ಮಲ್ಲಾ (ಬಿ) ಗ್ರಾಮ ಪಂಚಾಯತ್ ಪಿಡಿಓ ಅಮಾನತು ಆದೇಶ. | Kannada Prabha
Image Credit: KP
ಗ್ರಾಮಸ್ಥಗೆ ಚಪ್ಪಲಿಯಿಂದ ಹೊಡೆದಿದ್ದ ಪಿಡಿಒ ಅಮಾನತುಜಿಪಂ ಸಿಇಒ ಗರೀಮಾ ಪನ್ವಾರ್ ಆದೇಶ । ಪಿಡಿಒ ವಿರುದ್ಧ ಕೆಂಭಾವಿ ಠಾಣೆಯಲ್ಲಿ ದೂರು
ಜಿಪಂ ಸಿಇಒ ಗರೀಮಾ ಪನ್ವಾರ್ ಆದೇಶ । ಪಿಡಿಒ ವಿರುದ್ಧ ಕೆಂಭಾವಿ ಠಾಣೆಯಲ್ಲಿ ದೂರು ಕನ್ನಡಪ್ರಭ ವಾರ್ತೆ ಯಾದಗಿರಿ ಗ್ರಾಮಸ್ಥರೊಬ್ಬರಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾಲೂಕಿನ ಮಲ್ಲಾ (ಬಿ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುತ್ರಪ್ಪಗೌಡ ಎನ್ನುವವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ್ ಆದೇಶಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಸಿಗದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರೊಬ್ಬರು ನಲ್ಲಿ ಮುರಿದಿದ್ದಾರೆಂದು ದೂರಿ, ಆಕ್ರೋಶಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುತ್ರಪ್ಪಗೌಡ, ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿ, ಚಪ್ಪಲಿಯಿಂದ ಹೊಡೆದಿದ್ದರಲ್ಲದೆ, ಮತ್ತೋರ್ವ ಗ್ರಾಮಸ್ಥನ ಕೈತಿರುವಿ ಕಪಾಳಮೋಕ್ಷ ಮಾಡಿದ್ದಾರೆಂದು ದೂರಲಾಗಿತ್ತು. ಚಪ್ಪಲಿಯಿಂದ ಹೊಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿ, ಪಿಡಿಒ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ಕುರಿತು ವರದಿ ಸಲ್ಲಿಸುವಂತೆ ಬಂದ ಆದೇಶದಿಂದಾಗಿ, ಸುರಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ ವರದಿಯನ್ವಯ, ಮೇಲ್ನೋಟಕ್ಕೆ ಪಿಡಿಒ ದುರ್ನಡತೆ ತೋರಿದ್ದು, ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ವರ್ತಿಸದೆ, ಚಪ್ಪಲಿಯಿಂದ ಹೊಡೆದು ಸರ್ಕಾರಿ ನೌಕರನಾಗಿ ತಕ್ಕುದಲ್ಲದ ರೀತಿಯಿಲ್ಲಿ ನಡೆದುಕೊಂಡಿದ್ದರಿಂದ ಅಮಾನತು ಮಾಡಲಾಗಿದೆ ಎಂದು ಗರೀಮಾ ಪನ್ವಾರ್ ಆದೇಶದಲ್ಲಿ ತಿಳಿಸಲಾಗಿದೆ. ಇತ್ತೀಚೆಗಷ್ಟೇ, ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದ ಮಲ್ಲಾ (ಬಿ) ಗ್ರಾಮ ಪಂಚಾಯಿತಿಯಲ್ಲಿ ಇಂತಹ ಪ್ರಕರಣ ವ್ಯಾಪಕ ಖಂಡನೆಗೆ ಕಾರಣವಾಗಿದೆ. ಗ್ರಾಮಸ್ಥ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂದು ಪಿಡಿಒ ಠಾಣೆಗೆ ದೂರಿದ್ದರೆ, ಚಪ್ಪಲಿಯಿಂದ ಹೊಡೆದ ಬಗ್ಗೆ ಗ್ರಾಮಸ್ಥ ಪಿಡಿಒ ವಿರುದ್ಧ ಕೆಂಭಾವಿ ಠಾಣೆಯಲ್ಲಿ ದೂರು ನೀಡಿದ್ದಾರೆ. - - - 16ವೈಡಿಆರ್18 : ಮಲ್ಲಾ (ಬಿ) ಪಿಡಿಒ ಅಮಾನತು ಆದೇಶ. - - -
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.