ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪಾರ್ಥೇನಿಯಂ ಜಾಗೃತಿ ಸಪ್ತಾಹದ ಅಂಗವಾಗಿ ಪಾರ್ಥೇನಿಯಂ ಕಳೆ ನಿರ್ಮೂಲನಾ ಕಾರ್ಯಕ್ರಮ ಗುರುವಾರ ನಡೆಯಿತು.
ಕೃಷಿ ವಿಸ್ತರಣಾ ವಿಜ್ಞಾನಿ ಡಾ. ವೈ.ಎಂ. ಗೋಪಾಲ್ ಮಾತನಾಡಿ, ಪಾರ್ಥೇನಿಯಂ ವಿನಾಶಕಾರಿ ಕಳೆಯಾಗಿದ್ದು, ಎಲ್ಲಾ ಪ್ರದೇಶಗಳಲ್ಲಿ ವರ್ಷಪೂರ್ತಿ ಕಂಡು ಬರುತ್ತದೆ. ಈ ಕಳೆ ದೇಶದಲ್ಲಿ ಮೊಟ್ಟ ಮೊದಲು 1956ರಲ್ಲಿ ಪುಣೆಯಲ್ಲಿ ಕಂಡು ಬಂದಿತು. ಅಂದಿನಿಂದ ಕ್ರಮೇಣವಾಗಿ ಈ ಕಳೆ ದೇಶದ ಎಲ್ಲಾ ಭಾಗದಲ್ಲಿ ಆಕ್ರಮಿಸಿರುವುದು ಆತಂಕದ ವಿಷಯ. ಈ ಕಳೆಯು ಬೆಳೆಗಳಿಗೆ ಹಾನಿ ಮಾಡುವುದಲ್ಲದೇ, ಮನುಷ್ಯರ ಹಾಗೂ ಪ್ರಾಣಿಗಳ ಆರೋಗ್ಯಕ್ಕೂ ತೊಂದರೆಯನ್ನುಂಟು ಮಾಡುತ್ತದೆ ಎಂದರು.ಕಾರ್ಯಕ್ರಮದಲ್ಲಿ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ.ಜೆ. ವೆಂಕಟೇಗೌಡ ಪಾರ್ಥೇನಿಯಂ ಬಗ್ಗೆ ಅರಿವು ಮೂಡಿಸಿ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು. ಪಾರ್ಥೇನಿಯಂ ಕಳೆ ನಾಶಮಾಡಲು ಎಲ್ಲಾ ರೈತರು ಸಾಮೂಹಿಕವಾಗಿ ಕೈಜೋಡಿಸಿದಲ್ಲಿ ಮಾತ್ರ ಸಾಧ್ಯ. ಅವುಗಳನ್ನೂ ಹೂ ಬಿಡುವುದಕ್ಕೂ ಮುನ್ನ ಗಿಡಗಳನ್ನು ಕೀಳುವುದು, ಸಸ್ಯನಿಯೋಗಿ ಗಿಡಗಳನ್ನು ಬೆಳೆಸುವುದು, ಜೈವಿಕ ಕ್ರಮವಾದ ಮೆಕ್ಸಿಕನ್ ದುಂಬಿ (ಜೈಗೊಗ್ರಾಮ ಬೈಕೋಲೋರೇಟ)ಯನ್ನು ಪಾರ್ಥೇನಿಯಂ ಕಳೆ ಮೇಲೆ ಬಿಡುವುದು ಹಾಗೂ ಸೂಕ್ತ ಕಳೆ ನಾಶಕಗಳನ್ನು ಬಳಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ 52 ರೈತ, ರೈತ ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
21ಕೆಡಿಬಿಪಿ3-ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿ ಪಾರ್ಥೇನಿಯಂ ಜಾಗೃತಿ ಸಪ್ತಾಹ ನಡೆಯಿತು.