ್ಸ್ ಬಿಇಟಿ ಅಂತಾರಾಷ್ಟ್ರೀಯ ಶಾಲೆಯ ಏಳನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಮಗುವಿಗೆ ಮನೆ ಹಾಗೂ ಶಾಲೆ ಎರಡೂ ಕಡೆ ಸಂಸ್ಕಾರ ಕಲಿಸುವಂತಾಗಬೇಕು. ಮಕ್ಕಳಿಗೆ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಮಾಡಿಕೊಡುವುದು ಪೋಷಕರು ಮತ್ತು ಶಿಕ್ಷಕರ ಕರ್ತವ್ಯ. ಆಗ ಮಾತ್ರ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಮಾಜ ಸೇವಕಿ ಶಶಿಕಲಾ ರವಿಶಂಕರ್ ಮಾತನಾಡಿ, ಮಕ್ಕಳ ಜೀವನದಲ್ಲಿ ಪ್ರಥಮ ಹಾಗೂ ಪ್ರಮುಖ ಘಟ್ಟ ಉತ್ತಮ ಶಾಲೆ ಹಾಗೂ ಉತ್ತಮ ಶಿಕ್ಷಣವಾಗಿದೆ. ಪ್ರೀತಿಯಿಂದ ಮಕ್ಕಳನ್ನು ಒಲಿಸಿಕೊಳ್ಳುವ, ಶಿಸ್ತಿನಿಂದ ಮಕ್ಕಳನ್ನು ತಿದ್ದಿ ಬೆಳೆಸುವ ಉತ್ತಮ ರೂವಾರಿಗಳು ಶಿಕ್ಷಕರೇ ಆಗಿದ್ದಾರೆ ಎಂದು ಹೇಳಿದರು.

ಬೆಟ್ಸ್ ಅಂತಾರಾಷ್ಟ್ರೀಯ ಶಾಲೆಯ ಅಧ್ಯಕ್ಷ ಘನಶಂಕರ್, ಬಾಪೂಜಿ ಆಯುರ್ವೇದ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಅಭಿಷೇಕ್, ಬ್ರಷ್ ಕಿಂಗ್ ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಇಂದ್ರೇಶ್, ಆನಿ ಜೇಕಬ್, ರೇಶ್ಮಾ ವಿಜಯ್ ಹಾಗೂ ಶಿಕ್ಷಕ ವೃಂದದವರು, ಪೋಷಕರು ಉಪಸ್ಥಿತರಿದ್ದರು.