ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭಗವಾನ್ ಬುದ್ಧನು ಬೋಧಿಸಿದ ಪಂಚಶೀಲ ತತ್ವಗಳಲ್ಲಿ ಮನುಕುಲದ ಶಾಂತಿ ಅಡಗಿದೆ ಎಂದು ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಹೌರ್ಸಿಂಗ್ ಬೋರ್ಡ್ ಕಾಲೋನಿಯ ಬುದ್ಧ, ಬಸವ ಮತ್ತು ಅಂಬೇಡ್ಕರ್ ಯೋಗ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ 2570 ನೇ ವೈಶಾಖ ಶುದ್ಧ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅಹಿಂಸೆ, ಸತ್ಯಸಂಧತೆ, ನೈತಿಕ ನಡವಳಿಕೆಯ ಬಗ್ಗೆ ತನ್ನ ಬೋಧನೆಗಳ ಮೂಲಕ ಜಗತ್ತಿನ ನೆಮ್ಮದಿಗೆ ಬೇಕಾದ ಬದುಕಿನ ಸಾರವನ್ನು ಸಾರುವ ಮೂಲಕ ಸಿದ್ಧಾರ್ಥ ಬುದ್ಧನಾಗಿ ಜ್ಞಾನಿಯಾದರು ಎಂದರು.
ಸಾಮಾನ್ಯ ರಾಜಕುಮಾರನಾಗಿದ್ದ ಸಿದ್ಧಾರ್ಥನು ರೋಗ, ಮುಪ್ಪು, ಸಾವು ಮುಂತಾದ ಜೀವಿಗಳಿಗೆ ಸಾಮಾನ್ಯವಾಗಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮುಂದಾದ. ಅದಕ್ಕಾಗಿ ದೇವರ ಬಳಿ ತಲುಪಲು ಕಠಿಣ ತಪ್ಪಸ್ಸು ಮಾಡಿದ. ದೇವರನ್ನು ಹುಡುಕಲು ಮುಂದಾದ ಸಿದ್ಧಾರ್ಥ ಮನುಷ್ಯರನ್ನು ತಲುಪಿದ. ಇತರರನ್ನು ಗೆಲ್ಲುವ ಮುನ್ನ ನಿನ್ನನ್ನು ನೀನು ಗೆಲ್ಲು. ಆಸೆಯೇ ದುಃಖಕ್ಕೆ ಕಾರಣ ಎಂದು ಹೇಳುವ ಮೂಲಕ ಪಂಚೇಂದ್ರೀಯಗಳನ್ನು ನಿಗ್ರಹಿಸಿದರೆ ಬದುಕಿನಲ್ಲಿ ಸುಖವಿದೆ ಎನ್ನುವುದನ್ನು ಜಗತ್ತಿಗೆ ಸಾರಿದನು ಎಂದು ತಿಳಿಸಿದರು.ಭಾರತದ ನೆಲದಲ್ಲಿ ಹುಟ್ಟಿ ಭರತ ಖಂಡದಾಚೆಗೂ ವಿಸ್ತರಿಸಿದ ಏಕೈಕ ಧರ್ಮ ಬೌದ್ಧ ಧರ್ಮ. ಸನಾತನ ಧರ್ಮಕ್ಕೆ ಹುಟ್ಟಿದ ಪರ್ಯಾಯ ಧರ್ಮವಲ್ಲ. ಬದಲಾಗಿ ಸನಾತನ ಧರ್ಮದ ಸಾರದ ತಳಹದಿಯ ಮೇಲೆ ಜಗತ್ತಿಗೆ ಕರುಣೆಯನ್ನು ಸಾಕ್ಷಾತ್ಕಾಕಾರಗೊಳಿಸಿದ, ಪ್ರೀತಿ ಮತ್ತು ಅಹಿಂಸೆಯ ಸಾರವನ್ನು ಜಗತ್ತಿಗೆ ಸಾರಿದ ಮಹಾನ್ ಜ್ಞಾನಿ ಗೌತಮ ಬುದ್ಧ ಜಗತ್ತಿನ ಬೆಳಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಗಗುರು ಎಸ್.ಎಂ.ಅಲ್ಲಮ ಪ್ರಭು, ಶಿಕ್ಷಕರಾದ ಕೆಂಬಾರೆಗೌಡ, ಲಕ್ಷ್ಮಣ್ ಗೌಡ, ಶಿಕ್ಷಣ ಸಂಯೋಜಕ ಸಿ.ವೀರಭದ್ರಯ್ಯ, ಶಿಕ್ಷಕಿ ಸಹನಾ ಅರುಣ್ ಕುಮಾರಗೌಡ, ಹೇಮಗಿರಿ ಶುಗರ್ಸ್ ನ ಇಂದ್ರಕುಮಾರ್, ರೇಷ್ಮೆ ಇಲಾಖೆಯ ಕೀರ್ತಿ, ಅಂಗಡಿ ಅಣಪ್ಪ, ರಶ್ಮಿ, ವಾಸು, ನಂದಿನಿ, ರೇಖಾಮಂಜು, ಸ್ಪಂಧನ,ಆದಂಜಾಕೀರ್, ಮಮತಾ ರೋಬೋಮಂಜು ಹಲವರು ಭಾಗವಹಿಸಿದ್ದರು.