ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ. ಜ್ಞಾನ ಸಂಪಾದನೆ, ಸಮಾಜ, ಸಾಹಿತ್ಯ ಅರಿಯಲು ಓದುವುದು ಮುಖ್ಯ. ಜ್ಞಾನ ಮಾಗಲು ಓದು ರೂಢಿಸಿಕೊಳ್ಳಬೇಕೆಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಉಪ್ಪಾರ್ ಹೇಳಿದರು.ಕೇಂದ್ರ ಸಾಹಿತ್ಯ ವೇದಿಕೆ ಬೆಂಗಳೂರು, ಬೆಳಗಾವಿ ತಾಲೂಕು ಘಟಕ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ತಾಲೂಕು ಘಟಕ ಉದ್ಘಾಟನೆ ಹಾಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಉಳಿಸಿ ಬೆಳೆಸಬೇಕು ಎಂಬುದನ್ನು ಕೇಳುತ್ತೇವೆ. ಆದರೆ, ಕನ್ನಡ ಉಳಿಸುವುದಕ್ಕಿಂತ ಬಳಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಕನ್ನಡದಲ್ಲಿ ಅಗಾಧ ಜ್ಞಾನವಿದೆ. ಅದರ ಆಳ ಅಗಲ ಅರಿಯುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.ವೇದಿಕೆ ಪದಾಧಿಕಾರಿಗಳು ಒಳ್ಳೆಯ ಬರಹಗಾರರು, ಅಧ್ಯಯನಶೀಲರು, ಸಂಘಟನಾ ಚತುರರು, ವಾಕ್ ಚಾತುರ್ಯವುಳ್ಳವ ರಾಗಬೇಕು. ಫಲಾಪೇಕ್ಷೆ ಇಲ್ಲದೆ ಕನ್ನಡ ಕಾರ್ಯದಲ್ಲಿ ಪಾಲ್ಗೊಳ್ಳುವಂತವರಾಗಿರಬೇಕು ಎಂದ ಅವರು, ಗುಣಾತ್ಮಕ ಸಾಹಿತ್ಯದ ಬೆಳವಣಿಗೆ, ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸುವುದು ಸಂಘಟನೆಯ ಪ್ರಮುಖ ಧ್ಯೇಯವಾಗಿದೆ ಎಂದು ಹೇಳಿದರು.
ವಚನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು, ಕನ್ನಡ ಇಂದು ಚಿಂತಾಜನಕ ಸ್ಥಿತಿಯಲ್ಲಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸಂಪದ್ಭರಿತ ಸಾಹಿತ್ಯ ಹೊಂದಿರುವ ಕನ್ನಡದಲ್ಲಿ ಇತ್ತೀಚೆಗೆ ಬರವಣಿಗೆ ಕಡಿಮೆಯಾಗಿದೆ. ಅದರಲ್ಲೂ ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳು ಬರುತ್ತಿಲ್ಲ. ಮಹಾರಾಷ್ಟ್ರದ ಜತ್ತ ಮತ್ತಿತರ ಗಡಿಭಾಗದಲ್ಲಿ ಕನ್ನಡ ಕಲಿಯಲು ಒಲುವು ಇದ್ದರೂ ಅವರಿಗೆ ಸರಿಯಾಗಿ ಕನ್ನಡ ಭಾಷೆಯ ಪುಸ್ತಕಗಳು ಸಿಗುತ್ತಿಲ್ಲ. ಚಿಕ್ಕೋಡಿ ಭಾಗದಲ್ಲಿ ಮರಾಠಿ ಭಾಷಿಕರು ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಅನಿವಾರ್ಯವಾಗಿ ಮಕ್ಕಳು ಮರಾಠಿ ಕಲಿಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕೇಂದ್ರ ಸಾಹಿತ್ಯ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ, ಡಾ.ಪಾರ್ವತಿದೇವಿ ಪಾಟೀಲ ಮಾತನಾಡಿ, ಕನ್ನಡದ ಸಾಹಿತ್ಯ ಶ್ರೀಮಂತಿಕೆ ನೋಡಿದರೆ ಕನ್ನಡ ಅಂತಾರಾಷ್ಟ್ರೀಯ ಭಾಷೆ ಆಗಬೇಕಿತ್ತು. ಇದಕ್ಕೆ ನಾವೇ ಹೊಣೆ. ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸುವುದಿಲ್ಲ. ಕನ್ನಡ ಭಾಷೆ ಉಳಿಸಿ ಬೆಳೆಸಲು ಶಾಲೆ-ಕಾಲೇಜುಗಳಲ್ಲಿ ಕನ್ನಡ ಸಂಘಟನೆಗಳು ಹುಟ್ಟಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಸುಶೀಲಾ ಗುರವ ಮಾತನಾಡಿದರು. ರಾಜ್ಯ ಉಪಾಧ್ಯಕ್ಷೆ ಶಾಲಿನಿ ರುದ್ರಮುನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಲೀಲಾ ರಜಪೂತ (ಬೆಳಗಾವಿ), ವೀರಣ್ಣ ನಿಂಗೋಜಿ (ಕೊಪ್ಪಳ), ಶಿವಪ್ಪ ಶಾನವಾಡ (ಧಾರವಾಡ), ಶೆಟ್ಟಿ ಆಶಾ (ಉತ್ತರ ಕನ್ನಡ), ಕೆ.ಆರ್.ಗಿರೀಶ ಕೊಣನೂರು (ಹಾಸನ) ಇವರಿಗೆ ಶರಣ ಸಂಕುಲ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ವಿಜಯ ವಿ. ಬಡಿಗೇರ ರಚಿಸಿದ ಅನುಸ್ಪಂದನ ಆಧುನಿಕ ವಚನ ಸಂಕಲನ ಲೋಕಾರ್ಪಣೆಗೊಂಡಿತು. ವೇದಿಕೆ ತಾಲೂಕು ಅಧ್ಯಕ್ಷೆಯಾಗಿ ಡಾ.ಪಾರ್ವತಿದೇವಿ ಪಾಟೀಲ ಅಧಿಕಾರ ಸ್ವೀಕರಿಸಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕದ ಪದಾಧಿಕಾರಿಗಳಾದ ಪ್ರೀತಿ ಕುಲಕರ್ಣಿ, ದೀಪಾ ಪಾಟೀಲ, ಪ್ರಕಾಶ ಗಾಣಗಿ, ಸದಾನಂದ ಮಜತಿ, ಸುಪ್ರಿಯಾ ಮತ್ತಿವಾಡೆ, ವಸಂತ ಬಾಗೇವಾಡಿ, ವಿನಾಯಕ ಪರಕಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷೆ ಡಾ.ಪಾರ್ವತಿದೇವಿ ಪಾಟೀಲ ಸ್ವಾಗತಿಸಿದರು. ಉಪಾಧ್ಯಕ್ಷೆ ಪ್ರೀತಿ ಕುಲಕರ್ಣಿ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ ಗಾಣಗಿ ವಂದಿಸಿದರು.