ಸಾರಾಂಶ
ಎಚ್ಚರಿಕೆ । ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮಕ್ಕಳೊಂದಿಗೆ ಶಾಲೆಯ ಬಳಿ ಧರಣಿ । ಪೋಷಕರ ಆಗ್ರಹ
ಕನ್ನಡಪ್ರಭ ವಾರ್ತೆ ಬಸವಾಪಟ್ಟಣಬಸವಾಪಟ್ಟಣದ ಕೆ.ಪಿ.ಎಸ್. ಶಾಲೆಯಲ್ಲಿ ಕೇವಲ ಸಂಸ್ಕೃತ, ಹಿಂದಿ, ಗಣಿತ ಶಿಕ್ಷಕರನ್ನು ಬಿಟ್ಟರೆ ಇನ್ಯಾವುದೇ ವಿಷಯಗಳ ಕಾಯಂ ಶಿಕ್ಷಕರಿಲ್ಲದೆ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದು, ಶಾಲೆಗೆ ಪ್ರತಿ ವಿಷಯಕ್ಕೂ ಕಾಯಂ ಶಿಕ್ಷಕರನ್ನು ಇನ್ನು ೧೫ ದಿನಗಳಲ್ಲಿ ವ್ಯವಸ್ಥೆ ಮಾಡದಿದ್ದರೆ ಶಾಲೆಯ ಬಳಿ ಮಕ್ಕಳೊಂದಿಗೆ ಧರಣಿ ಹಮ್ಮಿಕೊಳ್ಳಾಗುವುದು ಎಂದು ಪೋಷಕರು ಎಚ್ಚರಿಸಿದ್ದಾರೆ.
ಬಸವಾಪಟ್ಟಣದ ಕೆ.ಪಿ.ಎಸ್. ಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಪೋಷಕರೊಂದಿಗೆ ನಡೆಸಿದ ಸಭೆಯಲ್ಲಿ ಪೋಷಕರು ತಮ್ಮ ಅಳಲು ತೋಡಿಕೊಂಡರು.೨೦೨೩-೨೪ನೇ ಸಾಲಿನಲ್ಲೇ ಶಿಕ್ಷಕರ ಕೊರತೆ ಇತ್ತು. ಈಗಾಗಲೇ ಅನೇಕ ಪೋಷಕರು ತಮ್ಮ ಮಕ್ಕಳ ವರ್ಗಾವಣೆ ಪತ್ರವನ್ನು ನೀಡಿ ಬೇರೆ ಶಾಲೆಗೆ ಸೇರಿಸಲು ಯತ್ನಿಸಿದ್ದು ಇದೇ ರೀತಿ ಶಿಕ್ಷಕರಿಲ್ಲದ ಸ್ಥಿತಿ ಮುಂದುವರಿದರೆ ೭೩ ವರ್ಷಗಳ ಈ ಹಿರಿಯ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಹಲವಾರು ಬಾರಿ ಮಾಧ್ಯಮದ ಮೂಲಕ ಶಾಲಾಭಿವೃದ್ದಿ ಸಮಿತಿಯ ಮೂಲಕ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವೂ ಆಗಿಲ್ಲ. ಪ್ರಭಾರಿ ಮುಖ್ಯಶಿಕ್ಷಕರು ಕಚೇರಿಗೆ ದಾಖಲೆಗಳನ್ನು ಒದಗಿಸುವುದರಲ್ಲೆ ಶಾಲಾವಧಿ ಮುಗಿದು ಹೋಗುತ್ತದೆ. ಪ್ರಭಾರಿ ಮುಖ್ಯಶಿಕ್ಷಕರೇ ಗಣಿತದ ಕಾಯಂ ಶಿಕ್ಷಕರಾಗಿದ್ದು ಕಚೇರಿ ನಿರ್ವಹಣೆ, ಇಲಾಖೆಗೆ ದಾಖಲೆಗಳನ್ನು ಒದಗಿಸುವುದು, ದಾಖಲಾತಿಗಳ ನಿರ್ವಹಣೆಯಲ್ಲೇ ಇರಬೇಕಾಗಿದೆ. ಶಾಲೆಯಲ್ಲಿ ಒಟ್ಟು ೧೭೫ ವಿದ್ಯಾರ್ಥಿಗಳಿದ್ದು ಕನ್ನಡ, ಅಂಗ್ಲಭಾಷೆ, ವಿಜ್ಞಾನ, ಸಮಾಜ ವಿಜ್ಞಾನ, ದೈಹಿಕ ಶಿಕ್ಷಣ ಅಲ್ಲದೆ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದ್ದು ಕಾಯಂ ಶಿಕ್ಷಕರಿಲ್ಲದೆ ಶೈಕ್ಷಣಿಕವಾಗಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ. ಕೂಡಲೇ ಶಿಕ್ಷಣ ಇಲಾಖೆ ಜನಪ್ರತಿನಿಧಿಗಳು ವಜ್ರಮಹೋತ್ಸವದತ್ತ ಹೆಜ್ಜೆ ಹಾಕುತ್ತಿರುವ ಈ ಶಾಲೆಗೆ ಕೂಡಲೇ ಖಾಯಂ ಶಿಕ್ಷಕರನ್ನು ನೀಡಬೇಕು ಎಂದು ಪೋಷಕರು ಸಭೆಯಲ್ಲಿ ಒತ್ತಾಯಿಸಿದರು.
ಈ ಬಗ್ಗೆ ಕೆ.ಪಿ.ಎಸ್. ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ನಿರ್ವಾಣೆಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆಗೆ ಕೂಡಲೇ ಗಮನಹರಿಸಲಾಗುವುದು. ಶಾಲೆಯಲ್ಲಿ ಪ್ರತಿ ತಿಂಗಳು ಪೋಷಕರ ಸಭೆ ನಡೆಸಲಾಗುವುದು. ಪೋಷಕರು ಶಾಲೆಗೆ ಸಹಕರಿಸುವಂತೆ ಮನವಿ ಮಾಡಿದರು .ಪ್ರಬಾರಿ ಮುಖ್ಯ ಶಿಕ್ಷಕ ಎಸ್.ಬಿ.ಚಿದಾನಂದ, ಹಿರಿಯ ಶಿಕ್ಷಕ ಶಂಕರನಾಯಕ್, ಸಂಸ್ಕೃತ ಭಾಷಾ ಶಿಕ್ಷಕರಾದ ಲಕ್ಷ್ಮೀಕಾಶಿ ಶಿವಣ್ಣ, ಅತಿಥಿ ಶಿಕ್ಷಕರಾದ ಹರೀಶ್, ಗ್ರಾಮಸ್ಥರಾರ ಎಸ್.ಆರ್.ರಮೇಶ್, ಸತೀಶ್, ರಾಮಚಂದ್ರ, ರಮೇಶ, ರವೀಶ, ಶೋಭಾ, ವಿಶಾಲಾಕ್ಷಿ, ಶಶಿರೇಖಾ ಇತರರು ಹಾಜರಿದ್ದರು.