ಕಡೂರು ತಾಲೂಕು ಬಿಸಲೆರೆಯಲ್ಲಿ ಶಾಸಕರ ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರದ 2-ಇ ನೋಟಿಫಿಕೇಷನ್‌ ಮೂಲಕ ಹಕ್ಕುಪತ್ರ ಪಡೆಯಲು ಜನರು ಮಾರ್ಚ್‌ ತಿಂಗಳ ಅಂತ್ಯದೊಳಗೆ ಕಂದಾಯ ಇಲಾಖೆಗೆ ಚಲನ್‌ ಪಾವತಿಸಿ ಸೌಲಭ್ಯ ಪಡೆಯಬೇಕು ಎಂದು ಶಾಸಕ ಕೆ.ಎಸ್‌.ಆನಂದ್‌ ಸೂಚಿಸಿದರು. ತಾಲೂಕಿನ ಬಿಸಲೆರೆಯಲ್ಲಿ ಶಾಸಕರ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಕಡೂರು ತಾಲೂಕಿನಲ್ಲಿ 14,700 ಮನೆಗಳಿಗೆ 94 ಡಿ ಯಲ್ಲಿ ಹಕ್ಕುಪತ್ರ ಒದಗಿಸಬೇಕಿದೆ. ಬಿಸಲೆರೆ ಗ್ರಾಪಂ ವ್ಯಾಪ್ತಿಯಲ್ಲಿ ಬಿಸಲೆರೆಯಲ್ಲಿ 90, ಜಕ್ಕನಹಳ್ಳಿಯಲ್ಲಿ 20, ಆಡಿಗೆರೆಯಲ್ಲಿ 40 ಮನೆಗಳವರು ಚಲನ್‌ ಪಾವತಿಸಿಲ್ಲ. ಕಂದಾಯ ಇಲಾಖೆ ಮಾ.16ರ ಒಳಗೆ ಪ್ರಸ್ತಾವನೆ ಸಲ್ಲಿಸಬೇಕು. ಗ್ರಾಪಂ ಮನೆ ಮನೆಗೆ ಕಸದ ಗಾಡಿಗಳ ಮೂಲಕ ಪ್ರಚಾರ ಮಾಡಿ ಜನರಿಗೆ ಅರಿವು ಮೂಡಿಸಬೇಕು. ಎಂದು ಸಲಹೆ ನೀಡಿದರು. ಕಂದಾಯ ಇಲಾಖೆ ಕೂಡಾ ಸಮಸ್ಯೆ ಇರುವ ಸ್ವತ್ತುಗಳ ಸ್ಥಳದ ಅಳತೆ ಮಾಡಿಸಿ 2-ಇ ನೋಟಿಫಿಕೇಷನ್‌ಗೆ ಸಿದ್ಧತೆ ಮಾಡಿ ಕೊಳ್ಳಬೇಕು, ಬಿಸಲೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳಿವೆ. ಗ್ರಾಮ ಆಡಳಿತಾಧಿಕಾರಿ ಮತ್ತು ಆರ್.ಐ. ಪಿಡಿಒ ಜೊತೆ ಸಮನ್ವಯ ಸಾಧಿಸಿ ಇನ್ನು 2 ತಿಂಗಳ ಒಳಗೆ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಕಂದಾಯ ಸಚಿವರ ಮುಂದೆ ನಾನೇ ಕೂರುತ್ತೇನೆ ಎಂದು ಎಚ್ಚರಿಸಿದರು. "ಅಕ್ರಮ ಸಕ್ರಮದಲ್ಲಿ ಟಿಸಿ ಅಳವಡಿಸಲು ಹಣ ಪಾವತಿಸಿ ಐದೂವರೆ ವರ್ಷವಾದರೂ ಮೆಸ್ಕಾಂ ಕ್ರಮ ವಹಿಸಿಲ್ಲ. ಕೇಳಿದರೆ ನೀವು ಪಾವತಿಸಿದ ಹಣ ಕ್ರೆಡಲ್‌ ಖಾತೆಗೆ ಹೋಗಿದೆ ಎನ್ನುತ್ತಾರೆ. ನಮ್ಮ ಜಮೀನು 500ಮೀ.ಒಳಗೇ ಇದ್ದು ಟಿಸಿ ಅಳವಡಿಸಿ ಎಂದು ಅರ್ಜಿ ಸಲ್ಲಿಸಿದ್ದಾಗಿ ಹೇಳಿದಾಗ ಮೆಸ್ಕಾಂ ಬೀರೂರು ಎಇಇ ವೀಣಾ ಅವರಿಂದ ಮಾಹಿತಿ ಪಡೆದ ಶಾಸಕ ಆನಂದ್‌, ಅವರು ನಿಮ್ಮ ಇಲಾಖೆ ಮಾಡಿದ ತಪ್ಪಿಗೆ ಜನರು ಏಕೆ ತೊಂದರೆ ಅನುಭವಿಸಬೇಕು ಪರಿಶೀಲಿಸಿ ಕ್ರಮ ಕೈಗೊಳ್ಳಲು ತಾಕೀತು ಮಾಡಿದರು. ಗ್ರಾಮದ ಮಹಿಳೆ ಒಬ್ಬರು ನನಗೆ 75 ವರ್ಷ ವಯಸ್ಸಾಗಿದೆ. ₹800 ವಿಧವಾ ವೇತನ ಬರುತ್ತಿದೆ, ಅದನ್ನು 1,200 ಮಾಡಿಕೊಡಿ ಎಂದು ಮನವಿ ಮಾಡಿದರು. ಸಭೆಯಲ್ಲಿದ್ದ ತಹಸೀಲ್ದಾರ್‌ ಸಿ.ಎಸ್‌.ಪೂರ್ಣಿಮಾ ಇವರಿಗೆ 59 ವರ್ಷ ತುಂಬುತ್ತಿದ್ದಂತೆ ವೃದ್ಧಾಪ್ಯ ವೇತನಕ್ಕೆ ಪರಿಗಣಿಸಬೇಕಿತ್ತು. ಅಧಿಕಾರಿಗಳು ತಕ್ಷಣ ಕ್ರಮ ವಹಿಸಿ ಎಂದು ಆದೇಶಿಸಿದರು. ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್‌, ಕೆಡಿಪಿ ಸದಸ್ಯ ಗುಮನಹಳ್ಳಿ ಅಶೋಕ್‌, ಗ್ಯಾರಂಟಿ ಸಮಿತಿ ಸದಸ್ಯೆ ಪುಷ್ಪಾ ರಮೇಶ್‌, ತೋಟಗಾರಿಕಾ ಸಹಾಯಕ ನಿರ್ದೇಶಕ ಜಯದೇವಪ್ಪ ಇದ್ದರು. ಗ್ರಾಮಸ್ಥರಾದ ಬಿಸಿಲೆರೆ ಕೆಂಪರಾಜ್‌, ಪ್ರಭುಕುಮಾರ್‌, ಓಂಕಾರಪ್ಪ, ಸ್ವಾಮಿ, ರಾಜಣ್ಣ, ನಂದೀಶ್‌ ಮತ್ತಿತರರು ಇದ್ದರು.--ಬಾಕ್ಸ್ --

ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ "ಗ್ರಾಮದ ಮನೆಗಳಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಮಕ್ಕಳು ಹಾಳಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ಮಹಿಳೆಯರು ಮನವಿ ಮಾಡಿದ್ದಕ್ಕೆ ಅಬಕಾರಿ ಇನ್‌ಸ್ಪೆಕ್ಟರ್‌ ಸಂದೀಪ್‌ ಮತ್ತು ಯಗಟಿ ಪಿಎಸ್‌ಐ ಸೂಕ್ತ ಕ್ರಮ ವಹಿಸಿ ಎಂದು ಶಾಸಕ ಆನಂದ್‌ ಸೂಚಿಸಿದರು. 7ಕೆಕೆಡಿಯು2. ಕಡೂರು ತಾಲೂಕು ಬಿಸಲೆರೆಯಲ್ಲಿ ಶನಿವಾರ ನಡೆದ ಶಾಸಕರ ನಡೆ-ಗ್ರಾಮ ಪಂಚಾಯಿತಿ ಕಡೆ ಕಾರ್ಯಕ್ರಮದ ಜನಸಂಪರ್ಕ ಸಭೆಯನ್ನು ಶಾಸಕ ಕೆ.ಎಸ್‌.ಆನಂದ್‌ ಉದ್ಘಾಟಿಸಿದರು.