ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಚುನಾವಣಾ ಕರ್ತವ್ಯಗಳನ್ನು ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚನೆ ನೀಡಿದರು.ಲೋಕಸಭೆ ಚುನಾವಣೆ-2024ರ ಸಂಬಂಧ ವಿವಿಧ ವಿಷಯಗಳ ಕುರಿತು ಚರ್ಚಿಸಲು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಮಾದರಿ ನೀತಿ ಸಂಹಿಂತೆ ಜಾರಿ ಹಿನ್ನೆಲೆ ಕೊಪ್ಪಳ ಜಿಲ್ಲೆ ಸೇರಿದಂತೆ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಚೆಕ್ಪೋಸ್ಟ್ಗಳಲ್ಲಿ ನಿರಂತರವಾಗಿ ವಾಹನಗಳ ತಪಾಸಣೆ ನಡೆಸಿ ನಿಗಾ ವಹಿಸಲಾಗುತ್ತಿದೆ. ವಾಹನಗಳ ತಪಾಸಣೆ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ದಾಖಲೆ ಇಲ್ಲದ ಅಥವಾ ಅಕ್ರಮ ಹಣ ಹಾಗೂ ಇತರ ಸಾಮಗ್ರಿಗಳು ಪತ್ತೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕೇಸ್ ದಾಖಲಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಲೋಕಸಭಾ ಚುನಾವಣೆಗಾಗಿ ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಚುನಾವಣಾ ಪ್ರಚಾರಕ್ಕಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಪರವಾಗಿ ನೇಮಕವಾದ ಚುನಾವಣಾ ಏಜೆಂಟರು ಮಾತ್ರ ವಿವಿಧ ಅನುಮತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಬಗ್ಗೆ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಲ್ಲದೇ ಆಯಾ ವಿಧಾನಸಭಾ ಕ್ಷೇತ್ರವಾರು ನಡೆಯುವ ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಸಮಾವೇಶಗಳು, ಪ್ರಚಾರ ಕಾರ್ಯಕ್ರಮಗಳ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬೇಕು. ಈ ಹಿನ್ನೆಲೆ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಕುರಿತು ತೀವ್ರ ಕಟ್ಟೆಚ್ಚರವಿರಲಿ. ಅಬಕಾರಿ ಹಾಗೂ ಇತರ ಪ್ರಕರಣಗಳ ವರದಿಯನ್ನು ಪ್ರತಿನಿತ್ಯ ದಾಖಲಿಸಬೇಕು ಎಂದು ಹೇಳಿದರು.
85+ ವರ್ಷ ವಯೋಮಾನದ ಮತ್ತು ಪಿಡಬ್ಲೂಡಿ ಮತದಾರರ ಹೋಮ್ ವೋಟಿಂಗ್ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಇರಬೇಕು. ಮತದಾನ ಸಂದರ್ಭದಲ್ಲಿ ಗೌಪ್ಯತೆ ಕಾಪಾಡಿಕೊಳ್ಳಬೇಕು. ಉಳಿದ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಬೇಕು. ಒಟ್ಟಾರೆ ಈ ಮತದಾನ ಪ್ರಕ್ರಿಯೆಯನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಿಯಮಾನುಸಾರ ಕೈಗೊಳ್ಳಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಅರ್ಹ ಮತದಾರರಿಗೆ ವೋಟರ್ ಸ್ಲಿಪ್ ವಿತರಿಸಲು ಆಯಾ ಮತಗಟ್ಟೆಗಳ ಬಿ.ಎಲ್.ಓ.ಗಳಿಗೆ ಸೂಚನೆ ನೀಡಬೇಕು. ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ನೆರಳು, ಕುಡಿಯುವ ನೀರಿನ ವ್ಯವಸ್ಥೆ, ರ್ಯಾಂಪ್, ಶೌಚಾಲಯ ವ್ಯವಸ್ಥೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಪಿ.ಆರ್.ಓ., ಎ.ಪಿ.ಆರ್.ಓ ಹಾಗೂ ಪಿ.ಓ.ಗಳಿಗೆ 2ನೇ ತರಬೇತಿಯಲ್ಲಿ ವಿವರವಾಗಿ ಮಾಹಿತಿ ನೀಡಿ, ಅವರಿಗೆ ಅನುಮಾನ ಇದ್ದರೆ, ಸರಳವಾಗಿ ಬಗೆಹರಿಬೇಕು. ಮತದಾನದ ದಿನ ಹಾಗೂ ಡಿಮಸ್ಟರಿಂಗ್ ಮಾಡಲು ಎದುರಾಗುವ ಸಮಸ್ಯೆಗಳ ಕುರಿತು 20 ರಿಂದ 25 ಪ್ರಶ್ನೆಗಳನ್ನು ಗುರುತಿಸಿ ತರಬೇತಿಯಲ್ಲಿ ಟೆಸ್ಟ್ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಸೇರಿದಂತೆ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರರು, ತಾಪಂ ಇಒಗಳು, ಪೊಲೀಸ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.