ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಶಿಕ್ಷಕರು ತಮ್ಮ ವೃತ್ತಿಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಋಣ ಮುಕ್ತರಾಗಬೇಕು. ಮಕ್ಕಳ ಜ್ಞಾನಾರ್ಜನೆಗೆ ಅಮೂಲ್ಯ ಕೊಡುಗೆ ಸಲ್ಲಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಿವಿಮಾತು ಹೇಳಿದರು.ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಹುಕ್ಕೇರಿ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಬೆಳ್ಳಿಹಬ್ಬದ ಮಹೋತ್ಸವ ಮತ್ತು ಸಂಸ್ಥೆಯ ಮೇಲಂತಸ್ತಿನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಶಿಕ್ಷಕರು ಸಂಘಟಿತರಾಗಿ ಹೋರಾಡಿದ ಪ್ರತಿಫಲವಾಗಿ ಇಂದಿನ ಶಿಕ್ಷಕರು ನೆಮ್ಮದಿಯಲ್ಲಿದ್ದಾರೆ. ಆದರೆ ಇಂದಿನ ಶಿಕ್ಷಕರಿಗೆ ಸಂಘಟನೆ ಹೋರಾಟ ಬಗ್ಗೆ ಆಸಕ್ತಿ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯಲ್ಲಿ ಭ್ರ್ರಷ್ಟಾಚಾರ ತಾಂಡವಾಡುತ್ತಿದೆ. ಅಂದು ಇಂದಿನ ಶಿಕ್ಷಕರ ನಡುವೆ ವೇತನ ಹಾಗೂ ಬೋಧಿಸುವ ಶಿಕ್ಷಣದಲ್ಲಿ ಬಹಳ ವ್ಯತ್ಯಾಸವಿದೆ. ಇಂದು ಮಕ್ಕಳಿಗೂ, ಶಿಕ್ಷಕರಿಗೂ ಎಲ್ಲ ಸೌಲಭ್ಯಗಳಿದ್ದರೂ ಮಕ್ಕಳ ಫಲಿತಾಂಶದ ಸುಧಾರಣೆಯಲ್ಲಿ ಪ್ರಗತಿ ಕಾಣುತ್ತಿಲ್ಲ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಕಾಲೇಜುಗಳ ಶಿಕ್ಷಕರು ಒಬ್ಬರ ಮೇಲೆ ಒಬ್ಬರು ಅಪವಾದ ಹೊರಿಸುವುದು ಹೆಚ್ಚಾಗಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳದೆ ಇದ್ದರೆ ಭವಿಷ್ಯದಲ್ಲಿ ನಿಮ್ಮ ಮಕ್ಕಳಿಗೆ ಶಾಪ ತಟ್ಟುತ್ತದೆ ಎಂದು ಹೇಳಿದರು.ಶಿಕ್ಷಕ ಸಮುದಾಯದ ಆರ್ಥಿಕ ಬೆನ್ನೆಲುಬಾಗಿ ನಿಂತಿರುವ ಹುಕ್ಕೇರಿ ಮಾಧ್ಯಮಿಕ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘದ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದೆ. ಸಂಸ್ಥಾಪಕ ಎಸ್.ಐ.ಸಂಬಾಳ ನೇತೃತ್ವದಲ್ಲಿ ಕಳೆದ 25 ವರ್ಷಗಳಿಂದ ಈ ಭಾಗದ ಶಿಕ್ಷಕರ ಜೀವನಾಡಿಯಾಗಿ ಸೇವೆ ಸಲ್ಲಿಸುತ್ತಿದೆ. ಇದರೊಂದಿಗೆ ಮಾಧ್ಯಮಿಕ ಶಾಲಾ ನೌಕರರ ಸರ್ವಾಂಗೀಣ ಆರ್ಥಿಕ ಪ್ರಗತಿಗೆ ಸದಾಕಾಲ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಸಿ.ಎಂ.ದರಬಾರೆ ಅಧ್ಯಕ್ಷತೆ ವಹಿಸಿದ್ದರು. ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಉಳ್ಳಾಗಡ್ಡಿ ಖಾನಾಪುರ ಬ್ರಹನ್ಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಅಧ್ಯಕ್ಷ ಇಮ್ರಾನ ಮೋಮಿನ್, ಸದಸ್ಯ ಎ.ಕೆ.ಪಾಟೀಲ, ಬಿಇಒ ಪ್ರಭಾವತಿ ಪಾಟೀಲ, ಸಂಘದ ಉಪಾಧ್ಯಕ್ಷ ಜಿ.ಎಚ್.ಮುತಾಲಿಕ, ನಿರ್ದೇಶಕರಾದ ಎಸ್.ಜೆ.ಕುಪ್ಪಾನಟ್ಟಿ, ಎಸ್.ಸಿ.ಮಾನಗಾಂವಿ, ಆರ್.ಬಿ.ನೂಲಿ, ಎಸ್.ಡಿ.ಬಾಗೇವಾಡಿ, ಆರ್.ಎ.ಬಡಿಗೇರ, ಬಿ.ಎಸ್.ನಾಗನೂರಿ, ಜೆ.ಎನ್.ಪಾಟೀಲ, ಎನ್.ಬಿ.ಕುಲಕರ್ಣಿ, ಸಲಹಾ ಸಮಿತಿಯ ಪಿ.ಎಸ್.ಹತ್ತಿ, ಬಿ.ಕೆ.ಯರಗಟ್ಟಿ, ಸಹ ಕಾರ್ಯದರ್ಶಿ ಲಕ್ಷ್ಮಿ ಮಠಪತಿ, ಕಾರ್ಯದರ್ಶಿ ಎಸ್.ಬಿ.ಅಡಿವೆಪ್ಪನಮಠ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.