ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಹಲವಾರು ದಶಕಗಳಿಂದ ಧಾರ್ಮಿಕ ನೆಲೆಗಟ್ಟು ಮತ್ತು ಸಂಪ್ರದಾಯ ಮತ್ತು ದೈವ ಶಕ್ತಿಯನ್ನು ನಂಬಿ ಬದುಕನ್ನು ಹಂಚಿಕೊಂಡ ನಾವೆಲ್ಲರೂ ಸದಾಕಾಲ ದೇವರು ಮತ್ತು ಗುರುವಿಗೆ ಋಣಿಯಾಗಿರಬೇಕಿದೆ. ಕಾರಣ, ನಮ್ಮೆಲ್ಲರ ಬದುಕಿನಲ್ಲೂ ಆತ್ಮವಿಶ್ವಾಸ ತುಂಬುವ ಶಕ್ತಿ ಅದು ಗುರು ಮತ್ತು ದೈವಶಕ್ತಿ. ಎರಡನ್ನು ಏಕಕಾಲದಲ್ಲಿ ಪಡೆಯುವ ಪುಣ್ಯಸ್ಥಳವೇ ದೊಡ್ಡೇರಿಯ ದತ್ತಾವಧೂತ ಕನ್ನೇಶ್ವರ ಆಶ್ರಮ ಮತ್ತು ಈ ಆಶ್ರಮದಲ್ಲಿ ಧಾರ್ಮಿಕ ಶಕ್ತಿಯಾಗಿ ಹೊರಹೊಮ್ಮಿರುವ ಮಲ್ಲಪ್ಪಸ್ವಾಮೀಜಿ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಮಹಾ ಶಿವರಾತ್ರಿ ಹಿನ್ನೆಲೆ ಭಾನುವಾರ ದೊಡ್ಡೇರಿಯ ದತ್ತಾವಧೂತ ಕನ್ನೇಶ್ವರ ಆಶ್ರಮಕ್ಕೆ ಭೇಟಿ ನೀಡಿ ಮಲ್ಲಪ್ಪಸ್ವಾಮೀಜಿಯವರಿಗೆ ಅವರು ಕೈಗೊಂಡ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಮಾತನಾಡಿದರು.

ಪ್ರತಿನಿತ್ಯ ನಾಡಿನ ಮೂಲೆ, ಮೂಲೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಕನ್ನೇಶ್ವರ ಆಶ್ರಮವನ್ನು ಹುಡುಕಿಕೊಂಡು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿದೇಶದಿಂದಲೂ ನೂರಾರು ಸಂಖ್ಯೆಯಲ್ಲಿ ಶಿವನ ಭಕ್ತರು ಆಗಮಿಸುತ್ತಾರೆ. ವಿದೇಶದಿಂದ ಇಲ್ಲಿಗೆ ಬಂದರೂ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಸ್ವಾಮೀಜಿಯವರ ದರ್ಶನ ಪಡೆದು ಶಿವನಾಮ ಸ್ಮರಣೆ ಮಾಡುತ್ತಾರೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರ ಮನದಲ್ಲೂ ದೇವರ ಬಗ್ಗೆ ಅಪಾರವಾಧ ಭಕ್ತಿ, ಶ್ರದ್ಧೆ ಮೂಡುತ್ತದೆ. ಮಲ್ಲಪ್ಪ ಶ್ರೀಗಳು ಸಹ ಭಕ್ತರ ಸಂಕಷ್ಟಗಳ ನಿವಾರಣೆಗೆ ಪ್ರತಿನಿತ್ಯವೂ ಶಿವನನ್ನು ಪ್ರಾರ್ಥಿಸಿ ಪೂಜಿಸುತ್ತಾರೆ ಎಂದರು.

ಮಲ್ಲಪ್ಪ ಸ್ವಾಮೀಜಿ ಮಾತನಾಡಿ, ಕನ್ನೇಶ್ವರ ಮಠದಲ್ಲಿ ಪ್ರತಿನಿತ್ಯ ನಡೆಯುವ ದೇವರ ಪೂಜೆ, ಸೇವಾ ಕಾರ್ಯಗಳಲ್ಲಿ ಭಕ್ತರು ಸ್ವಯಂ ಪ್ರೇರಣೆಯಿಂದಲೇ ಭಾಗವಹಿಸುತ್ತಾರೆ. ಇಲ್ಲಿಗೆ ಬರುವ ಯಾವುದೇ ಭಕ್ತರಿಗೆ ಯಾವುದೇ ನಿಯಮವಿಲ್ಲ. ಅವರಲ್ಲಿರುವ ನಿರ್ಮಲವಾದ ಭಕ್ತಿಯೊಂದೇ ಸಾಕಾಗಿದೆ. ಇಲ್ಲಿಗೆ ಬರುವ ಎಲ್ಲರೂ ದೇವರು ಮತ್ತು ದೈವದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟಿರುತ್ತಾರೆ. ಪ್ರತಿವರ್ಷ ಶಿವರಾತ್ರಿ ದಿನದಂದು ಕರ್ನಾಟಕವೂ ಹೊರತುಪಡಿಸಿ ಬೇರೆ, ಬೇರೆ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಎಲ್ಲರಿಗೂ ಪ್ರಸಾದ, ಎಲ್ಲಾ ಸೌಕರ್ಯವನ್ನು ಮಠದ ಭಕ್ತರು ಮಾಡುತ್ತಾರೆ. ನನ್ನ ಕೆಲಸ ಭಗವಂತನನ್ನು ಪ್ರಾರ್ಥಿಸುವುದು. ವಿಶ್ವ ಕಲ್ಯಾಣಕ್ಕಾಗಿ ದೇವರಲ್ಲಿ ಮೊರೆ ಹೋಗುತ್ತೇನೆ. ಮಠದ ಮೇಲೆ ಭಕ್ತರು ಅಪಾರವಾದ ನಂಬಿಕೆ ಇಟ್ಟಿದ್ದಾರೆ.


ಭಕ್ತಿಯಿಂದ ಪೂಜಿಸುತ್ತಾರೆ, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮ ನಿರಂತರವಾಗಿ ಮುಂದುವರೆಯಲಿದೆ ಎಂದರು.

ನರಹರಿ ನಗರದ ನರಹರಿ ಸದ್ಗುರು ಪೀಠಕ್ಕೆ ಭೇಟಿ ನೀಡಿದ ಶಾಸಕ ಟಿ.ರಘುಮೂರ್ತಿ ಯಯಾಟಿ ರಾಜಾರಾಮ್ ಸ್ವಾಮೀಜಿಯವರನ್ನು ಭೇಟಿ ಮಾಡಿ ಪೂಜೆ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ, ಕೆಂಚವೀರನಹಳ್ಳಿ ಮಲ್ಲೇಶ್, ದಯಾನಂದ ಪ್ರಹ್ಲಾದ್, ಮಾರುತಿ, ಮಾಜಿ ಗ್ರಾಪಂ ಸದಸ್ಯ ಎನ್.ಮಂಜುನಾಥ, ಶೈಲಜಾ ಮಂಜುನಾಥ, ಬಳ್ಳಾರಿ ರಸ್ತೆಯ ಸೂಜಿ ಮಲ್ಲೇಶ್ವರ ನಗರದಲ್ಲಿರುವ ಈಶ್ವರ ದೇವಸ್ಥಾನಕ್ಕೆ ಶಾಸಕರು ಭೇಟಿ ನೀಡಿ ಅಲ್ಲಿನ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ದೇವಸ್ಥಾನದ ಸಮಿತಿ ಅಧ್ಯಕ್ಷ ವಸಂತ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ನಾಗರಾಜು, ಕಾಂಗ್ರೆಸ್ ಮುಖಂಡರಾದ ಎಚ್.ಹನುಮಂತಪ್ಪ, ಕುಶಲಕರ್ಮಿ ರಾಜ್ಯ ಪರಿಷತ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ನಗರಸಭಾ ಮಾಜಿ ಸದಸ್ಯ ಎಂ.ಜೆ.ರಾಘವೇಂದ್ರ, ಎಂ.ಚೇತನ್‌ ಕುಮಾರ್, ಗ್ರಾಪಂ ಮಾಜಿ ಸದಸ್ಯ ಶಿವಣ್ಣ, ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.