ಸಾರಾಂಶ
ಕೂಡ್ಲಿಗಿ: ತಾಲೂಕಾಡಳಿತ ಆಯೋಜಿಸಿದ್ದ ಶಾಸಕರ ಜನಸ್ಪಂದನಾ ಕಾರ್ಯಕ್ರಮಕ್ಕೆ ಸಾವಿರಕ್ಕೂ ಹೆಚ್ಚು ರೈತರು, ಕೂಲಿಕಾರ್ಮಿಕರು ಆಗಮಿಸುವ ಮೂಲಕ ಜನಸ್ಪಂದನೆ ಕಾರ್ಯಕ್ರಮ ಯಶಸ್ವಿಯನ್ನಾಗಿಸಿದರು.
ಸಹಸ್ರಾರು ತಾಲೂಕಿನ ರೈತರು ಜನಸ್ಪಂದನಾ ಕಾರ್ಯಕ್ರಮಕ್ಕೆ ತಮ್ಮ ಅಹವಾಲು ಹೊತ್ತು ತಂದಿರುವುದನ್ನು ನೋಡಿದರೆ ಇಲ್ಲಿಯವರೆಗೂ ತಾಲೂಡಳಿತ ಯಾಕೆ ಸಣ್ಣಪುಟ್ಟ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ ಎಂಬುದು ಪ್ರಜ್ಞಾವಂತರಿಗೆ ಗೊತ್ತಾಗುತ್ತದೆ. ತಾಲೂಕಾಡಳಿತ ವೈಫಲ್ಯ ಮರೆಮಾಚಲು ಈ ಜನಸ್ಪಂದನಾ ಕಾರ್ಯಕ್ರಮ ತೇಪೆ ಹಾಕುವ ಕಾರ್ಯ ಮಾಡಿದಂತಾಯಿತು.ತಾಲೂಕಿನ ಹೊಸಹಳ್ಳಿ ಹೋಬಳಿ ಕೇಂದ್ರದಲ್ಲಿ ಶನಿವಾರ ತಾಲೂಕಾಡಳಿತ, ತಾಪಂ ಸಹಯೋಗದಲ್ಲಿ ಆಯೋಜಿಸಲಾಗಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಬರೀ ಸಣ್ಣಪುಟ್ಟ ಸಮಸ್ಯೆಗಳನ್ನು ಜನತೆ ಮನವಿ ಮಾಡಿದ್ದನ್ನು ನೋಡಿದರೆ ಸ್ಥಳೀಯ ಗ್ರಾಪಂ ಆಡಳಿತ ಹಾಗೂ ತಾಲೂಕಾಡಳಿತ ವರ್ಷಗಟ್ಟಲೇ ರೈತರ ಸಮಸ್ಯೆಗಳಿಗೆ ಕಿವಿಯಾಗಿಲ್ಲ ಎಂಬುದು ತಿಳಿದು ಬಂದಿತು. ಜನತೆ ಹಲವು ವರ್ಷಗಳ ಸಮಸ್ಯೆ ಮೂಟೆ ಕಟ್ಟಿ ತಂದಿದ್ದರೂ ಕೇಳುವ ಸಮಯವಕಾಶ ಶಾಸಕರಿಗೆ ಜಿಲ್ಲಾಧಿಕಾರಿಗಳಿಗೆ ಸಿಕ್ಕಿದ್ದು ಅಷ್ಟಕ್ಕಷ್ಟೇ ಎನ್ನುವಂತಿತ್ತು. ಜನತೆಯ ನೂಕು ನುಗ್ಗಲು ಮೂಲಕ ಸಮಸ್ಯೆ ಜಿಲ್ಲಾಧಿಕಾರಿಗಳು, ಶಾಸಕರ ಮುಂದೆ ಹೇಳಿಕೊಂಡರು.
ಸ್ಥಳದಲ್ಲಿಯೇ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸುವಂತೆ ಹೇಳಿದರು. ಆದರೆ ಆ ಕೆಲಸಗಳು ಎಷ್ಟರಮಟ್ಟಿಗೆ ಬಗೆಹರಿಯುತ್ತವೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಶಾಸಕರು ಈ ಜನಸ್ಪಂದನಾ ಯಶಸ್ವಿಯಾಗಬೇಕಾದರೆ ಇಲಾಖಾವಾರು ತಲುಪಿರುವ ಅರ್ಜಿಗಳಿಗೆ ಪರಿಹಾರ ದೊರಕಿತೆ ಎನ್ನುವುದನ್ನು ತಿಳಿದುಕೊಳ್ಳಲು ಮತ್ತೊಂದು ಜನಸ್ಪಂದನಾ ಕಾರ್ಯಕ್ರಮ ಮಾಡಿ ಬಂದಿದ್ದ ಅರ್ಜಿಗಳಿಗೆ ಪರಿಹಾರ ನೀಡಿರುವ ಬಗ್ಗೆ ಜನತೆಗೆ ತಿಳಿಸಬೇಕು ಆಗ ಮಾತ್ರ ಜನಸ್ಪಂದನಕ್ಕೆ ಅರ್ಥ ಬರುತ್ತದೆ.ಕೂಡ್ಲಿಗಿ ಶಾಸಕ ಡಾ. ಎನ್.ಟಿ.ಶ್ರೀನಿವಾಸ್ ಮಾತನಾಡಿ, ಜನತೆಯ ಸಮಸ್ಯೆ, ಇತರೆ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳ ಹಾವಳಿಯಿಂದ ಜನರು ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು ಹಾಗೂ ಅನೇಕ ವರ್ಷಗಳಿಂದ ತಾತ ಮುತ್ತಾತರ ಕಾಲದಲ್ಲಿನ ಜಮೀನುಗಳನ್ನು ಪೋತಿ, ಪೋಡಿ ಮಾಡಿಕೊಳ್ಳುವ ಸಲುವಾಗಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರದ ಜನಸ್ಪಂದನ ಕಾರ್ಯ ಉಪಯೋಗವಾಗಿದೆ ಮತ್ತು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲ ಹೊಸಹಳ್ಳಿ ಹೋಬಳಿಯ ಅಭಿವೃದ್ಧಿಗೆ ₹20 ಕೋಟಿ ಅನುದಾನದಲ್ಲಿ ಅಂಗನವಾಡಿ ನೂತನ ಕಟ್ಟಡ, ಹಳೇ ಕಟ್ಟಡಗಳ ದುರಸ್ತೀಕರಣ, ಆಸ್ಪತ್ರೆಗಳ ಅಭಿವೃದ್ಧಿ ಮತ್ತು ಪಶು ಸಂಗೋಪನಾ ಆಸ್ಪತ್ರೆ ನಿರ್ಮಾಣ ಇತರೆ ಕಾರ್ಯಗಳಿಗೆ ಅನುದಾನ ಬಿಡುಗಡೆಯಾಗಿದ್ದು ಇಂದು ಭೂಮಿಪೂಜೆ ನೆರವೇರಿಸಿದ್ದೇನೆ, ಇನ್ನೂ ₹30ಕೋಟಿ ಅನುದಾನ ಟೆಂಡರ್ ಹಂತದಲ್ಲಿದ್ದು ಸದ್ಯದಲ್ಲೇ ಆ ಕಾರ್ಯಕ್ಕೂ ಚಾಲನೆ ದೊರೆಯುತ್ತದೆ ಎಂದರು.
74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮೇ ಕೊನೆ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ, ರೈತರ ಮೊಗದಲ್ಲಿ ಸಂತಸ ತರುವ ಕ್ಷಣಕ್ಕೆ ಸರ್ಕಾರ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಕಾರ್ಯಕ್ರಮ ಉದ್ಗಾಟಿಸಿದರು. ಕಾರ್ಯಕ್ರಮದಲ್ಲಿ ಡಿ.ವೈ.ಎಸ್.ಪಿ. ಮಲ್ಲೇಶ್ ದೊಡ್ಡಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.