ಹೊನ್ನಾಳಿ: ಬುದ್ದ, ಬಸವ ಹಾಗೂ ಅಂಬೇಡ್ಕರ್ ಅವರಂತಹ ಮಹಾತ್ಮರಿಗಿಂತ ಮೊದಲೇ 5ನೇ ಶತಮಾನದಲ್ಲಿಯೇ ಭಗವಾನ್ ಮಹಾವೀರರು ಮನುಕುಲಕ್ಕೆ ಶಾಂತಿ, ಅಹಿಂಸಾ ಮಾರ್ಗಗಳನ್ನು ತೋರಿಸಿಕೊಟ್ಟವರಾಗಿದ್ದಾರೆ. ಗಾಂಧೀಜಿ ಕೂಡ ಭಗವಾನ್ ಮಹಾವೀರರ ತತ್ವ, ಸಿದ್ಧಾಂತಗಳಿಂದ ಪ್ರಭಾವಿತರಾಗಿ, ಜೀವನ ಪರ್ಯಂತ ಅಹಿಂಸಾ ತತ್ವ ಪರಿಪಾಲಿಸಿದರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಹಾವೀರ ಭಾವಚಿತ್ರಕ್ಕೆ ಪುಪ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಈಗಿನ ಮತ್ತು ಮುಂದಿನ ಪೀಳಿಗೆಗೆ ದೇಶದ ಇತಿಹಾಸದಲ್ಲಿ ಬಂದುಹೋಗಿರುವ ಅನೇಕ ಮಹಾಪುರುಷರ ಜೀವನ, ಸಾಧನೆಗಳ ಬಗ್ಗೆ ಪರಿಚಯವಾಗಬೇಕು ಎನ್ನುವ ಸದುದ್ದೇಶದಿಂದ ಸರ್ಕಾರಗಳು ಹಲವಾರು ಮಹಾನ್ ಪುರುಷರ ಜಯಂತಿ ಆಚರಿಸುವ ಪದ್ಧತಿ ಜಾರಿಗೆ ತಂದಿದೆ ಎಂದರು.

ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಚ್.ಪಿ. ಅನಂತನಾಗ್ ಉಪನ್ಯಾಸ ನೀಡಿದರು. ತಾಲೂಕು ಜೈನ ಸಮಾಜದ ಅಧ್ಯಕ್ಷ ಶ್ರೇಯಾಂಶ್ ಕುಮಾರ್, ಮುಖಂಡರು ಸಮಾಜಕ್ಕಾಗಿ ನಿವೇಶನ, ಸಮುದಾಯ ಭವನ ಮಂಜೂರಾತಿಗಾಗಿ ಹಾಗೂ ಸರ್ಕಾರದ ಹಂತದಲ್ಲಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.

ಜೈನ ಸಮುದಾಯ ಯುವ ಮುಖಂಡ ದರ್ಶನ್ ಬಳ್ಳೇಶ್ವರ ಮಾತನಾಡಿದರು. ಗ್ರೇಡ್ -2 ತಹಸೀಲ್ದಾರ್ ಸುರೇಶ್, ಜೈನ ಸಮಾಜದ ಉಪಾಧ್ಯಕ್ಷ ಪ್ರಭಾಕರ, ಕಾರ್ಯದರ್ಶಿ ಬಾಹುಬಲಿ, ಪ್ರಮೋದ್, ಶಾಂತರಾಜ್, ವೀರೇಂದ್ರಕುಮಾರ್, ಪಾರ್ಶ್ವನಾಥ ಜೈನ್, ಕುಮಾರಿ ದೀಕ್ಷಾ, ಪುಪ್ಪಾ ಮುಂತಾದವರು ಇದ್ದರು. ಕಂದಾಯ ಇಲಾಖೆ ಸಿಬ್ಬಂದಿ ಅಶೋಕ ನಾಯ್ಕ ನಿರೂಪಿಸಿದರು.

- - -


-30ಎಚ್.ಎಲ್.ಐ2: