ಜನಸ್ನೇಹಿ ಆಡಳಿತ, ಪ್ರಗತಿ ಕಡೆ ಗಮನಹರಿಸಬೇಕು: ಪ್ರಭುಲಿಂಗ

| Published : Nov 06 2023, 12:48 AM IST

ಸಾರಾಂಶ

ಸ್ತಿ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಗಿಯಲ್ಲಿ ರಾಜಿಯಾಗದೇ ಕೆಲಸ ನಿರ್ವಹಿಸಬೇಕು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ಥಳೀಯ ಸಂಸ್ಥೆಗಳ ಅಧಿಕಾರಿ, ನೌಕರರು ಜನರ ಕಷ್ಟಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರ ಅಹವಾಲು ಮತ್ತು ಕಷ್ಟಗಳಿಗೆ ಸ್ಪಂದಿಸಬೇಕು. ಆಸ್ತಿ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಗಿಯಂತಹ ಕೆಲಸಗಳನ್ನು ರಾಜಿಯಾಗದೇ ಗಟ್ಟಿಯಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಕಸ ನಿರ್ವಹಣೆ, ಪೌರ ಕಲ್ಯಾಣ ಸೇವೆಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬೇಕು. ನಗರ ಸ್ವಚ್ಛ ಮತ್ತು ಸುಂದರವಾಗಿದೆ ಎಂದರೆ ಅದಕ್ಕೆ ಕಾರಣ ಪೌರಕಾರ್ಮಿಕರು. ಪೌರಕಾರ್ಮಿಕರು ಇನ್ನೂ ಹೆಚ್ಚಿನ ಶ್ರದ್ಧೆಯಿಂದ ತಮ್ಮ ಕೆಲಸ ಮಾಡಬೇಕು. ಏನಾದರೂ ಬೇಡಿಕೆಗಳಿದ್ದಲ್ಲಿ ಪಾಲಿಕೆ ಅಥವಾ ತಮಗೆ ಸಲ್ಲಿಸಬಹುದು ಎಂದು ತಿಳಿಸಿದರು.

ಅನುದಾನ ಸದ್ಬಳಕೆಯಾಗಲಿ:

ಯಾವುದೇ ಯೋಜನೆಯ ಅಂದಾಜು ಪಟ್ಟಿಯನ್ನು ತಯಾರಿಸುವಾಗ ಮೂಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಬೇಕು. ಉಳಿಕೆ, ವ್ಯತ್ಯಾಸಗಳು ಆಗದಂತೆ ನೋಡಿಕೊಳ್ಳಬೇಕು. ಸಕಾಲಿಕವಾಗಿ ಪ್ರಸ್ತಾವನೆಗಳನ್ನು ನೀಡಿ ಅಪ್‍ಡೇಟ್ ಮಾಡಬೇಕು. 14ನೇ ಹಣಕಾಸು ಯೋಜನೆಯಡಿ ಇನ್ನೂ ಅನುದಾನ ಬಾಕಿ ಉಳಿಸಿಕೊಳ್ಳಲಾಗಿದೆ. 14ನೇ ಹಣಕಾಸು ಅನುದಾನ ಖರ್ಚು ಮಾಡಿದರೆ 15ನೇ ಹಣಕಾಸು ಬಿಡುಗಡೆಯಾಗುತ್ತದೆ. ನಿಗದಿತ ಅವಧಿಯೊಳಗೆ ಅನುದಾನ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಶೇ.50 ಕೆಲಸ ಮಾತ್ರ ಆಗಿದ್ದು, ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಸಮರ್ಪಕವಾದ ಪರಿಕರಗಳನ್ನು ನೀಡುವುದರೊಂದಿಗೆ ಪೌರ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅವರಿಗೆ ತಲುಪಿಸಬೇಕು ಎಂದರು.

ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ 3000 ಜಿ+2 ಮಾದರಿಯ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 624 ಮನೆಗಳು ಪೂರ್ಣಗೊಂಡು ಫಲಾನುಭವಿಗಳಿಗೆ ನೀಡಲಾಗಿದೆ. ಮುಂದಿನ ಮಾರ್ಚ್ ಒಳಗೆ 600 ಮನೆಗಳು ಪೂರ್ಣಗೊಳ್ಳಲಿವೆ. ಬ್ಯಾಂಕ್ ಸಾಲ ಸಮಸ್ಯೆಗೆ ಸಂಬಂಧಿಸಿದಂತೆ ಬ್ಯಾಂಕ್‍ನವರೊಂದಿಗೆ ಸಭೆಗಳನ್ನು ನಡೆಸಿ, ಪರಿಹರಿಸಲಾಗುತ್ತಿದೆ. ಗೋಪಿಶೆಟ್ಟಿಕೊಪ್ಪದಲ್ಲಿ 1836 ಜಿ +2 ಮನೆಗಳು ಮಂಜೂರಾಗಿದ್ದು, ಕಾಮಗಾರಿ ಸದ್ಯಕ್ಕೆ ಸ್ಥಗಿತವಾಗಿದೆ. ಮುಂದುವರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಮೃತ 2.0 ಯೋಜನೆಯಡಿ ನವುಲೆ, ತ್ಯಾವರೆಚಟ್ನಹಳ್ಳಿ, ಹರಿಗೆ, ಗೋಪಿಶೆಟ್ಟಿಕೊಪ್ಪದ ಕೆರೆ ಪುನಶ್ಚೇತನ- ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ನಗರದಲ್ಲಿ ಪಿಪಿಡಿ ಮಾದರಿಯಲ್ಲಿ ಹಳೆಯ ಬೀದಿದೀಪಗಳನ್ನು ಬದಲಾಯಿಸಿ, ಎಲ್‍ಇಡಿ ಬೀದಿದೀಪ ಅಳವಡಿಸಿ ಕೇಂದ್ರೀಕೃತ ಚಾಲನೆ ಮತ್ತು ನಿರ್ವಹಣೆ ಯೋಜನೆಯಡಿ 16495 ಬೀದಿದೀಪ ಅಳವಡಿಕೆ ಆಗಿದೆ. ಸ್ವಚ್ಛ ಭಾರತ ಅಭಿಯಾನ 1.0 ಜಾರಿಯಲ್ಲಿದ್ದು, ಅಬ್ಬಲಗೆರೆಯ ಕೈಬಿಡಲಾದ ಕ್ವಾರಿಯೊಂದರಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಉತ್ತಮವಾಗಿ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಡೇ-ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗ, ಸ್ವಸಹಾಯ ಸಂಘದ ಗುಂಪಿಗೆ ಸಾಲ, ಪ್ರದೇಶ ಮಟ್ಟದ ಒಕ್ಕೂಟ, ಬೀದಿ ಬದಿ ವ್ಯಾಪಾರಸ್ಥರಿಗೆ ಪಿಎಂ ಸ್ವನಿಧಿ ಆತ್ಮ ನಿರ್ಭರ್ ಯೋಜನೆಯಡಿ ಸಾಲ, ನಗರ ವಸತಿರಹಿತ ನಿರಾಶ್ರಿತರಿಗೆ ನಿರಾಶ್ರಿತರ ಕೇಂದ್ರ ಸ್ಥಾಪಿಸಲಾಗಿದೆ. ಪಿಎಂ ಸ್ವನಿಧಿ ಯೋಜನೆಯಡಿ 1ನೇ ಹಂತದಲ್ಲಿ 10 ಸಾವಿರ ರು., ಸಾಲವನ್ನು 5089 ಜನರಿಗೆ, ಎರಡನೇ ಹಂತದಲ್ಲಿ 20 ರು. ಸಾವಿರವನ್ನು 2299 ಮತ್ತು 3ನೇ ಹಂತದಲ್ಲಿ 382 ಜನರಿಗೆ ನಿಗದಿತ ಗುರಿಗಿಂತ ಹೆಚ್ಚಿನ ಸಾಲವನ್ನು ನೀಡಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿಗಳ ಎರಡು ಸ್ವಸಹಾಯ ಸಂಘಗಳನ್ನು ರಚಿಸಲಾಗಿದ್ದು, ವಸತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದರು.

ನಗರ ನೀರು ಸರಬರರಾಜು ಮಂಡಳಿ ಕಾರ್ಯಪಾಲಕ ಅಭಿಯಂತರ ಸಿದ್ದಣ್ಣ ಮಾತನಾಡಿ, ನಗರದಲ್ಲಿ 59 ಒಎಚ್‍ಟಿಗಳಿವೆ. ಗಾಜನೂರು ಜಲಾಶಯದಲ್ಲಿ ಒಳಹರಿವು ಕಡಿಮೆ ಇದ್ದು ಜನವರಿ, ಫೆಬ್ರವರಿವರೆಗೆ ನೀರು ಆಗಬಹುದು. ಆನಂತರ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದರು.

ಸಭೆಯಲ್ಲಿ ಡಿಯುಡಿಸಿ ಯೋಜನಾ ನಿರ್ದೇಶಕ ಮನೋಹರ್, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

- - - ಬಾಕ್ಸ್‌ಇನ್ನೆರಡು ಇಂದಿರಾ ಕ್ಯಾಂಟೀನ್‌ಗೆ ಪ್ರಸ್ತಾವನೆಶಿವಮೊಗ್ಗ ನಗರದಲ್ಲಿ 4 ಇಂದಿರಾ ಕ್ಯಾಂಟೀನ್‌ಗಳಿದ್ದು, ಇನ್ನೂ 2 ಕ್ಯಾಂಟೀನ್‌ಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆಯಲ್ಲಿ ಒಟ್ಟು 1,04,869 ಲಕ್ಷ ಆಸ್ತಿ ಇದ್ದು, ₹3674 ಲಕ್ಷ ಕರ ವಸೂಲಾತಿ ಆಗಿದೆ. ₹848 ಲಕ್ಷ ಬಾಕಿ ಉಳಿದಿದೆ. ಒಟ್ಟು ಶೇ.81.23 ಕರ ವಸೂಲಾತಿ ಆಗಿದೆ. 279 ಮಳಿಗೆಗಳು ಇದ್ದು ಶೇ 40.47 ವಸೂಲಾತಿ ಆಗಿದೆ. ಜಾಹಿರಾತು ತೆರಿಗೆ ವಸೂಲಾತಿ ಶೇ.75.13 ಆಗಿದೆ. 2 ಬಾರಿ ಉದ್ದಿಮೆ ಪರವಾನಗಿ ಮೇಳ ಮಾಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 2777 ಉದ್ದಿಮೆ ಪರವಾನಗಿ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದರು.

- - -

-5ಎಸ್‌ಎಂಜಿಕೆಪಿ01:

ಶಿವಮೊಗ್ಗದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮಾತನಾಡಿದರು.