ಪ್ರಜಾಪ್ರಭುತ್ವ ಗೆಲುವಿಗೆ ಮತದಾನದಲ್ಲಿ ಭಾಗಿಯಾಗಿ

| Published : Apr 02 2024, 01:04 AM IST

ಪ್ರಜಾಪ್ರಭುತ್ವ ಗೆಲುವಿಗೆ ಮತದಾನದಲ್ಲಿ ಭಾಗಿಯಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವದ ಗೆಲುವು ಮತದಾನದಲ್ಲಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಭಾಗಿ ಆಗುವುದರಿಂದ ಸದೃಢ ಸರ್ಕಾರ ರಚನೆಯಾಗಲು ಸಹಕಾರವಾಗಲಿದೆ. ಕರ್ತವ್ಯದಲ್ಲಿ ಒತ್ತಡದಿಂದ ಮುಕ್ತಿ ಹೊಂದಲು ಯೋಗಭ್ಯಾಸ ಉತ್ತಮ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಪ್ರಜಾಪ್ರಭುತ್ವದ ಗೆಲುವು ಮತದಾನದಲ್ಲಿದೆ. ಪ್ರತಿಯೊಬ್ಬರೂ ಮತದಾನದಲ್ಲಿ ಭಾಗಿ ಆಗುವುದರಿಂದ ಸದೃಢ ಸರ್ಕಾರ ರಚನೆಯಾಗಲು ಸಹಕಾರವಾಗಲಿದೆ. ಕರ್ತವ್ಯದಲ್ಲಿ ಒತ್ತಡದಿಂದ ಮುಕ್ತಿ ಹೊಂದಲು ಯೋಗಭ್ಯಾಸ ಉತ್ತಮ ಮಾರ್ಗವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.

ನಗರದ ಆಫೀಸರ್ಸ್‌ ಕ್ಲಬ್‌ನಲ್ಲಿ ಸೋಮವಾರ ಲೋಕಸಭಾ ಚುನಾವಣಾ ಮತದಾರರ ಜಾಗೃತಿ ಅಂಗವಾಗಿ ಏರ್ಪಡಿಸಲಾದ ಯೋಗ ತರಬೇತಿ ಶಿಬಿರ ಉದ್ಘಾಟನೆ ಹಾಗೂ ಮತದಾರರ ಜಾಗೃತಿ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯೋಗ ಮತ್ತು ಮತದಾನ ನಾಗರಿಕರ ಕ್ರಿಯಾಶೀಲತೆ ಹೆಚ್ಚಿಸುತ್ತದೆ. ಪ್ರತಿಯೊಂದು ಮತ ಅಮೂಲ್ಯ, ಶ್ರೇಷ್ಠ, ಶಕ್ತಿಯುತವಾದುದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೆಲವು ಕಡೆ ಶೇ.90 ಮತದಾನವಾಗಿದ್ದರೆ, ಕೆಲವು ಕಡೆ ಶೇ.20 ಮಾತ್ರ ಮತದಾನವಾಗಿದೆ. ಇಷ್ಟೊಂದು ವ್ಯತ್ಯಾಸ ಏಕೆಂದು ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಹೆಚ್ಚು ಮತದಾನವಾದಾಗ ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಮಾತನಾಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 72.96 ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚು, ಶೇ.90ರವರೆಗೆ ಮತದಾನ ಮಾಡಿಸಬೇಕೆಂದು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹೆಚ್ಚಿನ ಮತದಾನ ಅತ್ಯವಶ್ಯಕ. ಈ ಬಾರಿಯ ಮತದಾರರ ಚೀಟಿಯಲ್ಲಿ ಮತಗಟ್ಟೆಯ ಕ್ಯೂಆರ್ ಕೋಡ್ ಸಹ ಒಳಗೊಂಡಿರುತ್ತದೆ. ನಗರ, ಪಟ್ಟಣ ಪ್ರದೇಶದಲ್ಲಿ ಇದರಿಂದ ಯಾವುದೇ ಗೊಂದಲ, ಸ್ಥಳದ ವಿಳಾಸ ಅರಿಯಲು ಸಮಸ್ಯೆ ಆಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಪಾಲಿಕೆ ಆಯುಕ್ತರಾದ ರೇಣುಕಾ, ಆಫೀಸರ್ಸ್‌ ಕ್ಲಬ್ ಕಾರ್ಯದರ್ಶಿ ಡಾ.ಚಂದ್ರಶೇಖರ್ ಸುಂಕದ್, ಖಜಾಂಚಿ ಡಾ.ಮುರಳೀಧರ್, ಯೋಗಗುರುಗಳಾದ ಪರಶುರಾಂ, ಮಹದೇವಪ್ಪ, ಅನಿಲ್ ರಾಯ್ಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಯೋಗಪಟುಗಳಾದ ಕುಮಾರಿ ನಮಿತಾ ಮತ್ತು ಸೃಷ್ಟಿ ಹುಬ್ಬೇರಿಸುವಂತೆ ಯೋಗಾಸನ ಪ್ರದರ್ಶನ ಮಾಡಿದರು. ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಸ್ವಾಗತಿಸಿದರು.

- - - -1ಕೆಡಿವಿಜಿ40ಃ:

ಯೋಗ ತರಬೇತಿ ಶಿಬಿರ ಉದ್ಘಾಟನೆ, ಮತದಾನ ಜಾಗೃತಿ ಕರಪತ್ರವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ .ವೆಂಕಟೇಶ್‌ ಮಾತನಾಡಿದರು.