ಕೇಂದ್ರದಿಂದ ರಾಜ್ಯ ರೈತರಿಗೆ ವಿಮೆ ಹಣ ಸಂದಾಯ

| Published : Dec 04 2024, 12:31 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ರೈತರ ಆರ್ಥಿಕ ಸ್ಥಿತಿಯನ್ನು ಸಬಲೀಕರಣ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ರೈತರ ಕಲ್ಯಾಣವೇ ಎನ್‌ಡಿಎ ಸರ್ಕಾರದ ಪ್ರಥಮ ಆದ್ಯತೆ. ಬೆಳೆ ನಷ್ಟ ಭರಿಸಲು ಫಸಲ್ ಬಿಮಾ, ಕೃಷಿ ಸಮ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ ಜೈರಿಗ ತಂದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಫಸಲ್ ಬಿಮಾ ಯೋಜನೆಯಡಿ ಕರ್ನಾಟಕದ ರೈತರಿಗೆ ಒಟ್ಟು 13,551 ಕೋಟಿ ರು. ವಿಮೆ ಪರಿಹಾರ ಒದಗಿಸಿದೆ. ಹಾಗೆಯೇ ಕೃಷಿ ಸಮ್ಮಾನ್ ಯೋಜನೆಯಡಿ ಒಟ್ಟು 17,102 ಕೋಟಿ ರು. ನೀಡಲಾಗಿದೆ. ಈ ಕುರಿತು ಡಾ.ಕೆ.ಸುಧಾಕರ್‌ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಭಗೀರಥ ಚೌಧರಿ ಉತ್ತರಿಸಿದ್ದಾರೆ.ಫಸಲ್‌ ಬಿಮಾ ಯೋಜನೆ

ರೈತರು ಎದುರಿಸುವ ಬೆಳೆ ನಷ್ಟದ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ 2016 ರಲ್ಲಿ ಫಸಲ್‌ ಬಿಮಾ ಯೋಜನೆ ಜಾರಿ ಮಾಡಿದೆ. ಮುಂಗಾರು ಹಾಗೂ ಹಿಂಗಾರು ಅವಧಿ ಸೇರಿದಂತೆ ಅನೇಕ ರೈತರು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಮತ್ತಿತರ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿದ್ದಾರೆ. 2023-24 ನೇ ಸಾಲಿನ ಮುಂಗಾರು ಅವಧಿಯಲ್ಲಿ 1,867.11 ಕೋಟಿ ರು. ಹಾಗೂ ಹಿಂಗಾರು ಅವಧಿಯಲ್ಲಿ 154.45 ಕೋಟಿ ರು. ಬೆಳೆ ನಷ್ಟ ಪರಿಹಾರ ನೀಡಲಾಗಿದೆ.

ಒಟ್ಟಾರೆಯಾಗಿ ಈ ಸಾಲಿನಲ್ಲಿ 2,021.56 ಕೋಟಿ ರು. ಬೆಳೆ ನಷ್ಟ ಪರಿಹಾರ ರೈತರಿಗೆ ಸಂದಿದೆ. 2016-17 ನೇ ಸಾಲಿನಿಂದ ಈವರೆಗೆ ಒಟ್ಟಾರೆಯಾಗಿ 13,551.70 ಕೋಟಿ ರು. ನಷ್ಟ ಪರಿಹಾರವನ್ನು ರೈತರು ಪಡೆದಿದ್ದಾರೆ ಎಂದು ಸಚಿವರು ಉತ್ತರಿಸಿದ್ದಾಗಿ ಸಂಸದ ಡಾ.ಸುಧಾಕರ್‌ ತಿಳಿಸಿದ್ದಾರೆ.50 ಲಕ್ಷ ರೈತರಿಗೆ ವಿಮೆ ಹಣ

ಪ್ರಧಾನಿ ಮೋದಿಯವರ ಮಹತ್ವಕಾಂಕ್ಷೆಯ ಕಿಸಾನ್‌ ಸಮ್ಮಾನ್‌ ಯೋಜನೆ 2018-19 ರಿಂದ ಆರಂಭವಾಗಿದೆ. ಈವರೆಗೆ ಒಟ್ಟು 18 ಕಂತುಗಳಲ್ಲಿ ಕರ್ನಾಟಕದ ಸರಾಸರಿ 50 ಲಕ್ಷ ರೈತ ಕುಟುಂಬಗಳಿಗೆ ಒಟ್ಟು 17,102.79 ಕೋಟಿ ರು. ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. 2024-25 ನೇ ಸಾಲಿನ ಏಪ್ರಿಲ್‌-ಜುಲೈ ಅವಧಿಯ 17 ನೇ ಕಂತಿನಲ್ಲಿ 43,04,818 ರೈತರಿಗೆ 958.26 ಕೋಟಿ ರು. ಹಾಗೂ ಆಗಸ್ಟ್‌-ನವೆಂಬರ್‌ ಅವಧಿಯ 18 ನೇ ಕಂತಿನಲ್ಲಿ 43,47,737 ರೈತರಿಗೆ 941.76 ಕೋಟಿ ರು. ಸಹಾಯಧನ ನೀಡಲಾಗಿದೆ ಎಂದು ಸರ್ಕಾರ ಉತ್ತರ ನೀಡಿದೆ ಎಂದು ತಿಳಿಸಿದ್ದಾರೆ.ಈ ಕುರಿತು ಸಂತಸ ವ್ಯಕ್ತಪಡಿಸಿರುವ ಸಂಸದ ಡಾ.ಕೆ.ಸುಧಾಕರ್‌, ಪ್ರಧಾನಿ ನರೇಂದ್ರ ಮೋದಿಯವರು ರೈತರ ಆರ್ಥಿಕ ಸ್ಥಿತಿಯನ್ನು ಸಬಲೀಕರಣ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ರೈತರ ಕಲ್ಯಾಣವೇ ಎನ್‌ಡಿಎ ಸರ್ಕಾರದ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ.