ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಠೇವಣಿ ಇಟ್ಟಿದ್ದ ಹಣ ಅವಧಿ ಮುಗಿದರೂ ಮರಳಿಸದ ಬ್ಯಾಂಕ್ಗೆ ಠೇವಣಿ ಹಣ, ದಂಡ ಸೇರಿದಂತೆ ₹97 ಸಾವಿರ ನೀಡುವಂತೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪೂರ ತಾಲೂಕಿನ ಹೊಸಳ್ಳಿ ಗ್ರಾಮದ ಮಂಜುನಾಥ ಕಾಂಬಳೆ ಎಂಬುವವರು ಆಗಿನ ದೇನಾ ಬ್ಯಾಂಕ್ನಲ್ಲಿ 1999ರ ಮಾರ್ಚ್ 3ರಂದು ₹5 ಸಾವಿರ ಖಾಯಂ ಠೇವಣಿ ಇಟ್ಟಿದ್ದರು. ಅದು 2010ರ ಮಾರ್ಚ್ 26ಕ್ಕೆ ಅವಧಿ ಮುಗಿದಿತ್ತು. ಈ ನಡುವೆ ಬ್ಯಾಂಕ್ ಆಫ್ ಬರೋಡಾದಲ್ಲಿ ದೇನಾ ಬ್ಯಾಂಕ್ ವಿಲೀನವಾಗಿತ್ತು. ಠೇವಣಿಗೆ ಶೇ. 10.5ರಷ್ಟು ಬಡ್ಡಿ ವಿಧಿಸಿ ನೀಡಬೇಕಿತ್ತು. ಮುಕ್ತಾಯದ ಮೌಲ್ಯವೂ ₹15635 ಆಗಿತ್ತು. 2010ರಲ್ಲಿ ಅವಧಿ ಮುಗಿದರೂ ನಂತರ ಆ ಹಣವನ್ನು ಮಾತ್ರ ಬ್ಯಾಂಕ್ ಆಫ್ ಬರೋಡಾ ನೀಡಿರಲಿಲ್ಲ.
ಹೀಗಾಗಿ 2023ರ ಮೇ 16ರಂದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆಯಾಗಿದೆ ಎಂದು ಆರೋಪಿಸಿ ಗ್ರಾಹಕ ಆಯೋಗಕ್ಕೆ ಠೇವಣಿದಾರ ದೂರು ಸಲ್ಲಿಸಿದ್ದರು. ಈ ದೂರನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಬ್ಯಾಂಕಿನಲ್ಲಿ ಸೇವಾ ನ್ಯೂನ್ಯತೆ ಆಗಿದೆ ಎಂದು ಅಭಿಪ್ರಾಯಪಟ್ಟರು.ದೂರುದಾರರ ಠೇವಣಿ ಹಣ ₹15635, ಅದರ ಮೇಲೆ 2023ರ ನವೆಂಬರ್ 30ರ ವರೆಗಿನ ಬಡ್ಡಿ ಹಣ ₹22299 ಸೇರಿ ₹37934 ತೀರ್ಪು ನೀಡಿದ ಒಂದು ತಿಂಗಳೊಳಗೆ ನೀಡಬೇಕು. ಬ್ಯಾಂಕಿನ ನಿರ್ಲಕ್ಷ್ಯ ಧೋರಣೆ ಮತ್ತು ಅದರಿಂದ ದೂರುದಾರರಿಗೆ ಆಗಿರುವ ತೊಂದರೆಗೆ ₹50 ಸಾವಿರ ಪರಿಹಾರ ಹಾಗೂ ₹10 ಸಾವಿರ ಪ್ರಕರಣದ ವೆಚ್ಚ ಸೇರಿ ಒಟ್ಟು ₹97934 ನೀಡಬೇಕೆಂದು ಬ್ಯಾಂಕ್ ಆಫ್ ಬರೋಡಾದ ಧಾರವಾಡ ಶಾಖೆಗೆ ಆದೇಶಿಸಿದೆ.