ಸಾರಾಂಶ
ಪಕ್ಷಕ್ಕಾಗಿ ದೇಣಿಗೆ ಸಂಗ್ರಹಕ್ಕೆ ಕಾರ್ಯಕರ್ತ ಅನ್ಯ ಮಾರ್ಗಕ್ಕೆ ಇಳಿಯಬಾರದು ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ದಾಂಡೇಲಿ: ನನ್ನ ರಾಜಕೀಯ ಜೀವನ ಈ ಹಿಂದೆ ಇಲ್ಲಿ ಇದ್ದ ಹಳೇ ಕಟ್ಟಡದಿಂದಲೇ ಪ್ರಾರಂಭಿಸಿದ್ದೇನೆ. ನನ್ನ ಐವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಇಳಿದವನಲ್ಲ. ಹಾಗಾಗಿ ದೇವರ ದಯೆಯಿಂದ ಇನ್ನೂ ರಾಜಕೀಯದಲ್ಲಿದ್ದೇನೆ. ಜನಸೇವೆಯೇ ನನ್ನ ರಾಜಕೀಯ ಜೀವನದ ಯಶಸ್ಸಿಗೆ ಕಾರಣ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಇಲ್ಲಿಯ ಪಟೇಲ್ ವೃತ್ತದಲ್ಲಿ ನೂತನವಾಗಿ ನಿರ್ಮಿಸಲಿರುವ ಕಾಂಗ್ರೆಸ್ ಭವನದ ಕಟ್ಟಡ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಈ ಕಟ್ಟಡ, ಪಕ್ಷದ ಕಚೇರಿಗಳು ಜನಸಾಮಾನ್ಯರಿಗೆ ಅವರು ಸಮಸ್ಯೆ ಹೇಳಿಕೊಳ್ಳುವುದಕ್ಕೆ ಇರುವ ಸೂಕ್ತ ಸ್ಥಳ. ಇಂತಹ ಕಟ್ಟಡಗಳ ಒಂದು ರೀತಿಯಲ್ಲಿ ಪಕ್ಷದ ಜೀವನಾಡಿ. ಪಕ್ಷಕ್ಕೆ ದೇಣಿಗೆ ಸಂಗ್ರಹಕ್ಕೆ ಕಾರ್ಯಕರ್ತ ಅನ್ಯ ಮಾರ್ಗಕ್ಕೆ ಇಳಿಯಬಾರದು. ಆದರೆ, ಈ ಪಕ್ಷದ ಕಚೇರಿಯ ಕಟ್ಟಡಕ್ಕೆ ದೇಣಿಗೆ ಬಂದರೆ ಅದನ್ನು ಕಾನೂನುಬದ್ಧವಾಗಿ, ನ್ಯಾಯಯುತವಾಗಿ ಪಡೆದು ರಸೀದಿ ನೀಡಬೇಕು. ಪಕ್ಷದ ಕಚೇರಿಗಳು ಎಲ್ಲ ಕಾರ್ಯಕರ್ತರ ಆಸ್ತಿ ಇದ್ದಂತೆ. ಇದು ಗುಣಮಟ್ಟದಿಂದ ಕೂಡಿರಬೇಕು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಯಾಸ್ಮಿನ್ ಕಿತ್ತೂರು, ರೇಣುಕಾ ಬಂದ, ಇಕ್ಬಾಲ್ ಶೇಖ, ಎಸ್.ಎಸ್. ಪೂಜಾರಿ ಇದ್ದರು.