ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿ: ‌ಪ್ರೊ. ಜಯಶ್ರೀ ಎಸ್

| Published : Mar 23 2025, 01:30 AM IST

ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿ: ‌ಪ್ರೊ. ಜಯಶ್ರೀ ಎಸ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಗೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರ ಮೂಲಕ‌ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಎಂದು ಕರ್ನಾಟಕ ವಿವಿ ಕುಲಪತಿ ‌ಪ್ರೊ. ಜಯಶ್ರೀ ಎಸ್ ಹೇಳಿದರು.

ಧಾರವಾಡ: ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಗೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರ ಮೂಲಕ‌ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ಎಂದು ಕರ್ನಾಟಕ ವಿವಿ ಕುಲಪತಿ ‌ಪ್ರೊ. ಜಯಶ್ರೀ ಎಸ್ ಹೇಳಿದರು.

ಭಾರತೀಯ ವಿಶ್ವವಿದ್ಯಾಲಯ ಸಂಘ ಮಾರ್ಚ್ 3 ರಿಂದ ಮಾರ್ಚ್ 7ರ ವರಗೆ ಉತ್ತರ ಪ್ರದೇಶದ ಅಮಿಟಿ ವಿಶ್ವವಿದ್ಯಾಲಯದಲ್ಲಿ 38ನೇ ಅಂತರ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಹೊಸದನ್ನು ಕಲಿಯಲು ಮತ್ತು ‌ಪ್ರದರ್ಶಿಸಲು ನವ ತಂತ್ರಜ್ಞಾನ ಆಧಾರಿತ ನವಮಾಧ್ಯಮಗಳು ಹೆಚ್ಚು ಪೂರಕವಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ಬೆಳೆಯಲು ಯುಜನೋತ್ಸವಗಳು ಹೆಚ್ಚು ಸಹಕಾರಿಯಾಗಿವೆ ಎಂದರು.

ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ ಮಾತನಾಡಿ, ರಾಷ್ಟ್ರೀಯ ಯುವಜನೋತ್ಸವದಲ್ಲಿ ಈ‌‌ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸಿ ವಿಜೇತರಾಗಿರುವುದು ಶ್ಲಾಘನೀಯ. ರಾಷ್ಟ್ರ ಮಟ್ಟದ ಯುವ ಜನೋತ್ಸವದ ವೇದಿಕೆಗಳಲ್ಲಿ ಪ್ರದರ್ಶನ ನೀಡುವುದು ಸವಾಲಿನ ಕೆಲಸ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ಮಾತನಾಡಿದರು. ಯುವಜನೋತ್ಸವ ಮೆರವಣಿಗೆಯಲ್ಲಿ ಕವಿವಿ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದದ್ದು, ಜಾನಪದ ಗಾಯನದಲ್ಲಿ ಕಿಟೆಲ್ ಕಲಾ ಕಾಲೇಜು ಮತ್ತು ಗದಗ ‌ಕೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಶಾಸ್ತ್ರೀಯ ವಾದ್ಯಗಳ ಏಕವ್ಯಕ್ತಿ ಸ್ಪರ್ಧೆಯಲ್ಲಿ ಜೆ.ಎಸ್.ಎಸ್. ಮತ್ತು ‌ಕವಿವಿ ಮೂರನೇ ಸ್ಥಾನ, ಪಾಶ್ಚಾತ್ಯ ಗಾಯನ ಸ್ಪರ್ಧೆಯಲ್ಲಿ ಕೆಸಿಡಿ ಮತ್ತು ‌ಜೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ಮೂರನೇ ಸ್ಥಾನ. ಶಾಸ್ತ್ರೀಯ ಗಾಯನ ಸ್ಪರ್ಧೆಯಲ್ಲಿ ಕವಿವಿ ಸಂಗೀತ ವಿಭಾಗ ನಾಲ್ಕನೇ ಸ್ಥಾನ ಪಡೆದಿದೆ.

ಕವಿವಿಯ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಎಸ್.ಕೆ. ಪವಾರ, ಸ್ನಾತಕೋತ್ತರ ಜಿಮಖಾನಾದ ಅಧ್ಯಕ್ಷ ಡಾ. ಈಶ್ವರ ಬೈದಾರಿ, ಕವಿವಿ ಸಿಂಡಿಕೇಟ್ ಸದಸ್ಯರಾದ ರಾಬರ್ಟ್‌ ದದ್ದಾಪುರಿ, ಜಿಮಖಾನದ ಸಂಯೋಜಕ ಡಾ. ದಿನೇಶ ನಾರಾಯಣಕರ, ಕಿಟೆಲ್ ಕಾಲೇಜಿನ ಪ್ರಾಚಾರ್ಯ ಡಾ. ರೇಖಾ ಎಂ. ಜೋಗುಳ, ಡಾ. ಸುರೇಶ ನ್ಯಾಮತಿ, ಸಾಲಿಯಾನ ಸಂತೋಷ ಇದ್ದರು.