ನಶಿಸಿ ಹೋಗುತ್ತಿರುವ ಕೆರೆಗಳನ್ನು ಉಳಿಸಿ ರೈತರ ಕೃಷಿ ಚಟುವಟಿಕೆ, ಪ್ರಾಣಿ, ಪಕ್ಷಿ, ಜಲಚರ ಜೀವಸಂಕುಲ ಉಳಿವು, ಅಂತರ್ಜಲ ವೃದ್ಧಿಸುವುದು ತಮ್ಮಯೋಜನೆ ಗುರಿಯಾಗಿದೆ. ಊರಿಗೊಂದು ದೇಗುಲದಷ್ಟೆ ಕೆರೆ ಮುಖ್ಯವಾಗಿದೆ. ಕೆರೆಗಳು ಗ್ರಾಮಾಭಿವೃದ್ಧಿಯ ಸಂಕೇತವಾಗಿದೆ. ಕೆರೆ ಒತ್ತುವರಿಯಾಗದಂತೆ, ಮಳೆ ನೀರು ಕೆರೆಗೆ ಸಂಗ್ರಹವಾಗುವಂತೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕೆರೆ-ಕಟ್ಟೆಗಳನ್ನು ಉಳಿಸಿ ಸಂರಕ್ಷಣೆ ಮಾಡಿದರೆ ನಾವುಗಳು ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಯೋಗೇಶ್ ಹೇಳಿದರು.

ತೆಂಗಿನಘಟ್ಟ ಗ್ರಾಮದ ಕೆರೆ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ನಮ್ಮೂರು ನಮ್ಮ ಕೆರೆ ಅಡಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕೆರೆಗಳನ್ನು ನಮ್ಮ ನಾಡಿನ ಆಸ್ತಿ. ರಾಜ್ಯಾದ್ಯಂತ ಸಂಸ್ಥೆಯಿಂದ 970 ಕೆರೆ ಪುನಶ್ಚೇತನ ಮಾಡಲಾಗಿದೆ ಎಂದರು.

ನಶಿಸಿ ಹೋಗುತ್ತಿರುವ ಕೆರೆಗಳನ್ನು ಉಳಿಸಿ ರೈತರ ಕೃಷಿ ಚಟುವಟಿಕೆ, ಪ್ರಾಣಿ, ಪಕ್ಷಿ, ಜಲಚರ ಜೀವಸಂಕುಲ ಉಳಿವು, ಅಂತರ್ಜಲ ವೃದ್ಧಿಸುವುದು ತಮ್ಮಯೋಜನೆ ಗುರಿಯಾಗಿದೆ. ಊರಿಗೊಂದು ದೇಗುಲದಷ್ಟೆ ಕೆರೆ ಮುಖ್ಯವಾಗಿದೆ. ಕೆರೆಗಳು ಗ್ರಾಮಾಭಿವೃದ್ಧಿಯ ಸಂಕೇತವಾಗಿದೆ. ಕೆರೆ ಒತ್ತುವರಿಯಾಗದಂತೆ, ಮಳೆ ನೀರು ಕೆರೆಗೆ ಸಂಗ್ರಹವಾಗುವಂತೆ ಮಾಡಬೇಕು ಎಂದರು.

ಕೆರೆ ಅಭಿವೃದ್ಧಿಗಾಗಿ ಸ್ಥಳೀಯ ಸಂಘ-ಸಂಸ್ಥೆ, ಗ್ರಾಮಸ್ಥರ ಸಹಭಾಗಿತ್ವ ಅವಶ್ಯ. ಕೆರೆ ಹೂಳು ತೆಗೆದು, ಸರಾಗವಾಗಿ ಮಳೆ ನೀರು ಕೆರೆಗೆ ಸೇರುವಂತೆ ಸಹಕರಿಸಬೇಕು. ಕೆರೆಯಲ್ಲಿ ನೀರಿದ್ದರೆ ಅಂರ್ತಜಲ ಹೆಚ್ಚಲಿದೆ. ರೈತರ ಕೃಷಿ ಭೂಮಿ ಹಸನಾಗಲಿದೆ ಎಂದರು.

ಜಲಚರ, ಪ್ರಾಣಿಪಕ್ಷಿಗಳ ಉಳಿವಿನ ಜೊತೆ ಜೀವ ವೈವಿಧ್ಯತೆ, ಪರಿಸರ, ಆಹಾರ ಸಮತೋಲನವಾಗಲಿದೆ. ಕೆರೆ ದಂಡೆಯಲ್ಲಿ ಹಣ್ಣಿನ ಗಿಡ ನೆಟ್ಟು ಕೆರೆ ಬದು ಬಲಪಡಿಸಬೇಕು. ಕೆರೆ ಅಭಿವೃದ್ಧಿ ಕಾಮಗಾರಿ ಮುಗಿದ ತರುವಾಯ ಕನಿಷ್ಟ 5 ವರ್ಷಗಳವರೆಗೆ ಈ ಕೆರೆಯ ಹೂಳು ತೆಗೆಯಬಾರದು ಎಂದರು.

ಗ್ರಾಮೀಣ ಪ್ರದೇಶದಲ್ಲಿನ ಕೆರೆಗಳನ್ನು ಪುನರುಜ್ಜೀವನಗೊಳಿಸುವುದು, ಕೆರೆಯಲ್ಲಿ ಮಳೆನೀರು ಸಂಗ್ರಹ ಹೆಚ್ಚಿಸಿ ಅಂರ್ತಜಲ ವೃದ್ಧಿಸುವುದು, ಕೆರೆ ದಂಡೆಗಳನ್ನು ಬಲಪಡಿಸಿ ಕೆರೆಯಲ್ಲಿ ನೀರಿನ ಸೋರುವಿಕೆ ತಡೆಗಟ್ಟುವುದು. ಹೂಳು ತೆಗೆದು ವರ್ಷಪೂರ್ತಿ ನೀರು ಇರುವಂತೆ, ರೈತ, ಜಲಚರ, ಪ್ರಾಣಿಪಕ್ಷಿಗಳು ಬದುಕಲು ಆಸರೆಯಾಗಲು ಯೋಜನೆ ಸದಾ ಬದ್ಧವಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಯೋಜನಾಧಿಕಾರಿ ಕೆ.ಪ್ರಸಾದ್ ಮಾತನಾಡಿ, ಕೆರೆ ಅಭಿವೃದ್ಧಿಗೆ ಸಂಸ್ಥೆಯೊಂದಿಗೆ ಗ್ರಾಮಸ್ಥರು, ರೈತರು ಕೈಜೋಡಿಸಿ ಕೆರೆಯ ಹೂಳು ತೆಗೆದುಕೊಂಡು ಕೃಷಿ ಭೂಮಿಗೆ ಹಾಕಬೇಕು. ಮೆಕ್ಕಲು ಮಣ್ಣು ಕೃಷಿ ಭೂಮಿಗೆ ಉತ್ತಮ ಫಲವತ್ತತೆಗೆ ಸಹಕಾರಿಯಾಗಿದೆ ಎಂದರು.

ಈ ವೇಳೆ ಕೆರೆ ಸಮಿತಿಯ ಮಹದೇಶ, ದೇವರಾಜು, ಕುಮಾರ್, ಒಕ್ಕೂಟ ಅಧ್ಯಕ್ಷೆ ಯಶೋದಾ, ಕೃಷಿ ಮೇಲ್ವಿಚಾರಕ ಕೆ.ಟಿ.ಪ್ರವೀಣ್, ಸೇವಾ ಪ್ರತಿನಿಧಿಗಳಾದ ವಿಜಯಾ, ಮಂಗ, ಅರ್ಚಕ ಮೂರ್ತಿ ಮತ್ತಿತರರಿದ್ದರು.