ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಗ್ರಾಮ ದೇವತೆಯರ ಜಾತ್ರಾ ಮಹೋತ್ಸವಕ್ಕೂ ಮುನ್ನ ನಡೆಯುವ 9 ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋಕಾಕ ಮಹಾಜನತೆಯು ತನು, ಮನ, ಧನದಿಂದ ಭಾಗವಹಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.ಮೂರ್ತಿ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಮತ್ತು ಮಹಾರಥೋತ್ಸವ ಕಾರ್ಯಕ್ರಮದ ಮೊದಲ ದಿನದ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಏ.30 ರಿಂದ ಮೇ.8 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನವೂ ಭಜನೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತ ಸಮೂಹಕ್ಕೆ ದೇವಸ್ಥಾನದಲ್ಲಿ ಮಹಾ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಬಾಲಚಂದ್ರ ಜಾರಕಿಹೊಳಿ ಅವರ ಜೊತೆಗೆ ಯುವ ಮುಖಂಡರಾದ ಸಂತೋಷ ಜಾರಕಿಹೊಳಿ, ಅಮರನಾಥ ಜಾರಕಿಹೊಳಿ, ಸನತ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಅಭಿಷೇಕ ನಾಯಿಕ, ಜಾತ್ರಾ ಮಹೋತ್ಸವ ಸಮಿತಿಯ ಸದಸ್ಯರು, ಗಣ್ಯ ವರ್ತಕರು, ಯುವಕ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಸಂಘಟನೆಗಳ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹೋಮ ಪೂಜೆಯಲ್ಲಿ ಶಾಸಕ ಬಾಲಚಂದ್ರ:ಮೇ.1ರಂದು ಜರುಗಿದ ಪೂಜೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪಾಲ್ಗೊಂಡರು. ಮೆರಕನಟ್ಟಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರುಗಿದ ಮಹಾಲಕ್ಷ್ಮೀ ಮತ್ತು ಅದರ ಉಪ-ದೇವತೆಗಳ ಮೂರ್ತಿ ಪ್ರತಿಷ್ಠಾಪನೆ ಪೂಜೆಯಲ್ಲಿ ಭಾಗವಹಿಸಿದರು. ಉಚ್ಚಿಲ ಕೆ.ವಿ. ರಾಘವೇಂದ್ರ ಉಪಾಧ್ಯಾಯ ಜ್ಯೋತಿಷ್ಯರ ನೇತೃತ್ವದಲ್ಲಿ ಅಷ್ಠ ಬಂಧ ಪ್ರತಿಷ್ಠಾ ಪೂಜೆಯು ವಿವಿಧ ಪೂಜೆಗಳೊಂದಿಗೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮೇರಕನಟ್ಟಿ ಮಹಾಲಕ್ಷ್ಮೀ ದೇವಸ್ಥಾನದ ದ್ವಾರ ಬಾಗಿಲು ಮತ್ತು ನವಿಕೃತಗೊಂಡ ದೇವಸ್ಥಾನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಲೋಕಾರ್ಪಣೆ ಮಾಡಿದರು. ಅಮರನಾಥ ಮತ್ತು ಸರ್ವೋತ್ತಮ ಜಾರಕಿಹೊಳಿ, ಜಾತ್ರಾ ಕಮಿಟಿಯ ಪ್ರಮುಖರು, ನಗರ ಸಭೆ ಸದಸ್ಯರು, ಗ್ರಾಮಸ್ಥರು ಸೇರಿದಂತೆ ಹಲವರು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು.ವೈಭವದ ಮೆರವಣಿಗೆಗೆ ಶಾಸಕ ಬಾಲಚಂದ್ರ ಚಾಲನೆ
ಗೋಕಾವಿ ನೆಲದ ಶಕ್ತಿ ದೇವತೆಯಾದ ಮಹಾಲಕ್ಷ್ಮೀ ದೇವರ ಜಾತ್ರೆಯ ಅಂಗವಾಗಿ ದೇವರ ಬಿಂಬ, ಶಿಖರ, ಕಲಶ, ರಥ, ಗಂಗಾ ಜಲ, ಮೃತ್ತಿಕಗಳ ವೈಭವದ ಮೆರವಣಿಗೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಬುಧವಾರ ಚಾಲನೆ ನೀಡಿದರು. ನಗರದ ಗುರುವಾರ ಪೇಟೆಯಲ್ಲಿರುವ ಮಹಾಲಕ್ಷ್ಮೀ ಅಮ್ಮನವರ ದೇವಸ್ಥಾನದಿಂದ ಮಹಾಲಕ್ಷ್ಮೀ ದೇವಸ್ಥಾನದವರೆಗೆ ವಿವಿಧ ವಾದ್ಯ ವೃಂದಗಳೊಂದಿಗೆ ಅಪಾರ ಭಕ್ತ ಸಮೂಹದ ಮಧ್ಯ ಮಹಾಲಕ್ಷ್ಮೀ, ಗಣಪತಿ, ಆಂಜನೇಯ, ನಾಗದೇವ, ನವಗ್ರಹದೇವರ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಭವ್ಯ ಮೆರವಣಿಗೆಯಲ್ಲಿ ಮೆರಕನಟ್ಟಿ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಕರೆ ತರಲಾಯಿತು. ಕೊಳವಿ ಹನುಮಂತ ದೇವಸ್ಥಾನ, ಬಾಫನ ಚೌಕ್, ಅಜಂತಾ ಕೂಟ, ಆನಂದ ಚಿತ್ರಮಂದಿರ, ಬಸವೇಶ್ವರ ವೃತ್ತದ ಮೂಲಕ ಮೆರಕನಟ್ಟಿ ಮಹಾಲಕ್ಷ್ಮೀ ಅಮ್ಮನವರ ದೇವಸ್ಥಾನದವರೆಗೆ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹದ ನಡುವೆ ಮಹಾಲಕ್ಷ್ಮೀ ಮತ್ತು ಉಪ ದೇವತೆಗಳ ಭವ್ಯ ಮೆರವಣಿಗೆಯು ಜರುಗಿತು. ವಾದ್ಯವೃಂದಗಳು, ಜಾಂಜ ಪತಾಕ, ಡೊಳ್ಳು ಕುಣಿತ, ಉಡುಪಿ ಶೈಲಿಯ ಕಲೆಯನ್ನು ಹೊತ್ತುಕೊಂಡು ಕಲಾವಿದರು ದೇವರ ವಿಗ್ರಹಗಳನ್ನು ಬರಮಾಡಿಕೊಂಡರು. ನೂರಾರು ಸುಮಂಗಲೆಯರು ಕುಂಭ ಮೇಳ ಹೊತ್ತುಕೊಂಡು ತಮ್ಮ ಭಕ್ತಿ ಭಾವ ಮೆರೆದರು. ಮೂರ್ತಿಗಳ ತಮ್ಮ ತಮ್ಮ ಅಂಗಳದಲ್ಲಿ ಪ್ರವೇಶಿಸುತ್ತಿದ್ದಂತೆಯೇ ಗೃಹಿಣಿಯರು ಮುಂಚಿತವಾಗಿಯೇ ತಮ್ಮ ಮನೆಯೇ ಮುಂದೆ ಆಕರ್ಷಕವಾಗಿ ರಂಗೋಲಿ ಬಿಡಿಸಿ ನೀರು ಹಾಕಿ, ಪುಷ್ಪವೃಷ್ಟಿಗೈದು ದೇವರುಗಳಿಗೆ ಪೂಜೆ ಸಲ್ಲಿಸಿದರು.