ಕನ್ನಡಪ್ರಭ ವಾರ್ತೆ ಸಿದ್ದಾಪುರ
ಮಲೆನಾಡಿಗೆ ಸಂಪರ್ಕ ಕಲ್ಪಿಸುವ ತಾಳಗುಪ್ಪಾ-ಹುಬ್ಬಳ್ಳಿ ರೈಲ್ವೆ ಯೋಜನೆ ಕುರಿತು ಶಿವಮೊಗ್ಗ ಸಂಸದರು ತೋರಿದ ಕಾಳಜಿಯನ್ನು ಉತ್ತರ ಕನ್ನಡದ ಸಂಸದರು ತೋರಿದ್ದರೆ ಇಷ್ಟೊತ್ತಿಗಾಗಲೇ ಯೋಜನೆ ಅನುಷ್ಠಾನಕ್ಕೆ ಬರುತ್ತಿತ್ತು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ₹2.35 ಕೋಟಿ ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮೂರು ಅವಧಿಯಲ್ಲಿ ಈ ಕ್ಷೇತ್ರದ ಶಾಸಕರಾಗಿದ್ದವರು ಜನರ ಪರವಾದ ಕಾಳಜಿ ತೋರದಿರುವುದೇ ಕನಿಷ್ಠ ಮೂಲಭೂತ ಸೌಲಭ್ಯದಿಂದ ಸಾರ್ವಜನಿಕರು ವಂಚಿತರಾಗುವಂತಾಗಿದೆ. ಕ್ಷೇತ್ರದಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಜನ ವಿಶ್ವಾಸವಿಟ್ಟು ಅವಕಾಶ ಕೊಟ್ಟಾಗ ಜನಪ್ರತಿನಿಧಿಗಳಾದವರು ಶಕ್ತಿಮೀರಿ ಕೆಲಸ ಮಾಡಬೇಕು. ಜನರ ಕಷ್ಟಕಾರ್ಪಣ್ಯದಲ್ಲಿ ಕಿಂಚಿತ್ತಾದರೂ ಭಾಗಿಯಾಗಬೇಕು. ನಮ್ಮ ಸಂಸದರು ಸಂಸತ್ತಿನಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದನ್ನು ಬಿಟ್ಟು ಮೌನವಾಗಿರುವುದು ಜನರ ಮೇಲಿರುವ ಕಾಳಜಿ ತೋರಿಸುತ್ತದೆ. ಶಿವಮೊಗ್ಗ ಸಂಸದರು ತಾಳಗುಪ್ಪ-ಹುಬ್ಬಳ್ಳಿ ರೈಲ್ವೆ ಯೋಜನೆ ಕುರಿತು ತೋರುತ್ತಿರುವ ಕಾಳಜಿಯನ್ನು ನಮ್ಮ ಸಂಸದರು ಒಮ್ಮೆಯೂ ತೋರ್ಪಡಿಸಿಲ್ಲ. ಎಷ್ಟೋ ಕಡೆ ಮಕ್ಕಳಿಗೆ ಶಾಲೆಗೆ ಹೋಗಬೇಕಾದ ಸಣ್ಣಪುಟ್ಟ ಪುಟ್ ಬ್ರಿಜ್ ಕೂಡ ಮಾಡಲಾಗದಷ್ಟು ನಿಷ್ಕ್ರೀಯ ಆಡಳಿತ ನಡೆಸಿರುವುದು ಪ್ರತಿ ನಿತ್ಯ ಬೆಳಕಿಗೆ ಬರುತ್ತಿವೆ. ಜತಗೆ ಬೇಡ್ತಿ-ಅಘನಾಷಿನಿ ಯೋಜನೆ ಕುರಿತು ಕೆಲವರು ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ. ಕ್ಷೇತ್ರದ ಜನತೆ ಇದ್ಯಾವುದಕ್ಕೂ ಕಿವಿಗೊಡದೇ ನಿಶ್ಚಿಂತೆಯಿಂದ ನಿಮ್ಮ ನಿಮ್ಮ ಕೆಲಸ ಮಾಡಿಕೊಳ್ಳಿ ಎಂದರು.ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ:
ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ₹2.35 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
₹20 ಲಕ್ಷ ವೆಚ್ಚದಲ್ಲಿ ತಾಲೂಕಿನ ಕೋಲಸಿರ್ಸಿ ಗ್ರಾಪಂ ವ್ಯಾಪ್ತಿಯ ಶಿರಸಿ ಸಿದ್ದಾಪುರ ಮುಖ್ಯ ರಸ್ತೆಯಿಂದ ಕುಣಜಿ ಗುಡ್ಡೆಕೇರಿ ರಸ್ತೆ, ₹20 ಲಕ್ಷ ವೆಚ್ಚದಲ್ಲಿ ಹಲಗಡಿಕೊಪ್ಪ ಊರ ಒಳಗಿನ ರಸ್ತೆ, ₹20 ಲಕ್ಷ ವೆಚ್ಚದಲ್ಲಿ ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಗೋಳಗೊಡು ಮುಖ್ಯ ರಸ್ತೆಯಿಂದ ಗೋಳಗೊಡು ವರೆಗೆ ರಸ್ತೆ, ₹20 ಲಕ್ಷ ವೆಚ್ಚದಲ್ಲಿ ಹಾರ್ಸಿಕಟ್ಟಾ ಮುಖ್ಯ ರಸ್ತೆಯ ಹೀನಗಾರ ಕ್ರಾಸ್ ನಿಂದ ಐದನಳ್ಳಿ ವರೆಗೆ ರಸ್ತೆ, ₹30 ಲಕ್ಷ ವೆಚ್ಚದಲ್ಲಿ ಬಿಳಗಿ ಗ್ರಾಪಂ ವ್ಯಾಪ್ತಿಯ ಆನೆಸಾಲು ಜೈನ ಬಸದಿ ಹೋಗುವ ರಸ್ತೆ, ₹20 ಲಕ್ಷ ವೆಚ್ಚದಲ್ಲಿ ಸಿದ್ದಾಪುರ ಕುಮಟಾ ಮುಖ್ಯ ರಸ್ತೆಯ ಹೊಸಮಂಜು ಕ್ರಾಸ್ ಇಂದ ಹೊಸಮಂಜು ಊರವರೆಗೆ ರಸ್ತೆ, ₹20 ಲಕ್ಷ ವೆಚ್ಚದಲ್ಲಿ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹೀರೆಕೈಗದ್ದೆ ಕ್ರಾಸ್ ಇಂದ ಹೂವಿನಮನೆ ಕಬ್ಬಗಾರ ಹೊನ್ನಮಾಂವ ರಸ್ತೆ, ₹20 ಲಕ್ಷ ವೆಚ್ಚದಲ್ಲಿ ತಾಲೂಕಿನ ಬೆಡ್ಕಣಿ ಗ್ರಾ.ಪಂ ವ್ಯಾಪ್ತಿಯ ಬೆಡ್ಕಣಿಯಿಂದ ಪೇಟೆಕೇರಿ ರಸ್ತೆ, ₹20 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಯಿಂದ ನಾಗರಬಾವಿ - ಜೋಗ ಮುಖ್ಯ ರಸ್ತೆಯವರೆಗೆ ರಸ್ತೆ, ₹25 ಲಕ್ಷ ವೆಚ್ಚದಲ್ಲಿ ಕಾನಸೂರು ಗ್ರಾಪಂ ವ್ಯಾಪ್ತಿಯ ಗವಿನಗುಡ್ಡದಿಂದ (ಕಿಲಾರ ಮಾರ್ಗವಾಗಿ) ಹಾರ್ಸಿಕಟ್ಟಾ ಮುಖ್ಯ ರಸ್ತೆಯವರೆಗೆ ರಸ್ತೆ,₹20 ಲಕ್ಷ ವೆಚ್ಚದಲ್ಲಿ ಮಾದನಕಳ್ ಕ್ರಾಸ್ ಇಂದ ಶ್ರೀನಗರದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ತಾಲೂಕಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಾಪಂ ಇಓ ದೇವರಾಜ ಹಿತ್ತಲಕೊಪ್ಪ, ಆಯಾ ಪಂಚಾಯಿತಿ ಪಿಡಿಓ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.