ಬೇಸಿಗೆಯಲ್ಲಿ ಅಂಕೋಲಾದ ಅರಣ್ಯದ ಅಂಚಿನಲ್ಲಿ ಸಿಹಿ-ಹುಳಿ ರುಚಿಯ ಸಂಭ್ರಮ
ಅಳಿವಿನ ಅಂಚಿನಲ್ಲಿ ಅಪರೂಪದ ಕಾಡುಹಣ್ಣಿನ ಗಿಡಗಳುಕಾಡಿನ ಸೊಗಡಿನಲ್ಲಿ ಬೆಳೆದ ಔಷಧೀಯ ಹಣ್ಣುಗಳ ಸಂಭ್ರಮರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾಪಶ್ಚಿಮ ಘಟ್ಟದ ಕರಾವಳಿಯ ಅರಣ್ಯ ಪ್ರದೇಶದ ಅಂಚಿನಲ್ಲಿ ವಿಶೇಷವಾಗಿ ಕಂಡುಬರುವ ಕಾಡು ಹಣ್ಣು ಜಾತಿಗೆ ಸೇರಿದ ಔಷಧೀಯ ಗುಣವುಳ್ಳ ಬೆಸ್ಲೆಹಣ್ಣು, ಮುಳ್ಳು ಹಣ್ಣು, ಸೂಜಿ ಹಣ್ಣು ಹಾಗೂ ಸುರಗಿ ಹಣ್ಣುಗಳು ಗಮನ ಸೆಳೆಯುತ್ತಿದ್ದು, ಪ್ರವಾಸಿಗರು, ದಾರಿಹೋಕರು ಬಾಯಿ ಚಪ್ಪರಿಸುತ್ತಿದ್ದಾರೆ.
ಈ ಹಣ್ಣು ಬಹಳ ಸ್ವಾದಿಷ್ಟವಾಗಿದ್ದು, ಅಂಕೋಲಾದ ಶೇಡಿಕುಳಿಯ ಬಸಾಕಲಗುಡ್ಡ, ಶಿರೂರು, ನದಿ ಭಾಗ, ಬಿಳಿಹೊಯ್ಗಿಯ ಪ್ರದೇಶದಲ್ಲಿ ಹೇರಳವಾಗಿ ಕಂಡುಬರುವ ಈ ಹಣ್ಣನ್ನು ಇಷ್ಟ ಪಡದವರೇ ಇಲ್ಲ.
ಕಾರಿನಲ್ಲಿ ಹಾಗೂ ಬೈಕ್ನಲ್ಲಿ ತೆರಳುವವರು ಬಿಸಿಲಿನಿಂದ ಕ್ಷಣ ಕಾಲ ರಕ್ಷಣೆ ಪಡೆಯಲು ಮರದ ನೆರಳಿನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ತಮ್ಮ ಆಸೆ ತಣಿಯುವಷ್ಟು ಹಣ್ಣು ತಿಂದು, ದಣಿವಾರಿಸಿಕೊಂಡು ಪ್ರಯಾಣ ಮುಂದುವರಿಸುತ್ತಿರುವುದು ಸಾಮಾನ್ಯವಾಗಿದೆ.ಹಣ್ಣಿನ ಗುಣ ಲಕ್ಷಣಗಳು:
ಜನವರಿಯಲ್ಲಿ ಹೂ ಬಿಟ್ಟು ಚಳಿಗಾಲ ಮುಗಿಯುತ್ತಿದ್ದಂತೆ ಎತ್ತರವಾಗಿ ಬೆಳೆಯುವ ಸಸ್ಯದಲ್ಲಿ ಹೂಗಳು ಕಾಯಿಗಟ್ಟಲು ಆರಂಭವಾಗುತ್ತದೆ. ಬೇಸಿಗೆ ಪ್ರಾರಂಭವಾಗುವ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಬೀಳುವ ಮಳೆಯ ಬಳಿಕ ಕಾಯಿಗಳು ನಿಧಾನವಾಗಿ ಹಣ್ಣಾಗಲು ಪ್ರಾರಂಭವಾಗುತ್ತದೆ. ಈ ಹಣ್ಣುಗಳು ಸಿಹಿ-ಹುಳಿ ಮಿಶ್ರಿತವಾದ ರುಚಿಯಿಂದ ಕೂಡಿರುವ ಹಾಗೂ ಔಷಧೀಯ ಗುಣವುಳ್ಳ, ಸಣ್ಣಗಾತ್ರದ ಹಣ್ಣಾಗಿದೆ.ಔಷಧೀಯ ಗುಣಗಳು:ಮಳ್ಳುಹಣ್ಣಿನ ಸಸ್ಯ ಮನುಷ್ಯನ ವಿವಿಧ ರೋಗಗಳಿಗೆ ನಾಟಿ ಔಷಧಿಯಾಗಿ ಬಳಕೆಯಾಗುತ್ತದೆ. ಬಾಯಿಹುಣ್ಣು, ಚರ್ಮದ ರೋಗಗಳಿಗೆ, ಭೇದಿ ನಿಲ್ಲಲು ಈ ಸಸ್ಯದ ತೊಗಟೆಯ ಕಷಾಯ ರಾಮಬಾಣವಾಗಿದೆ. ಈ ಸಸ್ಯದ ಬಟಾಣಿ ಕಾಳಿನ ಗಾತ್ರದ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಪಿತ್ತಬಾಧೆ, ಮಲಬದ್ಧತೆ, ಮೈತುರಿಕೆಯನ್ನು ಶಮನ ಮಾಡುತ್ತದೆ.
ಹಣ್ಣಿನಲ್ಲಿ ವಿಟಮಿನ್ಗಳು, ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ಆ್ಯಂಟಿಆಕ್ಸಿಡೆಂಟ್ಗಳು ಅಧಿಕ ಪ್ರಮಾಣದಲ್ಲಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ವೈದ್ಯರು ಹೇಳುತ್ತಾರೆ.ಮಧುಮೇಹ ನಿಯಂತ್ರಣಕ್ಕೂ ಕಾಡು ಹಣ್ಣುಗಳು ಉಪಯುಕ್ತ ಎನ್ನಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಔಷಧೀಯವಾಗಿ ಬಳಸುವ ಪದ್ಧತಿಯೂ ಹಲವೆಡೆ ಕಂಡುಬರುತ್ತದೆ. ಜೀರ್ಣಕ್ರಿಯೆ ಸುಧಾರಣೆ, ರಕ್ತ ಶುದ್ಧೀಕರಣ ಹಾಗೂ ದೇಹದ ಉಷ್ಣತೆ ಕಡಿಮೆ ಮಾಡುವ ಗುಣವೂ ಈ ಹಣ್ಣಿಗೆ ಇದೆ.ಕಾಡು ಹಣ್ಣಿನ ಗಿಡ ನಾಶ
ಈ ಹಣ್ಣಿನ ವೈಶಿಷ್ಟ್ಯ ಅರಿವು ಬಾರದೇ ಇರುವವರು ಹಾಗೂ ನಗರೀಕರಣದ ವಿಸ್ತಾರದ ಭರಾಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಈ ಅಪರೂಪದ ಕಾಡು ಹಣ್ಣಿನ ಸಸ್ಯಸಂಕುಲ ನಾಶವಾಗುತ್ತಿದೆ. ಹತ್ತಾರು ವರ್ಷಗಳ ಹಿಂದೆ ಎಲ್ಲ ಊರುಗಳ ಅಕ್ಕಪಕ್ಕ ಈ ಹಣ್ಣು ಸಿಗುತ್ತಿತ್ತು. ಇದೀಗ ಹಣ್ಣಿಗಾಗಿ ದೂರದಲ್ಲಿ ಕಾಡುಗಳಿರುವ ಪ್ರದೇಶಕ್ಕೆ ತೆರಳಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.ಬಲು ಬೇಡಿಕೆಅಂಕೋಲಾದಲ್ಲಿ ಸಿಗುವ ವಿಶೇಷವಾದ ಸಿಗುವ ಕಾಡಿನ ಹಣ್ಣಿಗೆ ಬಲು ಬೇಡಿಕೆ ಇದೆ. ಇದನ್ನು ಅಂಕೋಲಾದ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯರು ಮಾರಾಟ ಮಾಡುತ್ತಿರುವುದು ಕಂಡು ಬರುತ್ತದೆ. ಬಸ್ನಲ್ಲಿ ಬರುವ ಪ್ರಯಾಣಿಕರು ಇದನ್ನು ಖರೀದಿಸಿ ಬಾಯಿ ಸಿಹಿ ಮಾಡಿಕೊಳ್ಳುತ್ತಿರುವುದು ಗಮನ ಸೆಳೆಯುತ್ತದೆ.