ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಗ್ರಾಪಂ ಮಟ್ಟದಲ್ಲಿ ಪೌತಿ ಖಾತೆ ಆಂದೋಲನದ ಜೊತೆಗೆ ಆಧಾರ್ ಸೀಡಿಂಗ್ ಪ್ರಕ್ರಿಯೆಗಳನ್ನು ಸಕಾಲಕ್ಕೆ ಮುಗಿಸಿ ಉಪ ಕಂದಾಯ ಗ್ರಾಮಗಳನ್ನು ಗುರುತಿಸಿ ವರದಿ ನೀಡಬೇಕು ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.ಪಟ್ಟಣ ಪುರಸಭೆ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌತಿ ಖಾತೆ ಆಂದೋಲನವನ್ನು ತ್ವರಿತವಾಗಿ ಮಾಡಿದರೆ ರೈತರಿಗೆ ಅನುಕೂಲಕರ ವಾತಾವರಣವಿದೆ ಎಂದರು.
ಕ್ಷೇತ್ರದಲ್ಲಿ ವಿವಿಧ ಪಿಂಚಣಿಯನ್ನು ಸ್ಥಳದಲ್ಲೇ ನಿರ್ವಸಿಹಿಸುವ ಜೊತೆಗೆ ಗ್ರಾಪಂ ಹಂತದಲ್ಲಿರುವ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಶೇ.83 ರಷ್ಟು ಪರಿಷ್ಕರಣೆ ಕಾರ್ಯ ನಡೆದಿದೆ. ಶೇ. 100ರ ಗುರಿ ಮುಟ್ಟಬೇಕು. ಇದರ ಜೊತೆ ಆಧಾರ್ ಸಕಾಲಕ್ಕೆ ಸೀಡಿಂಗ್ ಪ್ರಕ್ರಿಯೆ ಮುಗಿಯಬೇಕು ಎಂದು ಸೂಚಿಸಿದರು.ಪ್ರಸಕ್ತ ಸಾಲಿನ ಬಜೆಟ್ನಲ್ಲಿ ರಾಜ್ಯ ಸರ್ಕಾರ ತಾಲೂಕಿನ ದೇವರಾಯ, ವಿರಿಜಾ ಮತ್ತು ಬಂಗಾರದೊಡ್ಡಿ ನಾಲೆಗಳ ಅಭಿವೃದ್ಧಿಗೆ 60 ಕೋಟಿ ರು. ಹಣ ನೀಡಿದೆ. ಅನುಷ್ಠಾನ ಸಂಬಂಧ ಕಾವೇರಿ ನೀರಾವರಿ ನಿಗಮ ವಿಸ್ತೃತ ಯೋಜನೆ ಸಿದ್ದಪಡಿಸಿ ಸಲ್ಲಿಸಬೇಕು. ಗ್ರಾಮೀಣ ಅಭಿವೃದ್ಧಿ ಅನುದಾನದಲ್ಲಿ 6 ಕೋಟಿ ರು. ಹಣ ಉಳಿದಿದೆ. ಇದರ ಜೊತೆ ಅದನ್ನು ಬಳಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಸಿಗೆ ಆರಂಭವಾಗಿರುವುದರಿಂದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ತಾಲೂಕಿನ ಚನ್ನನಕೆರೆ, ಕೋಡಿಶೆಟ್ಟಿಪುರ ಹಾಗೂ ಅರಕೆರೆ ಹೋಬಳಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಬಗ್ಗೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಗ್ರಾಪಂ ಆಡಳಿತಾಧಿಕಾರಿಗಳು ಎರಡು ವಾರಕ್ಕೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದಲ್ಲಿನ ಸ್ವಚ್ಛತಾ ಕಾರ್ಯ ಪರಿಶೀಲಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಬೇಸಿಗೆಗೆ ಅಗತ್ಯವಿರುವ ಔಷಧ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಕೃಷಿ ಇಲಾಖೆಯಿಂದ ಎಸ್ಇಪಿ ಯೋಜನೆಡಿಯಲ್ಲಿ ಕೃಷಿ ಹೊಂಡ ಬೋರ್ ವೆಲ್, ಕೃಷಿ ಭಾಗ್ಯ, ತುಂತುರು ಹನಿ ನೀರಾವರಿ ಋಷಿ ಯಾತ್ರಿಕರಣ ಕೃಷಿ ಸಲಕರಣೆ ಯೋಜನೆ ಬಳಕೆ ಮಾಡಿ ನಿರ್ಮಿಸುವ ಅದರಲ್ಲಿ ಸಿಗುವ ರಿಯಾಯಿತಿ ಸೌಲಭ್ಯ ಗಳನ್ನು ಫಲಾನುಭವಿಗಳಿಗೆ ಎಲ್ಲಾ ಗ್ರಾಮಗಳಿಗೆ ಪ್ರಚಾರ ದ ಮೂಲಕ ಮಾಹಿತಿ ನೀಡಿ ತ್ವರಿತವಾಗಿ ರೈತರಿಗೆ, ಕೃಷಿಕರಿಗೆ ಆರೋಗ್ಯ ಭಾಗ್ಯದ ಬಗ್ಗೆ ಮಾಹಿತಿಗಳ ನೀಡಿ ಎಂದರು.ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಹಾಯ ಧನ ಕೋರಿ ಅರ್ಜಿಗಳು ಕಡಿಮೆ ಬರುತ್ತಿವೆ. ಈ ಬಾಬ್ತು ಇನ್ನೂ 10 ಲಕ್ಷ ರು. ಅನುದಾನ ಉಳಿದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ವರದಿ ನೀಡಿದರು.
ತಾಪಂ ಆಡಳಿತಾಧಿಕಾರಿ ಪಿ.ಲಕ್ಷ್ಮಿ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಯಲ್ಲೇ ಮೊದಲ ಸ್ಥಾನ ಪಡೆಯಲು ಅಧಿಕಾರಿಗಳು ಮತ್ತು ಶಿಕ್ಷಕರು ಶ್ರಮಿಸಬೇಕು. ಶಾಲಾ ಹಂತದಲ್ಲಿ ಹೆಚ್ಚಿನ ಫಲಿತಾಂಶ ಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಾಗುವುದು. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿ ಎಂದರು.ತಾಲೂಕಿನ ವಿವಿಧ ಸರ್ಕಾರಿ ಹಾಸ್ಟೆಲ್ಗಳಲ್ಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ವಾರ್ಡನ್ಗಳು ಕ್ರಮ ವಹಿಸಬೇಕು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಚೇತನಾ ಯಾದವ್, ತಾಪಂ ತಾಪಂ ಇಒ ಚಂದ್ರ, ತಾಲೂಕು ಯೋಜನಾಧಿಕಾರಿ ಎಂ.ಎಂ. ತ್ರಿವೇಣಿ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎನ್. ನಾಗರಾಜು, ಸಿಪಿಐ ಬಿ.ಜಿ.ಕುಮಾರ್, ಬಿಇಒ ಬಿ.ವಿ.ನಂದೀಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.